Sunday, July 5, 2020

ಗುರುಪೂರ್ಣಿಮೆ : ಮಹಾಋಷಿ ವೇದವ್ಯಾಸರ ಅರ್ಥಪೂರ್ಣ ಜನ್ಮದಿನ


ಗುರುಪೂರ್ಣಿಮೆ

ಮಹಾಋಷಿ ವೇದವ್ಯಾಸರ ಅರ್ಥಪೂರ್ಣ ಜನ್ಮದಿನ 

ಇಂದು ೫ನೇ ಜುಲೈ ೨೦೨೦ರಂದು ಭಾನುವಾರ “ಗುರುಪೂರ್ಣಿಮೆ”ಯನ್ನು ಆಚರಿಸುತ್ತಿದ್ದೇವೆ. ಆದರೆ, ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೇ ಈಬಾರಿ ಗುರುಪೂರ್ಣ್ಮೆಯನ್ನು ಆಚರಿಸುತ್ತಿದ್ದಾರೆ.

ಕ್ಷೀರಸಮುದ್ರವಾಸಿಯಾದ ಶ್ರೀವೈಕುಂಠಾಧಿಪತಿ ಶ್ರೀಮನ್ನಾರಾಯಣನ ಅವತಾರವೇ ಎನಿಸಿದ ಮಹಾತಪಸ್ವಿ “ಮಹಾಋಷಿ ವೇದವ್ಯಾಸ”ರ ಜನ್ಮದಿನವನ್ನೇ “ಗುರುಪೂರ್ಣಿಮೆ”ಯ ದಿನವನ್ನಾಗಿ ಆಚರಿಸುವ ಪ್ರಾಚೀನ ವೈದಿಕ ಪದ್ಧತಿ ಇಂದಿಗೂ ಬಳಕೆಯಲ್ಲಿದ್ದು, ಜಗತ್ತಿನೆಲ್ಲೆಡೆ ಇರುವ ವಿವಿಧ ವೈದಿಕ ಮಠಗಳ ಮಠಾಧಿಪತಿಗಳು ಈ ಮಹತ್ವದ ದಿನದಂದು “ವ್ಯಾಸಪೂಜೆ” ನೆರವೇರಿಸಿ ತಮ್ಮ “ಚಾತುರ್ಮಾಸ್ಯ ವೃತ”ವನ್ನು ಆರಂಭಿಸುವುದು ಒಂದು ಪ್ರಾಚೀನ ಸಂಪ್ರದಾಯವೂ ಹೌದು.
ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅತ್ಯಂತ ಸಂಕೀರ್ಣ ಜೀವನಪದ್ಧತಿ ಎನಿಸಿರುವ ಹಿಂದೂ ವೈದಿಕ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಜೀವನಾದರ್ಶಗಳನ್ನು ನಾಲ್ಕು ಚತುರ್ವೇದಗಳನ್ನಾಗಿಯೂ, ನಾಲ್ಕು ಉಪವೇದಗಳನ್ನಾಗಿಯೂ ವಿಂಗಡಿಸಿದ್ದೇ ಆಲದೆ ೧೮ ಪುರಾಣಗಳನ್ನು ರಚಿಸಿ ನೀಡಿದ ಮಹಾತಪಸ್ವಿ – ಮಹಾಗುರು “ಮಹರ್ಷಿ ವೇದವ್ಯಾಸ”ರು. ಪ್ರಾಚೀನ ವೇದಕಾಲದಿಂದ ಹಿಡಿದು ಇಂದಿಗೂ ಪ್ರಸ್ತುತರಾದ ಶ್ರೀಗಳು ಜನನ - ಮರಣಗಳನ್ನು ಗೆದ್ದ ಅಮರರು. ಹಾಗಾಗಿ ಇಂದಿಗೂ ಭರತಖಂಡದ ಸಕಲ ವೈದಿಕ ವೃಂದದ ಆಂತರ್ಯದಲ್ಲಿ ಇರುವವರು ಇವರು.

ಈ ಮಹಾಮಹಿಮ ಮಹಾಋಷಿ ವೇದವ್ಯಾಸರ ಪೂರ್ಣನಾಮ “ಶ್ರೀಕೃಷ್ಣ ದ್ವೈಪಾಯನ ವ್ಯಾಸ” ಎಂದು. ಇವರ ಮೈಬಣ್ಣ ಕಪ್ಪಾಗಿರುವುದರಿಂದ “ಶ್ರೀಕೃಷ್ಣ” ಎಂದೂ, ಕಲ್ಪಿ ಎಂಬ “ದ್ವೀಪ”ದಲ್ಲಿ ಜನಿಸಿದ್ದರಿಂದ “ದ್ವೈಪಾಯನ” ಎಂದೂ, ಪವಿತ್ರ ಕ್ಷೇತ್ರ ಬದರೀಕಾಶ್ರಮದಲ್ಲಿ ವಾಸಿಸುತ್ತಿದ್ದುದರಿಂದಾಗಿ “ಬಾದರಾಯಣ”ರೆಂದೂ ಕರೆಯಲ್ಪಡುವ ಇವರು ವೇದಗಳನ್ನೂ - ಉಪವೇದಗಳನ್ನೂ ಜಗತ್ತಿಗೆ ನೀಡಿರುವುದರಿಂದ “ವೇದವ್ಯಾಸ”ರೆಂದೇ ಜಗತ್ತಿಗೆ ಚಿರಪರಿಚಿತರು.

ಇವರು ಮಹಾಋಷಿ ಪರಾಶರ ಹಾಗೂ ಸತ್ಯವತಿಯರ ಸುಪುತ್ರರು. ಇಡೀ ಮಹಾಭಾರತವನ್ನು ಕಣ್ಣಾರೆ ಕಂಡವರು. ಮಹಾಭಾರತಕ್ಕಿಂತ ಆದಿಯಲ್ಲಿಯೇ ಜನಿಸಿ, ಮಹಾಭಾರತದ ಕಾಲದುದ್ದಕ್ಕೂ ಪ್ರತಿಯೊಂದು ಘಟನೆಯನ್ನೂ ಕಣ್ಣಾರೆ ಕಂಡು, ಅಗತ್ಯವಿದ್ದಾಗಲೆಲ್ಲಾ ಪಾಂಡವ – ಕೌರವರಿಗೆ ಮಾರ್ಗದರ್ಶನ ನೀಡಿ, ಬುದ್ಧಿವಾದಗಳನ್ನು ಹೇಳಿ, ಸೃಷ್ಠಿಕರ್ತ ಬ್ರಹ್ಮದೇವನ ಆಶಯದಂತೆ ಇಡೀ ಮಹಾಭಾರತ ಮಹಾಕಾವ್ಯವನ್ನು ಭಗವಾನ್ ಗಣಪತಿಯಿಂದ ಬರೆಸಿ ಜಗತ್ತಿಗೆ ನೀಡಿದ ಮಹಾನುಭಾವರಿವರು.

“ವೇದವ್ಯಾಸ ಜಯಂತಿ”ಯೂ ಹಾಗೂ “ಗುರುಪೂರ್ಣಿಮೆ”ಯೂ ಆದ ಇಂದು ಈ ಮಹಾಮಹಿಮ ವೈದಿಕ ಗುರುಗಳು ಬಾಳಿ-ಬದುಕಿದ ಶ್ರೀಕ್ಷೇತ್ರಗಳನ್ನು ಒಮ್ಮೆ ಸಂದರ್ಶಿಸೋಣ ಬನ್ನಿ.

ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರಳೆನಿಸಿರುವ ಬದರೀನಾಥ – ಕೇದಾರನಾಥ ಯಾರಿಗೆ ಗೊತ್ತಿಲ್ಲ ಹೇಳಿ ? ಪವಿತ್ರ ಕ್ಷೇತ್ರ ಬದರೀನಾಥದಿಂದ ಸ್ವಲ್ಪವೇ ದೂರದಲ್ಲಿರುವ ಶ್ರೀಕ್ಷೇತ್ರ “ಆದಿ ಬದರಿ”. ಇಲ್ಲಿಯೇ ಸಮೀಪದಲ್ಲಿ ಅನೇಕಾನೇಕ ವೇದಕಾಲೀನ ಘಟನೆಗಳಿಗೆ ಸಾಕ್ಷೀಭೂತವಾದ ಪವಿತ್ರ ಸರಸ್ವತೀ ನದಿ ಹರಿಯುತ್ತಿದೆ. ಈ ಪ್ರದೇಶದಲ್ಲಿಯೇ “ವ್ಯಾಸಗುಹೆ” (ವ್ಯಾಸ ಗುಹಾ) ಎನ್ನುವ ಗುಹೆಯಿದ್ದು ಇಲ್ಲಿ ಪ್ರತಿದಿನವೂ ಮಹಾಋಷಿ ವೇದವ್ಯಾಸ ಪೂಜಿಸಲ್ಪಡುತ್ತಾರೆ. ಹೊರಗಿನಿಂದ ಆಧುನಿಕ ಮನೆಯಂತೆ ಕಂಡರೂ ಒಳಗಿನಿಂದ ಇಂದಿಗೂ ಗುಹಾರೂಪದಲ್ಲಿರುವ ಈ ಗುಹೆಯಲ್ಲಿಯೇ ಶ್ರೀ ವೇದವ್ಯಾಸರು ತಪಸ್ಸನ್ನಾಚರಿಸಿದ್ದರು ಎಂಬ ಐತಿಹ್ಯವಿದೆ.

ಬಹುಷಃ ಮಹಾಋಷಿ ವೇದವ್ಯಾಸರ ಸುಪುತ್ರರೂ, ಮಹಾಋಷಿಗಳೂ ಆಗಿದ್ದ ಶುಕಮುನಿಗಳೂ, ಇವರ ಪುನರವತಾರವೆಂದೇ ಪ್ರಸಿದ್ಧರಾದ ಪರಮಗುರು ಗೌಡಪಾದಾಚಾರ್ಯರೂ ಹಾಗೂ ಗೌಡಪಾದಾಚಾರ್ಯರ ಪ್ರಿಯಶಿಷ್ಯರೂ ಆದ ಗೋವಿಂದ ಭಗವತ್ಪಾದರೂ ಇದ್ದಿದ್ದು ಇದೇ ಗುಹೆಯಲ್ಲಿರಬಹುದು. ಇದು ನಿಜವಾದರೆ ಆದಿಗುರು ಶ್ರೀ ಶಂಕರಾಚಾರ್ಯರಿಗೆ ಅವರ ಗುರು ಶ್ರೀ ಗೋವಿಂದ ಭಗವತ್ಪಾದರು ಸನ್ಯಾಸದೀಕ್ಷೆ ನೀಡಿದ್ದೂ ಇದೇ ಗುಹೆಯಲ್ಲಿರಬಹುದೇನೋ ?

ಸರಿಸುಮಾರು ಇದೇ ಪ್ರದೇಶದಲ್ಲೇ ಇಂಥದ್ದೇ ಮತ್ತೊಂದು ಪ್ರಾಚೀನ ಗುಹೆಯಿದ್ದು ಇದನ್ನು “ಗಣೇಶ ಗುಹಾ” ಎಂದೇ ಕರೆಯುತ್ತಿದ್ದು, ಮಹಾಋಷಿ ವೇದವ್ಯಾಸರು ಭಗವಾನ್ ಗಣಪತಿಯಿಂದ ಮಹಾಭಾರತ ಮಹಾಕಾವ್ಯವನ್ನು ಬರೆಸಿದ್ದೂ ಇಲ್ಲೇ ಎಂಬ ಪ್ರಾಚೀನ ಐತಿಹ್ಯವಿದೆ.

ಉತ್ತರ ಭಾರತದ ವೇದಕಾಲೀನ ಸರಸ್ವತೀ ನದೀತೀರದಲ್ಲಿ ಬಾಳಿಬದುಕಿದ್ದ ವೈದಿಕ ಜನಾಂಗವೆನಿಸಿದ “ಗೌಡ ಸಾರಸ್ವತ ಬ್ರಾಹ್ಮಣ” (ಜಿ.ಎಸ್.ಬಿ.) ಸಮುದಾಯದವರ ಮೂರು ಗುರುಮಠಗಳಲ್ಲಿ ಒಂದಾದ ಪ್ರಾಚೀನ ಶ್ರೀಕಾಶೀಮಠದ ಆರಾಧ್ಯದೇವರೂ “ಶ್ರೀವ್ಯಾಸ ರಘುಪತಿ” ಎಂಬ ಹೆಸರಿನಲ್ಲಿರುವ “ಶ್ರೀ ವೇದವ್ಯಾಸ”ರೇ. ಈ ಕಾಶೀಮಠದ ಬ್ರಹ್ಮೈಕ್ಯ್ಯ ಶ್ರೀಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಶ್ರೀಪಾದಂಗಳವರು ಮಹಾಋಷಿ ವೇದವ್ಯಾಸರು ಜನ್ಮತಾಳಿದ “ಕಲ್ಪಿ” ಎಂಬ ದ್ವೀಪದಲ್ಲಿ “ವೇದವ್ಯಾಸ ಮಂದಿರ”ವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಶ್ರೀಶ್ರೀಗಳವರ ಶುಭಾಶೀರ್ವಾದಗಳಿಂದಾಗಿಯೇ ನಮ್ಮ ಶಿವಮೊಗ್ಗದ ಜಿ.ಎಸ್.ಕೆ.ಎಂ. ರಸ್ತೆಯಲ್ಲಿ ಶಿವಮೊಗ್ಗ ಗೌಡಸಾರಸ್ವತ ಸಮಾಜಕ್ಕೆ ಸೇರಿದ ಬೃಹತ್ ಶ್ರೀಲಕ್ಷ್ಮೀ ವೆಂಕಟರಮಣ ದೇವಮಂದಿರವೂ ನಿರ್ಮಾಣಗೊಂಡಿರುವುದು ಸ್ತುತ್ಯರ್ಹ.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ನಮ್ಮ ಹುಟ್ಟಿನಿಂದ ಇಂದಿನವರೆಗೂ ವಿವಿಧ ಹಂತಗಳಲ್ಲಿ ನಮ್ಮನ್ನು ಕೈಹಿಡಿದು ದಾಟಿಸಿದ ಎಲ್ಲಾ ಗುರುಗಳನ್ನೂ ನೆನೆಯುತ್ತಾ ಮಹಾಗುರು ಶ್ರೀ ವೇದವ್ಯಾಸರಿಂದಲೇ ರಚಿಸಲ್ಪಟ್ಟ ಶ್ರೀವಿಷ್ಣುಸಹಸ್ರನಾಮವನ್ನೋ ಅಥವಾ ಶ್ರೀಮದ್ ಭಗವದ್ಗೀತೆಯನ್ನೋ ಪಾರಾಯಣಮಾಡುವ ಮೂಲಕ ನಮ್ಮ ನಮ್ಮ ಮನೆಗಳಲ್ಲಿಯೇ “ವ್ಯಾಸಪೂರ್ಣಿಮೆ”ಯನ್ನು ಅರ್ಥಪೂರ್ಣವಾಗಿ ಆಚರಿಸೋಣ.

ಶ್ರೀವೇದವ್ಯಾಸರಾದಿಯಾಗಿ ಎಲ್ಲ ಶ್ರೀಗುರುಗಳೂ ನಿಮ್ಮೆಲ್ಲರನ್ನೂ ಹರಸಲಿ ಮತ್ತು ಕೊರೋನಾ ಮಹಾಮಾರಿಯ ಉಪಟಳದಿಂದ ಈ ಜಗತ್ತನ್ನು ಪಾರುಮಾಡಲಿ.

ಸಚಿತ್ರ ಲೇಖನ : ಸತೀಶ್ ನಾಯಕ್, ಶಿವಮೊಗ್ಗ

Tuesday, May 5, 2020

ಅಳತೆ ಉಪಕರಣಗಳ ಪರಿಚಯ

ಪೀಠಿಕೆ: ತಲೆತಲಾಂತರಗಳ ಅನುಭವದ ಆಧಾರದ ಮೇಲೆ, ಉದ್ದಳೆತಗಳನ್ನು ಮಾಡುವ ವಿಧಾನಗಳು ಅಭಿವೃದ್ಧಿಗೊಂಡಿವೆ. ಇಂದು ಲಭ್ಯವಿರುವ ವಿಧಾನಗಳನ್ನು ಬಳಸಲು ಬೇಕಾದ ಉಪಕರಣಗಳು ಹಲವು. ಅಳತೆ ವಿಧಿವಿಧಾನ ಅರಿಯುವ ಮುನ್ನ ಈ ಉಪಕರಣಗಳನ್ನು ಪರಿಚಯ ಮಾಡಿಕೊಳ್ಳುವುದು ಸೂಕ್ತ.

ಕಲಿಕೆಯ ಉದ್ದೇಶ:

ಈ ಭಾಗದ ಅಧ್ಯಯನದ ನಂತರ ವಿದ್ಯಾರ್ಥಿಗಳು ಕೆಳಗಿನ ಕೌಶಲ್ಯಗಳನ್ನು ಕಲಿಯಬೇಕೆಂಬುದು ಆಶಯ.
ಅ) ಜಮೀನಿನ ಅಳತೆಗೆ ಬೇಕಾಗುವ ಉಪಕರಣಗಳನ್ನು ಗುರುತಿಸುವುದು.
ಆ) ಜಮೀನಿನ ಅಳತೆಗೆ ಬೇಕಾಗುವ ಉಪಕರಣಗಳ ಬಳಸುವ ಕೌಶಲ್ಯ

ಉಪಕರಣಗಳು

ಸರಪಳಿ(ಚೈನ್) ಮತ್ತು ಟೇಪು

ಸರಪಳಿ: ಗಟ್ಟಿಯಾದ ಉಕ್ಕಿನ ತಂತಿಯಿಂದ ಸರಪಳಿ ತಯಾರಿಸುತ್ತಾರೆ. ಸರಪಳಿಯಲ್ಲಿ ಲಿಂಕ್ ಗಳಿರುತ್ತವೆ. ಒಂದು ಲಿಂಕಿಗೂ ಇನ್ನೊಂದು ಲಿಂಕಿಗೂ ಜೋಡಿಸಲು 3 ಸಣ್ಣ ವ್ಯಾಸದ ಉಂಗುರಗಳಿರುತ್ತವೆ. ಸರಪಳಿಯ ಎರಡೂ ಕೊನೆಗಳಲ್ಲಿ ಹಿತ್ತಾಳೆ ಹಿಡಿ ಇರುತ್ತವೆ. ಅಳತೆ ಮಾಡುವಾಗ ಲಿಂಕ್ ಎಣಿಸಲು ಅನುಕೂಲವಾಗುವಂತೆ ತಾಳಿ/ಟ್ಯಾಲಿಗಳಿರುತ್ತವೆ.






ಸರಪಳಿ ವಿಧಗಳು

ಅಳತೆ ಮಾನಕಕ್ಕೆ ಅನುಗುಣವಾಗಿ ನಾಲ್ಕು ತರಹದ ಸರಪಳಿಗಳನ್ನು ಬಳಸುವರು.
    1. ಗುಂಟರ್ ಸರಪಳಿ: ಈ ಸರಪಳಿ 66 ಅಡಿ ಉದ್ದವಿದ್ದು 100 ಲಿಂಕ್ ಗಳಿರುತ್ತವೆ. ಎಕರೆ ಮತ್ತು ಮೈಲು ಅಳತೆಗೆ ಉಪಯೋಗಿಸುತ್ತಾರೆ.
    2. ರೆವಿನ್ಯೂ ಸರಪಳಿ(ಅಣಾ ಚೈನ್): ಇದು 33 ಅಡಿ ಉದ್ದವಿದ್ದು 50 ಲಿಂಕ್ ಗಳಿರುತ್ತವೆ. ಸರ್ವೆ ಇಲಾಖೆ ಮೊದಲು ಬಳಸುತ್ತಿದ್ದ ಸರಪಳಿ ಇದಾಗಿದೆ.
    3. ಇಂಜನಿಯರ್ ಸರಪಳಿ: ಈ ಸರಪಳಿ 100 ಅಡಿ, 100 ಲಿಂಕ್ ಇರುತ್ತದೆ.
    4. ಮೆಟ್ರಿಕ್ ಸರಪಳಿ: ಇದರಲ್ಲಿ 20, 30 ಮೀಟರ್ ಉದ್ದದ 100 ರಿಂದ 150 ಲಿಂಕ್ ಗಳಿರುವ ಸರಪಳಿಗಳು ಸಿಗುತ್ತವೆ. ಮೆಟ್ರಿಕ್ ಅಳತೆಗೆ ಅನುಕೂಲವಾಗುವುದು.

ಟೇಪು: ಟೇಪುಗಳನ್ನು ವೈವಿಧ್ಯಮಯ ವಸ್ತುಗಳಿಂದ ಮಾಡುತ್ತಾರೆ. ಇವುಗಳ ಉದ್ದದಲ್ಲೂ ವೈವಿಧ್ಯತೆ ಕಾಣಬಹುದು. ಸರ್ವೆ ಮಾಡುವವರು ಸಾಮಾನ್ಯವಾಗಿ ಬಳಸುವರು. ಇಂಜನಿಯರಿಂಗ್ ಅಳತೆಗೆ ಸ್ಟೀಲ್ ಟೇಪು, ಲೋಹ/ಲೋಹೇತ್ತರ ವಸ್ತು ಹೆಣೆದ ಟೇಪು, ಫೈಬರ್ ಟೇಪುಗಳನ್ನು ಬಳಸುತ್ತಾರೆ.



ಬಟ್ಟೆ ಅಥವಾ ಲೆನಿನ್ ಟೇಪು: ಇವುಗಳ ಹತ್ತಿರ ಇರುವ ಬಿಂದುಗಳ ಅಳತೆಗೆ ಬಳಸುತ್ತಾರೆ. ವಾರ್ನಿಶ್ ಬಳಿದು, ಹೆಣದು ತಯಾರಿಸಿದ್ದು, ಸುಮಾರು 1½ ಸೆಂ.ಮೀ. ಅಗಲವಿದ್ದು ಸುಲಭವಾಗಿ ಸುತ್ತಲು ಬರುವಂತೆ ವಿನ್ಯಾಸ ಮಾಡಿದ ಚರ್ಮ ಅಥವಾ ಪ್ಲಾಸ್ಟಿಕ್ ಕೇಸ್/ಬಾಕ್ಸ್ ಗಳಲ್ಲಿ ಜೋಡಿಸಿರುತ್ತಾರೆ. ತುದಿಗೆ ಹಿಡಿಯಲು ಅನುಕೂಲವಾಗುವಂತೆ ಹಿತ್ತಾಳೆ ಅಥವಾ ಲೋಹದ ರಿಂಗ್ ಇರುತ್ತದೆ. ಇಂಚು ಮತ್ತು ಸೆಂಟಿಮೀಟರ್ ಅಳತೆ ಮಾನಕ ಅಳವಡಿಸಲಾಗಿರುತ್ತದೆ. ಹಗುರ ಬಳಕೆಗೆ ಸುಲಭ ಆದರೆ ಆರ್ಧ್ರತೆ ಇದ್ದರೆ ಬೇಗ ಹಾಳಾಗುತ್ತದೆ.

ಲೋಹದ ಟೇಪು: ದಾರ ಮತ್ತು ಲೋಹದ (ಹಿತ್ತಾಳೆ/ತಾಮ್ರ) ದಾರಗಳನ್ನು ಹೆಣೆದು ತಯಾರಿಸಿರುತ್ತಾರೆ. ಇದರಿಂದ ತಿರುಚುವುದನ್ನು ತಡೆಯಬಹುದು ಹಾಗೂ ಎಳೆದಾಗ ಹಿಗ್ಗುವುದನ್ನು ಸಹ ತಪ್ಪಿಸಬಹುದು. ಆದ್ದರಿಂದ ಬಟ್ಟೆ ಟೇಪುಗಳಿಗಿಂತ ನಿಖರವಾಗಿ ಅಳತೆ ಮಾಡಬಹುದು.

ಇನ್ವರ್ ಟೇಪು: ಹೆಚ್ಚು ನಿಖರ ಅಳತೆಗೆ ಬಳಸಬಹುದು. ಇದನ್ನು ಕಬ್ಬಿಣ(70%) ಮತ್ತು ನಿಕ್ಕಲ್(30%) ಮಿಶ್ರ ಮಾಡಿದ ಅಲಾಯ್ ಲೋಹದಿಂದ ಮಾಡುತ್ತಾರೆ. ಅತ್ಯಂತ ಕಡಿಮೆ ಹಿಗ್ಗುವಿಕೆ ಹೊಂದಿರುತ್ತದೆ. ಆರು ಮಿಲಿಮೀಟರ್ ಅಗಲ ಹಾಗೂ 100 ಮೀಟರ್ ವರೆಗಿನ ವಿವಿಧ ಅಳತೆಯಲ್ಲಿ ಲಭ್ಯ.

ಲಂಬಗೋಲು: ಜಮೀನಿನಲ್ಲಿ ಲಂಬರೇಖೆಗಳನ್ನು ನಿರ್ಮಿಸಿಕೊಳ್ಳಲು ಬೇಕಾದ ಉಪಕರಣ



    1. ಕ್ರಾಸ್ ಸ್ಟ್ಯಾಫ್: ಮರದ ಚೌಕಾಕಾರದ ಘನಾಕೃತಿಯಲ್ಲಿ ಮೇಲು ಭಾಗದಲ್ಲಿ ಪರಸ್ಪರ ಛೇದಿಸುವಂತೆ ಎರಡು ಕಂಡಿ ಮಾಡಿದ್ದು, ಒಂದು ಕಂಡಿ ಇನ್ನೊಂದು ಕಂಡಿಗೆ ಛೇದಿಸುವಲ್ಲಿ 900 ಕೋನ ಉಂಟಾಗಿರುತ್ತದೆ. ಇದರ ಕೆಳಭಾಗದಲ್ಲಿ 5 ಅಡಿ ಉದ್ದದ ಕಬ್ಬಿಣದ ಸಲಾಕೆಯನ್ನು ಮರದ ಬುರುಡೆಗೆ ಸ್ಕ್ರೂ ಮಳೆಗಳಿಂದ ಸೇರಿಸಿರುತ್ತೆ. ಕಂಬಿಯ ಕೆಳಭಾಗ ನೆಲದಲ್ಲಿ ಹೂಳಲು ಅನುಕೂಲವಾಗುವಂತೆ ಮೊನಚಾಗಿರುತ್ತದೆ.


    2. ತೆರೆದ ಕ್ರಾಸ್ ಸ್ಟ್ಯಾಫ್: ಇದು ಕ್ರಾಸ್ ಸ್ಟ್ಯಾಫ್ ರೀತಿಯೇ ಇರುತ್ತದೆ. ಮೇಲು ಭಾಗದ ಮರದ ಘನಾಕೃತಿಯ ಬದಲು ಮಧ್ಯ ಕೂದಲೆಳೆಯಷ್ಟು ಕಿಂಡಿ ಇರುವ ಲೋಹದ ನಾಲ್ಕು ಪಟ್ಟಿಗಳನ್ನು 900 ಕೋನದ ಅಂತರದಲ್ಲಿ ಹಿತ್ತಾಳೆ/ಲೋಹದ ತಳಪಟ್ಟಿಯ ಮೇಲೆ ಜೋಡಿಸಲಾಗಿರುತ್ತದೆ. ವಿರುದ್ಧ ದಿಕ್ಕಿನಲ್ಲಿರುವ ಎರಡು ಪಟ್ಟಿಗಳ ಮೂಲಕ ಹಾದು ಹೋಗುವ ರೇಖೆಗಳು ಪರಸ್ಪರ ಲಂಬವಾಗಿ ಛೇದಿಸುವಂತೆ ವಿನ್ಯಾಸವಿರುತ್ತದೆ.



    3. ಆಪ್ಟಿಕಲ್ ಸ್ಕ್ವೇರ್(ಕನ್ನಡಿ ಚೌಕ): ಸಾಮಾನ್ಯವಾಗಿ ಹಿತ್ತಾಳೆಯ ಲೋಹದಿಂದ 5 ಸೆಂ.ಮೀ. ದುಂಡಾಗಿ 1.25 ಸೆಂ.ಮೀ. ದಪ್ಪವಾಗಿ ಡಬ್ಬ ರೀತಿಯಲ್ಲಿ ತಯಾರಿಸಿರುತ್ತಾರೆ. ಡಬ್ಬಿಯ ಮೂರು ಪಾರ್ಶ್ವಗಳಲ್ಲಿ ಕೂದಲೆಳೆಯ ರೀತಿ ಕಿಂಡಿಗೆರೆಗಳಿದ್ದು ಎರಡು ಪರಸ್ಪರ ಅಭಿಮುಖವಾಗಿದ್ದು ಇನ್ನೊಂದು ಅಭಿಮುಖವಾಗಿರುವ ಕಿಂಡಿಗಳ ರೇಖೆಯನ್ನು ಲಂಬ ಛೇದಿಸುವಂತೆ ಮಾಡಲಾಗಿರುತ್ತದೆ. ಒಳಗಡೆ ಎರಡು ಕನ್ನಡಿಗಳನ್ನು ಲಂಬಕೋನದಲ್ಲಿ ಜೋಡಿಸಲಾಗಿರುತ್ತದೆ. ಕನ್ನಡಿಯಲ್ಲಿ ಎರಡು ಕಿಂಡಿಗಳಿಂದ ಬರುವ ಪ್ರತಿಬಿಂಬಗಳು ಗೋಚರಿಸುವಂತೆ ಜೋಡಿಸಲಾಗಿರುತ್ತದೆ. ಎರಡು ಕನ್ನಡಿಯ ಬದಲು ಒಂದು ಪ್ರಿಸಂ ಅಥವಾ ಎರಡು ಪ್ರಿಸಂನಿಂದ ಸಿದ್ಧಪಡಿಸಿದ ಪ್ರಿ ಸಮ್ಯಾಟಿಕ್ ಸ್ವ್ಕೇರ್ ಎಂದು ಕರೆವ ಉಪಕರಣಗಳೂ ಸಿಗುತ್ತವೆ. ಅವನ್ನೂ ಈ ಕಾರ್ಯಕ್ಕೆ ಬಳಸಬಹುದು.

ತೂಕದ ಗುಂಡು: ಲಂಬವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಬಳಸುವ ಸಾಧನ. ತುದಿ ಚೂಪಾಗಿರುವ ಲೋಹದ ಗುಂಡು, ಇದನ್ನು ದಾರದಿಂದ ತೂಗುವಂತೆ ಹಿಡಿಯುತ್ತಾರೆ. ತೂಗುವುದು ಸ್ಥಿರವಾದ ಸ್ಥಿತಿ ಲಂಬತೆಯನ್ನು ಸೂಚಿಸುತ್ತದೆ.



ಆಚಾರ್ ರಸಮಟ್ಟ: ಒಂದು ವಸ್ತು ಉಪಕರಣದ ಮಟ್ಟ ಅಥವಾ ಲಂಬವಾಗಿರುವುದನ್ನು ಗುರುತಿಸಲು/ಖಾತ್ರಿಪಡಿಸಿಕೊಳ್ಳಲು ಬಳಸುತ್ತಾರೆ. ಒಂದೇ ರಸಮಟ್ಟದಲ್ಲಿ ಹಲವು ಬಾಗಿದ ಮಟ್ಟ ನೋಡುವ ಕೊಳವೆಗಳಿರಬಹುದು. ಪ್ರತಿಯೊಂದು ರಸಮಟ್ಟದ ಕೊಳವೆಗಳನ್ನು ಅಪೂರ್ಣವಾಗಿ ದ್ರವ ವಸ್ತುವಿನಿಂದ ತುಂಬಲಾಗಿರುತ್ತದೆ.(ನೀರು, ಎಣ್ಣೆ ಅಥವಾ ಪ್ಯಾರಾಫಿನ್), ಉಳಿದ ಭಾಗ ಗಾಳಿ, ಇದು ಗುಳ್ಳೆಯಂತೆ ಕಾಣುತ್ತದೆ. ಈ ಕೊಳವೆ ಮೇಲೆ ಮಧ್ಯ ಎರಡು ಗುರುತಿನ ಗೆರೆ ಇರುತ್ತವೆ. ಮಟ್ಟ/ಲಂಬವಾಗಿದ್ದಾಗ ಗುಳ್ಳೆ ಎರಡು ಗುರುತಿನ ಗೆರೆ ಮಧ್ಯ ಇರುತ್ತದೆ.



ಸಾಲುಗೋಲು(ರೇಂಜಿಂಗ್ ರಾಡ್/ಪೊಲ್): ಪ್ರದೇಶ ಗುರುತಿಸಲು ಮತ್ತು ಸಾಲು ನೇರ ಮಾಡಲು ಬಳಸುವರು. ಕಬ್ಬಿಣದ ಕೊಳವೆ ಅಥವಾ ಮರದ ಕೋಲುಗಳ ಒಂದು ತುದಿ ಮೊನಚಾಗಿರುವಂತೆ ತಯಾರಿಸಿರುತ್ತಾರೆ. ಸಾಮಾನ್ಯವಾಗಿ 3 ರಿಂದ 4 ಸೆಂ.ಮೀ. ದಪ್ಪ ಮತ್ತು 2 ಮೀಟರ್ ಉದ್ದವಿರುತ್ತದೆ. ದೂರದಿಂದ ಕಾಣಲು ಅನುಕೂಲವಾಗುವಂತೆ ಕೆಂಪು ಮತ್ತು ಬಿಳಿ ಬಣ್ಣಗಳನ್ನು ಹಚ್ಚಿ ಸಿದ್ಧಪಡಿಸಲಾಗುತ್ತದೆ. ಅಗತ್ಯಬಿದ್ದಲ್ಲಿ ಕೋಲಿನ ತುದಿಗೆ ಕೆಂಪು ಮತ್ತು ಬಿಳಿ ಬಣ್ಣದ ಬಾವುಟ ಕಟ್ಟಬಹುದು.




ಗೂಟ: ಅಳತೆ ಮಾಡುವಾಗ ಎಲ್ಲೆ/ಅಂಚುಗಳನ್ನು ಅಥವಾ ಅಳತೆ ಮಾಡಬೇಕಾದ ಬಿಂದುಗಳನ್ನು ಗುರುತಿಸಲು ಗೂಟಗಳನ್ನು ಬಳಸಲಾಗುವುದು. ಸಾಮಾನ್ಯವಾಗಿ ಗೂಟಗಳನ್ನು ಮರದ ರೆಂಬೆ ಕೊಂಬೆಗಳನ್ನು ಕೆತ್ತಿ ಸಿದ್ಧಪಡಿಸಿಕೊಳ್ಳಲಾಗುವುದು. ಕಬ್ಬಿಣದ ರಾಡ್ ಗಳಿಂದಲೂ ಮಾಡುತ್ತಾರೆ. ಇದರ ಉದ್ದ ಸಾಮಾನ್ಯವಾಗಿ 40 ರಿಂದ 60 ಸೆಂ.ಮೀ. ಇರುತ್ತದೆ. ಬಳಕೆಗೆ ಅನುಗುಣವಾಗಿ ಉದ್ದಳತೆಯಲ್ಲಿ ವ್ಯತ್ಯಾಸ ಮಾಡಿಕೊಳ್ಳಬಹುದು.

           
ಗುರುತು ಮೊಳೆ: ಪ್ರತಿ ಸರಪಳಿಯೊಂದಿಗೆ 10 ಗುರುತು ಮೊಳೆಗಳಿರುತ್ತವೆ. ಈ ಮೊಳೆಗಳನ್ನು ಗಟ್ಟಿಯಾದ 4 ಮಿ.ಮೀ. ವ್ಯಾಸದ ಉಕ್ಕಿನ ಸರಳುಗಳಿಂದ ಮಾಡಿದ್ದು, ಒಂದು ತುದಿ ಮೊನಚು ಇನ್ನೊಂದು ತುದಿ ಉಂಗುರಾಕಾರವಿರುತ್ತದೆ. ಉದ್ದಳತೆ ಮಾಡಲು ಹಾಗೂ ಕ್ಷೇತ್ರದಲ್ಲಿ ಬಿಂದುಗಳನ್ನು ಗುರುತು ಮಾಡಲು ಇವನ್ನು ಬಳಸುತ್ತಾರೆ.

 

 

ಚಟುವಟಿಕೆ:

    1. ಸಾಲುಗೋಲನ್ನು ಲಂಬವಾಗಿ, ನಿಗದಿತ ಬಿಂದುವಿಗೆ ಹಾಕುವುದನ್ನು ಅಭ್ಯಾಸ ಮಾಡುವುದು.
    2. ಸರಪಳಿ ಬಿಚ್ಚುವುದು, ಮಡಿಚುವುದು ಹಾಗೂ ಎರಡು ಬಿಂದುಗಳ ಮಧ್ಯ ಸರಪಳಿ ನೇರಗೊಳಿಸಿ ಅಳತೆ ಮಾಡುವುದು.
    3. ಕ್ರಾಸ್ ಸ್ಟ್ಯಾಫ್ ಬಳಕೆ ಮಾಡುವ ಕೌಶಲ್ಯ.

Friday, May 1, 2020

ಸ್ತಬ್ಧವಾಗಿದೆ ಜಗತ್ತು

ಸ್ತಬ್ಧವಾಗಿದೆ ಜಗತ್ತು'
ತನ್ನ ಹದಗೆಟ್ಟ ಬದುಕು ಸಾವಿನ ಮೆಟ್ಟಿಲೇರುವಾಗ
ಮಹಾಮಾರಿಯ ನೋಟ ಮಸಣದೆಡೆಗೆ ನೂಕುವಾಗ,
ತನ್ನ ವ್ಯಷ್ಟಿ ಸಮಷ್ಟಿಯ ಬದುಕು
ದೊಂಬರಾಟವಾಡುವಾಗ
ಭೀತಿಯೇ ಭೂತವಾಗಿ ಕಾಡಿದಾಗ,

ಸ್ತಬ್ಧವಾಗಿದೆ ಜಗತ್ತು'
ವ್ಯಥೆಗಳ ಗುರುತು ಗುರುತಾಗುವಾಗ
ನೆರಳುಗಳೆ ನರಕವಾಗಿ ನಲಿವಾಗ
ಬಾಂಧವರೆ ಬೆವರಿಳಿಸುವ ಮೃತ್ಯುವಾಗುವಾಗ
ಕರುಳ ಕುಡಿಗಳೆ ದೂರವಾಗುವಾಗ,
ಹಿರಿಯ ಕಿರಿಯರಾದಿಯಾಗಿ ಮಣ್ಣಲ್ಲಿ ಕೊಳೆತು ಕಥೆಯಾಗುವಾಗ,

ಸ್ತಬ್ಧವಾಗಿದೆ ಜಗತ್ತು'
ತನ್ನದೇ ವಿಪರೀತಗಳ ವೈಪರೀತ್ಯಗಳಿಗೆ
ಸಂಸ್ಕಾರ ಮರೆತು ಪ್ರಕೃತಿಯ ಪರಿಹಾಸ್ಯಗೈವಾಗ
ನಮ್ಮ ಸುಖದ ಆಗರಗಳೆ ಬದುಕ ಕಸಿವಾಗ
ತನ್ನತನವೆಲ್ಲ ತಣ್ಣಗಾಗಿಸಿ ಸ್ವಾರ್ಥತೆಯ ಮೆರೆವಾಗ,
ಕೋಟೆ ಕೊತ್ತಳೆನ್ನದೆ ನಗರ ಹಳ್ಳಿಗಳೆನ್ನದೆ
ಕರೋನ ತನ್ನ ಬೀಜವ ಜಗದಗಲ ಬಿತ್ತುವಾಗ,

ಸ್ತಬ್ಧವಾಗಿದೆ ಜಗತ್ತು'
ಕಟ್ಟಿದ ಬಾಳೆಲ್ಲ ಕಟ್ಟೆಯೊಡೆದು ಕೊಚ್ಚಿಹೋಗುವಾಗ
ದುಮ್ಮಾನದಿ ನರಳುತಿಹ ಬಾಳು,
ಮತ್ತೆ ಕಟ್ಟಿಕೊಳುವ ತವಕದಲಿ
ಸ್ತಬ್ದವಾಗಿದೆ ಜಗದ ಬದುಕು,
ಮನವಾಗದಿರಲಿ,
ಮನವು ಮತ್ತೆ ಚಿಗುರನುಳಿಸಿಕೊಳ್ಳಲಿ,
ಸ್ತಬ್ಧವಾಗಿಹ ಈ ಜಗದ ಬೇಗುದಿಯಲಿ,
ಕರೋನ ಮೋಡ ಕವಿದ
ವಾತಾವರಣದಲಿ...💙

✍ ಶಾಲಿನಿ ಆರ್,ಹುಬ್ಬಳ್ಳಿ ...🦋*

Tuesday, April 28, 2020

ಅದ್ಭುತ ತಾಂತ್ರಿಕ ಹವ್ಯಾಸ “ಹ್ಯಾಮ್ ರೇಡಿಯೋ”


ಈ ಜಗತ್ತಿನಲ್ಲಿ ಜನರು ಬಿಡುವಿನ ವೇಳೆಯನ್ನು ಕಳೆಯುವುದಕ್ಕೋಸ್ಕರ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ನೂರಾರು ತರಹದ ಹವ್ಯಾಸಗಳಲ್ಲಿ ಕೆಲವು ಅತಿವಿಶಿಷ್ಠವಾದವುಗಳು. ಇವುಗಳ ಪೈಕಿ ಅದ್ಭುತವಾದ ತಾಂತ್ರಿಕ ಹಾಗೂ ಪರಸ್ಪರ ಸಂವಹನ (ಕಮ್ಯೂನಿಕೇಷನ್) ನಡೆಸುವ ಹವ್ಯಾಸವೂ ಒಂದಿದೆ. ಅದೇ “ಅಮೆಚ್ಯೂರ್ ರೇಡಿಯೋ”. ಈ ಹವ್ಯಾಸದಲ್ಲಿ ತೊಡಗಿಕೊಂಡಿರುವವರು “ಹ್ಯಾಮ್”ಗಳೆಂದೇ ಜಗತ್ಪ್ರಸಿದ್ಧರು.
 
H A M ಎಂಬ ಮೂರಕ್ಷರದ ಹೆಸರಿನ ಹಿಂದೆ ಮೂರುಮಂದಿ ಆಧುನಿಕ ಜಗತ್ತಿನ ವಿಜ್ಞಾನಿಗಳ ಹೆಸರು ಅಚ್ಚೊತ್ತಿಕೊಂಡಿದೆ. ಏಕೆಂದರೆ ಈ ಹವ್ಯಾಸದಲ್ಲಿ ಈ ಮೂವರು ಅನ್ವೇಷಿಸಿದ ತತ್ವಗಳನ್ನೇ ಬಳಸಿಕೊಂಡಿರುವುದು. ಇಲ್ಲಿ ಮೊದಲ “H” ಅಕ್ಷರವು ವಿದ್ಯುದಯಸ್ಕಾಂತೀಯ ತರಂಗಗಳನ್ನು ಪ್ರಕೃತಿಯಲ್ಲಿ ನೈಸರ್ಗಿಕ ರೂಪಲ್ಲಿ ಗ್ರಹಿಸಿದ ಜರ್ಮನ್ ವಿಜ್ಞಾನಿ ಹೆನ್ರಿಚ್ ಹಟ್ರ್ಸ್‍ನ ಹೆಸರಿನ ಮೊದಲಕ್ಷರವಾಗಿದ್ದು, ಎರಡನೆಯ “A” ಅಕ್ಷರವು ಧ್ವನಿ ತರಂಗಗಳನ್ನು ವಿದ್ಯುದಯಸ್ಕಾಂತೀಯ ತರಂಗಗಳಾಗಿ ಮಾರ್ಪಡಿಸಿ, ತಂತಿಯಲ್ಲಿ ದೂರಕ್ಕೆ ಚಲಿಸಿದ ನಂತರ ಮತ್ತೆ ದ್ವನಿ ತರಂಗಗಳಾಗಿ ಮಾರ್ಪಡಿಸುವ “TELIVISION” ತಂತ್ರಜ್ಞಾನ ಅನ್ವೇಷಿಸಿದ ಅಲೆಕ್ಸಾಂಡರ್ ಗ್ರಹಾಂಬೆಲ್ನ ಹೆಸರಿನ ಮೊದಲಕ್ಷರವಾಗಿದೆ ಮತ್ತು ಮೂರನೆಯದಾದ “M” ರೇಡಿಯೋ ತಂತ್ರಜ್ಞಾನ ಅನ್ವೇಷಿಸಿದ ಮಾರ್ಕೋನಿಯ ಹೆಸರಿನ ಮೊದಲಕ್ಷರವಾಗಿದೆ.
 
ನಿಜಕ್ಕೂ ರೇಡಿಯೋ ಜನಕ ಮಾರ್ಕೋನಿ ಅಲ್ಲ. ಬದಲಾಗಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಎನ್ನುವುದು ಇಂದು ಜನಜನಿತ ವಿಷಯ. ಮಾರ್ಕೋನಿ ತನ್ನ ಉಪಕರಣದಲ್ಲಿ ಬಳಸಿರುವುದು ಜೆ.ಸಿ. ಬೋಸರ್ ಅನೇಷಣೆಯಾದ “ಕೋಹೆರರ್”ನ್ನು.
 
ಇಂದು ಜಗತ್ತಿನಾದ್ಯಂತ ಭಾರೀ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಎಲೆಕ್ಟ್ರಾನಿಕ್ ಸಂವಹನ ತಂತ್ರಜ್ಞಾನದ ಬೆನ್ನಹಿಂದೆ ಕೆಲಸ ಮಾಡುತ್ತಿರುವ ತಂತ್ರಜ್ಞರಲ್ಲಿ ಅತ್ಯಧಿಕ ಪ್ರಮಾಣದ ಹ್ಯಾಮ್‍ಗಳಿದ್ದಾರೆ. ಹ್ಯಾಮ್‍ಗಳು ಸದಾ ಏನಾದರೋಂದು ಚಟುವಟಿಕೆ ನಡೆಸುತ್ತಲೇ ಇರುತ್ತಾರೆ ಎನ್ನುವುದಕ್ಕೆ ಈ ತಾಂತ್ರಿಕ ಬೆಳವಣಿಗೆಗಳೇ ಸಾಕ್ಷಿ.
 
ಶತಮಾನದ ಆದಿಯಿಂದಲೂ ಸರಳ - ಸುಲಭ ಮಾಹಿತಿ ವರ್ಗಾವಣೆಯ ಮಾಧ್ಯಮವೆನಿಸಿದ್ದ “ಮೋರ್ಸ್‍ಕೋಡ್” (ಟೆಲಿಗ್ರಾಂ ಸಂಕೇತಗಳು) ಇಂದು ನಾಪತ್ತೆಯಾಗಿದ್ದರೂ “ಡಾಟ್-ಡ್ಯಾಷ್”ಗಳ ಈ ಸಂಕೇತಭಾಷೆಯು ಇಂದಿಗೂ ಬಳಕೆಯಾಗುತ್ತಿರುವುದು ಹ್ಯಾಮ್‍ಗಳಿಂದ ಮಾತ್ರ. ನೀವೂ “ಹ್ಯಾಮ್ ರೇಡಿಯೋ ಆಪರೇಟರ್” ಆಗಬೇಕಾದರೆ ವೇಗವಾಗಿ ಕೇಳುವ ಮೋರ್ಸ್ ಕೋಡ್ ಧ್ವನಿ ಆಲಿಸಿ ಅದನ್ನು ಅಕ್ಷರಗಳಲ್ಲಿ ಬರೆಯುವುದು ಹಾಗೂ ಟೆಲಿಗ್ರಾಫಿಕ್ ಕೀ-ಯನ್ನು ಬಳಸಿ ಯಾವುದೇ ವಾಕ್ಯವನ್ನಾದರೂ ಮೋರ್ಸ್ ಕೋಡ್‍ಗಳಲ್ಲಿ ರವಾನಿಸುವ ಸಾಮಥ್ರ್ಯ ಇರಲೇಬೇಕು. ಇದರ ತರಬೇತಿಯನ್ನೂ ಕೊಡಲಾಗುತ್ತದೆ.
 
18ವರ್ಷ ಮೇಲ್ಪಟ್ಟ ಯಾರು ಬೇಕಾದರೂ “ಹ್ಯಾಮ್ ರೇಡಿಯೋ ಆಪರೇಟರ್”ಗಳಾಗಬಹುದಿದ್ದರೂ ಮೊದಲಿಗೆ ಭಾರತದ ಕೇಂದ್ರ ಸರ್ಕಾರದ ಸಂವಹನ ಮಂತ್ರಾಲಯ (Ministry of Communication) ದವರು ನಡೆಸುವ ಪರೀಕ್ಷೆಯಲ್ಲಿ ಟೆರ್ಗಡೆ ಹೊಂದಬೇಕಾಗಿರುತ್ತದೆ. ಈ ಪರೀಕ್ಷೆಗೆ “ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್” ವತಿಯಿಂದ ತರಬೇತಿಯನ್ನು ನೀಡಲಾಗುತ್ತಿದೆ.

ಇಲ್ಲಿ “ಮೋರ್ಸ್ ಕೋಡ್ ರಿಸೀವಿಂಗ ಮತ್ತು ಸೆಂಡಿಂಗ್”, “ವೈರ್‍ಲೆಸ್ ರೂಲ್ಸ್ ಎಂಡ್ ರೆಗ್ಯುಲೇಷನ್ಸ್” ಮತ್ತು “ಎಲೆಕ್ಟ್ರಾನಿಕ್ಸ್ ಬೇಸಿಕ್ಸ್”ಗಳ ವಿಚಾರವಾಗಿ ತರಬೇತಿ ನೀಡಿ, ಸರ್ಕಾರ ನಡೆಸುವ ಪರೀಕ್ಷೆಗೆ ಕೂರಿಸಲಾಗುತ್ತದೆ. ಪರೀಕ್ಷಾರ್ಥಿಗಳು ಮಂಗಳೂರು ಅಥವಾ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ತಮ್ಮದೇ ಆದ “ಹ್ಯಾಮ್ ರೇಡಿಯೋ ಸ್ಟೇಷನ್” ಸ್ಥಾಪಿಸುವ ಪರವಾನಗಿ ಅರ್ಥಾತ್ ಲೈಸೆನ್ಸ್ ಗಳಿಸುವರು. ಆನಂತರ ಕಮರ್ಷಿಯಲ್ ಹ್ಯಾಮ್ ಟ್ರಾನ್ಸೀವರ್ ಅಥವಾ ಮನೆಯಲ್ಲೇ ತಯಾರಿತ ಹೋಮ್-ಬ್ರ್ಯೂ ಹ್ಯಾಮ್ ಸೆಟ್ ಬಳಸಿ ನಿಮ್ಮ ಮನೆಯ ಕೋಣೆಯಲ್ಲೇ ಹ್ಯಾಮ್ ಸ್ಟೇಷನ್ ಸ್ಥಾಪಿಸಿ ಜಗತ್ತಿನಾದ್ಯಂತ ಇರುವ ಹ್ಯಾಮ್ ಗಳ ಜೊತೆಯಲ್ಲಿ ಸಂವಹನ ನಡೆಸಬಹುದು.

ನಿಮ್ಮ ಈ ಪರವಾನಗಿಯೊಂದಿಗೆ ನಿಮ್ಮದೇ ಆದ “ಕಾಲ್ ಸೈನ್” ಅಥವಾ “ಸಂಕೇತ ನಾಮ” ದೊರೆಯುತ್ತದೆ. ಹ್ಯಾಮ್ ಜಗತ್ತಿನಲ್ಲಿ ನಿಮ್ಮನ್ನು ಹೆಸರಿನಿಂದ ಯಾರೂ ಗುರುತಿಸುವುದಿಲ್ಲ. ಬದಲಾಗಿ ವಿಶಿಷ್ಠ “ಕಾಲ್ ಸೈನ್”ನೊಂದಿಗೆ ನಿಮ್ಮನ್ನು ಗುರುತಿಸುವರು. ಉದಾಹರಣೆಗೆ, ”ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್”ನ ಕಾಲ್ ಸೈನ್ “VU2SHV“. ಇಲ್ಲಿ VU2 ಭಾರತದ ಸಂಕೇತ ಹಾಗೂ ಉಳಿದ ಅಕ್ಷರಗಳು ನಿಮ್ಮ ಹೆಸರಿಗೆ ಸಂಬಂಧಿಸಿದ್ದು. ನಮ್ಮ “ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್” ಸ್ಥಾಪಿಸಿದ ಕೀರ್ತಿ ಶಿವಮೊಗ್ಗ ಜಿಲ್ಲೆಯ ಫೌಂಡ್ರಿ ಉದ್ಯಮದ ಪಿತಾಮಹರಲ್ಲೊಬ್ಬರಾದ ದಿವಂಗತ ಶ್ರೀ ಹೆಚ್.ಎನ್. ಗುಂಡೂರಾಯರಿಗೆ ಸಲ್ಲುತ್ತದೆ. ಶ್ರೀಯುತರ ಕಾಲ್-ಸೈನ್ “VU2HVG“.

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಹ್ಯಾಮ್‍ಗಳಿದ್ದಾರೆ. ಇವರಲ್ಲಿ ಅಸಂಖ್ಯ ಮಂದಿ ಸೆಲೆಬ್ರಿಟಿಗಳಿದ್ದಾರೆ. ಈ ಯಾವ ಹ್ಯಾಮ್ ಆಪರೇಟರ್ ಸಹಾ ಪ್ರೇಮಾಲಾಪನೆ, ಹಾಡು, ವ್ಯಾಪಾರ, ರಾಜಕೀಯ, ಅನೈತಿಕ ಚಟುವಟಿಕೆಗಳಿಗಾಗಿ ಈ ಹವ್ಯಾಸವನ್ನು ಬಳಸಿಕೊಳ್ಳುವಂತಿಲ್ಲ. ಆದರೆ, ಹವ್ಯಾಸಗಳ ಬಗ್ಗೆ, ವಿಜ್ಞಾನ – ತಂತ್ರಜ್ಞಾನಗಳ ಬಗ್ಗೆ ಗಂಟೆಗಟ್ಟಲೆ ಹರಟಬಹುದು. ಬಿಡುವಿನ ವೇಳೆಯಲ್ಲಂತೂ ಇದೊಂದು ಅದ್ಭುತ ಹವ್ಯಾಸವಾಗಬಲ್ಲುದು.
 
ಎಲ್ಲಾ ಹ್ಯಾಮ್ ಗಳೂ ತಮ್ಮದೇ ಆದ ವಿಶಿಷ್ಠ ಧಾಟಿಯಲ್ಲಿ ಮಾತನಡುವುದರಲ್ಲಿ ಸಿದ್ಧಹಸ್ತರು. ಹಾಗೆಯೇ ಸಂಭಾಷಣೆಯ ವೇಳೆಯಲ್ಲಿ ಬಳಸುವ ವೈವಿಧ್ಯಮಯ “Q-Code”ಗಳೆಂಬ ಸಂಕೇತಪದಗಳೇ ಇದ್ದು ಇವುಗಳನ್ನು ಕೇಳುವುದೇಚೆನ್ನ. ಹ್ಯಾಮ್ ಗಳು ದೂರದೇಶಗಳಲ್ಲಿ ನೆಲೆಸಿರುವ ಹ್ಯಾಮ್‍ಗಳನ್ನು ಸಂಪರ್ಕಿಸಿದಾಗ ಆ ಹೊಸ ಸ್ನೇಹಿತರ ರೇಡಿಯೋ ಸಿಗ್ನಲ್ ಗಳ ಕುರಿತ ತಾಂತ್ರಿಕ ಮಾಹಿತಿಯನ್ನು ಅವರಿಗೆ ರವಾನಿಸಿ ಅವರಿಂದ ವಿಶಿಷ್ಠ ರೂಪದಲ್ಲಿ ಪ್ರಿಂಟ್ ಹಾಕಲ್ಪಟ್ಟ “QSL Card“ ಗಳಿಸುವ ಪರಿಪಾಠವೇ ಇದೆ.

ಹ್ಯಾಮ್ ಗಳಲ್ಲಿ ಎಲ್ಲ ಗಂಡಸರೂ “ಓಲ್ಡ್ ಮ್ಯಾನ್” ಅಥವಾ ಸಂಕ್ಷಿಪ್ತವಾಗಿ “ಓ.ಎಂ.” ಎಂದೇ ಕರೆಯಲ್ಪಡುತ್ತಾರೆ. ಹಾಗೆಯೇ ಎಲ್ಲ ಮಹಿಳೆಯರೂ “ಯಂಗ್ ಲೇಡಿ” ಅಥವಾ ಸಂಕ್ಸಿಪ್ತವಾಗಿ “ವೈ.ಎಲ್.” ಎಂದೇ ಕರೆಯಲ್ಪಡುತ್ತಾರೆ.
ಇಲ್ಲಿ “QSL” ಎಂದರೆ ನಿಮ್ಮ ಸ್ಥಳ ಯಾವುದು ಎಂದೂ, “QRM” ಎಂದರೆ ಸಿಗ್ನಲ್ ನಲ್ಲಿ ಅಡಚಣೆ ಎಂದೂ, “73” ಅಂದರೆ ಅಭಿನಂದನೆ ಅಥವಾ ಟಾಟಾ ಎಂದೇ ಅರ್ಥ. ಹ್ಯಾಮ್ ಗಳ ಸಂಭಾಷಣೆಯೇ ರೋಮಾಂಚಕಾರಿ.
 
ಹ್ಯಾಮ್ ಹವ್ಯಾಸದ ಬಗ್ಗೆ ವಿವರಿಸುವಾಗ ಇನ್ನೊಂದು ವಿಶೇಷ ವಿಷಯವನ್ನು ಪ್ರಸ್ತಾಪಿಸದೇ ಇದ್ದರೆ ತಪ್ಪಾದೀತು. ಅದೆಂದರೆ “ಹ್ಯಾಮ್ ಹವ್ಯಾಸಿಗಳಿಗಿರುವ ಸಾಮಾಜಿಕ ಕಳಕಳಿ, ಅದೂ ವಿಶೇಷ ಸಂದರ್ಭಗಳ ವೇಳೆಯಲ್ಲಿ ತುರ್ತು ಸಂಪರ್ಕ ಏರ್ಪಡಿಸುವಲ್ಲಿ ಅವರ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ”.
 
ಅದು “ಮೋರ್ವಿ ದುರಂತ”ವಿರಬಹುದು, “ಗುಜರಾತ ಅಥವಾ ಮೆಕ್ಸಿಕೋ ಭೂಕಂಪ”ವಿರಬಹುದು ಇಲ್ಲವೇ “ಕೊಂಕಣ ರೈಲು ಮಾರ್ಗದ ಮತ್ಸ್ಯಗಂಧಾ ರೈಲು ಅಪಘಾತ”ವಿರಬಹುದು. ತಕ್ಷಣವೇ ತಮ್ಮ “ಹ್ಯಾಮ್ ರೇಡಿಯೋ ಸೆಟ್, ಬ್ಯಾಟರಿಗಳ ಸಹಿತ ಸ್ಥಳದಲ್ಲೇ ಬೀಡುಬಿಟ್ಟು ಪ್ರತಿಕ್ಷಣದ ಸಾವು-ನೋವುಗಳ ಮಾಹಿತಿಯನ್ನು ಹೊಜಗತ್ತಿಗೆ ತಲುಪಿಸಿದ್ದೇ ಹ್ಯಾಮ್ ಗಳು”. ಅರ್ಧ ಶತಮಾನದ ಹಿಂದೆ ಮೆಕ್ಸಿಕೋ ದೇಶದಲ್ಲಿ ಭೀಕರ ಭೂಕಂಪ ಘಟಿಸಿ ಎಲ್ಲ ಸಂಪರ್ಕವೂ ನಾಶವಾದಾಗ “ಅಯ್ಯೋ, ಮೆಕ್ಸಿಕೋ ನಗರದಲ್ಲಿ ಕಟ್ಟಡಗಳು ಇಸ್ಪೀಟೆಲೆಗಳಂತೆ ಉದುರುತ್ತಿವೆ” ಎನ್ನುತ್ತಾ ಹೊರಜಗತ್ತಿಗೆ ತಿಳಿಸಿದ್ದೇ ಒಬ್ಬ ಹ್ಯಾಮ್.
 
ಫಾರೆಸ್ಟ್, ಮಿಲಿಟರಿ, ಪೋಲೀಸ್, ಕೋಸ್ಟ್ ಗಾರ್ಡ್, ಹ್ಯಾಮ್, ಸಿಟಿಜ಼್‌ನ್ ಬ್ಯಾಂಡ್ (ಸಿಬಿ), ಇತ್ಯಾದಿ... ಗಳಿಗಾಗಿ ಪ್ರತ್ಯೇಕ ವೈರ್‍ಲೆಸ್ ಕಮ್ಯೂನಿಕೇಷನ್ ಬ್ಯಾಂಡ್‍ಗಳೇ ಇದ್ದು, ಒಬ್ಬರ ಬ್ಯಾಂಡ್ ನಲ್ಲಿ ಬೇರೊಬ್ಬರು ಸಂಪರ್ಕ ಸಾಧಿಸುವ ಅಧಿಕಾರ ಇರುವುದಿಲ್ಲ. ಅಕಸ್ಮಾತ್ ಹಾಗೇನಾದರೂ ಬೇರೊಬ್ಬರು ಸಂಪರ್ಕಿಸಿದಲ್ಲಿ ಅದನ್ನು ಕ್ರಿಮಿನಲ್ ಆಪಾದನೆಯಾಗಿಯೇ ಪರಿಗಣಿಸಲಾಗುವುದು. ಆದರೂ, ಅನಿವಾರ್ಯ ಸಂದರ್ಭಗಳಲ್ಲಿ “ಹ್ಯಾಮ್‍ಗಳೇನಾದರೂ ಈ ಬೇರೆ ಬ್ಯಾಂಡ್ ಗಳಲ್ಲಿ ಅತಿಕ್ರಮಿಸಿ ಯಾವುದೇ ತುರ್ತು ಮಾಹಿತಿ ನೀಡಿದಲ್ಲಿ ಎಲ್ಲ ಸೇನೆಗಳೂ ಅ ಮಾಹಿತಿಗೆ ಕೂಡಲೇ ಸ್ಪಂದಿಸಿ ಕಾರ್ಯಾಚರಣೆ ನಡೆಸುತ್ತವೆ”. ಇದಕ್ಕೆ ಇದುವರೆಗೂ ಯಾವ ಹ್ಯಾಮ್ ಆಪರೇಟರನೂ ಯಾವುದೇ ಸುಳ್ಳು ಸುದ್ಧಿ ಪ್ರಚಾರ ಮಾಡಿದ ಉದಾಹರಣೆ ಒಂದೂ ಇಲ್ಲ. ಆದ್ದರಿಂದಲೇ, “ಹ್ಯಾಮ್”ಗಳೆಂದರೆ ವಿವಿಧ ದೇಶಗಳ ಸೇನೆಗಳವರಿಗೆ ತುಂಬಾ ಗೌರವ, ಅಚ್ಚುಮೆಚ್ಚು.

ಯಾರಿಗಾದರೂ ತಾವೂ ಹ್ಯಾಮ್ ಆಪರೇಟರ್ ಆಗಬೇಕೆಂಬ ಆಸಕ್ತಿ ಇದ್ದಲ್ಲಿ “ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್”ನ ಕಾರ್ಯದರ್ಶಿ ಶ್ರೀ ರಾಜೇಶ್ (ಮೊಬೈಲ್ : +91 98456 79549) ರವರನ್ನು ಸಂಪರ್ಕಿಸಬಹುದು. 

ಲೇಖಕ : ಸತೀಶ್ ನಾಯಕ್, ಶಿವಮೊಗ್ಗ

Saturday, April 25, 2020

ಭಾರತದಲ್ಲಿ ಗೋತ್ರ ಪದ್ಧತಿ

ಭಾರತದಲ್ಲಿ ಗೋತ್ರ ಪದ್ಧತಿ

ಭಾರತದಲ್ಲಿ ಅನೇಕ ಸಮುದಾಯಗಳಲ್ಲಿ ಗೋತ್ರ ಪದ್ಧತಿ ಇದೆ. ಗೋತ್ರ ಪದ್ಧತಿ ಅನುಸರಿಸುವ ಈ ಸಮುದಾಯಗಳ ಜನರ ಹತ್ತಿರ ಗೋತ್ರ ಅಂದರೇನು ಎಂದು ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಬಹಳಷ್ಟು ಹಿರಿಯರಿಗೇ ಗೊತ್ತಿಲ್ಲ ಎಂದ ಮೇಲೆ ಇನ್ನು ಕಿರಿಯರಿಗೆ ಹೇಗೆ ಗೊತ್ತಿರಬೇಕು?

ಈ ಕುರಿತು ಅಧ್ಯಯನ ಮಾಡಿದ ಮಹಾವ್ಯಕ್ತಿಯೊಬ್ಬರು (ಅವರ ಹೆಸರು ಉಲ್ಲೇಖಿಸಲು ನಾನು ಅವರ ಅನುಮತಿ ಪಡೆದಿಲ್ಲ. ಆದ್ದರಿಂದ ಅವರ ಹೆಸರನ್ನು ಇಲ್ಲಿ ನಮೂದಿಸುತ್ತಿಲ್ಲ) ಹೇಳಿದ್ದರ ತಾತ್ಪರ್ಯವನ್ನು ಇಲ್ಲಿ ಬರೆಯುತ್ತಿದ್ದೇನೆ.

ಒಬ್ಬ ವ್ಯಕ್ತಿಯು ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡವಳಿಕೆ ಮುಂತಾದವುಗಳ ಮೂಲಕ ದೀರ್ಘ ಕಾಲ ತಪಸ್ಸು (ದೇಹ-ಮನಸ್ಸು-ಬುದ್ಧಿಗಳ ಶುದ್ಧೀಕರಣ) ಮಾಡಿದರೆ ಆತ ಋಷಿ ಎನಿಸಿಕೊಳ್ಳುತ್ತಾನೆ. ತಪಸ್ಸು ಕಠಿಣವಾಗುತ್ತ, ದೀರ್ಘವಾಗುತ್ತ ಹೋದಹಾಗೆ ಆತ ಔನ್ನತ್ಯದ ವಿವಿಧ ಮಜಲುಗಳನ್ನು ತಲುಪುತ್ತಾಹೋಗುತ್ತಾನೆ.
ಋಷಿ, ರಾಜರ್ಷಿ, ಮಹರ್ಷಿ ಇತ್ಯಾದಿ ಹಂತಗಳನ್ನು ದಾಟುತ್ತಾನೆ. ಈ ರೀತಿ ಕಠೋರ ತಪಸ್ಸಿನ ಕೊಟ್ಟಕೊನೆಯ ಹಂತ ಎಂದರೆ ಬ್ರಹ್ಮರ್ಷಿತ್ವ. ಯಾರು ಬ್ರಹ್ಮರ್ಷಿ ಪದವಿಯನ್ನು ಗಳಿಸಿಕೊಳ್ಳುತ್ತಾನೋ, ಆತ ಶುದ್ಧೀಕರಣ ಪ್ರಕ್ರಿಯೆಯ ಕೊನೆಯ ಸ್ಥಿತಿತಲುಪಿದ್ದಾನೆ, ಇನ್ನು ಶುದ್ಧಗೊಳ್ಳಲು ಏನೂ ಉಳಿದಿಲ್ಲ ಎಂದರ್ಥ.
ಋಷಿಗಳೆಂದರೆ ಸಂನ್ಯಾಸಿಗಳಲ್ಲ. ಅವರು ಸಾಮಾನ್ಯವಾಗಿ ಗೃಹಸ್ಥರೇ ಆಗಿರುತ್ತಾರೆ. ಇಂಥ ಬ್ರಹ್ಮರ್ಷಿಯ ಮಗನೂ ಬ್ರಹ್ಮರ್ಷಿಯಾದರೆ, ಆ ಮಗನ ಮಗನೂ ಬ್ರಹ್ಮರ್ಷಿಯಾದರೆ, ಈ ರೀತಿ ಒಬ್ಬರ ಬಳಿಕ ಒಬ್ಬರಂತೆ ಆ ಕುಟುಂಬದಲ್ಲಿ ಏಳು ತಲೆಮಾರುಗಳ ತನಕ ಬ್ರಹ್ಮರ್ಷಿಗಳಾದರೆ ಮೊದಲನೆಯ ಬ್ರಹ್ಮರ್ಷಿಯ ಹೆಸರಿನಲ್ಲಿ ಗೋತ್ರ ನಿರ್ಮಾಣವಾಗುತ್ತದೆ. ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಆಂಗೀರಸ, ಕಶ್ಯಪ, ಗೌತಮ, ಭಾರದ್ವಾಜ ಮುಂತಾದವರು ಗೋತ್ರ ಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.
ಇಲ್ಲಿ ಇನ್ನೊಂದು ಸೂಕ್ಷ್ಮವೂ ಕುತೂಹಲಕಾರಿಯೂ ಆಗಿರುವ ಸಂಗತಿಯೊಂದಿದೆ. ಒಬ್ಬರ ಬಳಿಕ ಒಬ್ಬರಂತೆ ಏಳು ಜನ ಬ್ರಹ್ಮರ್ಷಿಗಳಾದುದರಿಂದ ಆ ವಂಶವೇ ಶುದ್ದತೆಯ ಪರಿಪೂರ್ಣತೆಯನ್ನು ತಲುಪಿದೆ ಎಂದರ್ಥ. ಆ ಗೋತ್ರದಲ್ಲಿ ಹುಟ್ಟಿದವರೆಲ್ಲ ತಮ್ಮ ವಂಶವಾಹಿನಿಗಳಲ್ಲಿ ತಮ್ಮ ಪೂರ್ವಜರ ಶುದ್ಧತೆಯನ್ನು ಪಡೆದುಕೊಂಡು ಬಂದಿದ್ದಾರೆಂದು ನಮ್ಮ ಪರಂಪರೆ ಭಾವಿಸುತ್ತದೆ. ಆಧುನಿಕ ವೈದ್ಯವಿಜ್ನಾನ ಕೂಡ ಡಿ.ಎನ್.ಎ. ಹೆಸರಿನ ವರ್ಣತಂತುಗಳು ವ್ಯಕ್ತಿಯ ಪೂರ್ವಜರ ಗುಣವಿಶೇಷಗಳನ್ನು ಹೊತ್ತುತಂದಿರುತ್ತವೆ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತದೆ. ಅಲ್ಲಿಗೆ ಅದು ಗೋತ್ರತತ್ವ ಏನು ಹೇಳುತ್ತದೆಯೋ ಅದನ್ನೇ ಹೇಳಿದಂತಾಯಿತು.

ಗೋತ್ರ ಅಂದರೇನು?

ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ:
  • ಗೋತ್ರ ಎಂದರೇನು?
  • ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ?
  • ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ?
  • ಏಕೆ ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ಮಗಳಲ್ಲ?
  • ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ?
ಪ್ರಥಮತವಾಗಿ "ಗೋತ್ರ" ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು 'ಗೋ' ಅಂದರೆ ಹಸು, 'ತ್ರಾಹಿ' ಅಂದರೆ ಕೊಟ್ಟಿಗೆ ಎಂದರ್ಥ. ಗೋತ್ರವು 'ಹಸುವಿನ ಕೊಟ್ಟಿಗೆ' ಎಂದಾಗಿದ್ದು, ಪುರುಷ ತಳಿಯ ವಾಹಕವಾಗಿದೆ. ಹಾಗಾದರೆ ನಾವೆಲ್ಲರೂ ನಮ್ಮ ಮೂಲಪುರುಷ ಯಾವುದೋ ಋಷಿ ಅಥವಾ ಅಷ್ಟಋಷಿಗಳಲ್ಲೊಬ್ಬರ ಅನುಯಾಯಿ ಆಗಿದ್ದು, ನಮ್ಮ ಗೋತ್ರವು ಆ ಮೂಲ ಪುರುಷ ಋಷಿಯ ಹೆಸರಿನಿಂದ ಗುರುತಿಸಿ ಕೊಳ್ಳುವೆವು. (ಸಪ್ತ ಋಷಿಗಳು: ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಆಂಗೀರಸ, ಜಮದಗ್ನಿ, ಕಶ್ಯಪ, ಗೌತಮ ಮತ್ತು ಭಾರಧ್ವಾಜ)

"ಸಪ್ತಧಾತು ಸಮಪಿಂಡಂ ಸಮಯೋನಿ ಸಮುದ್ಭವಂ ಆತ್ಮಜೀವ ಸಮಾಯುಕ್ತಂ ಸೃಷ್ಟಿಕಾರ್ಯಂ ನಿರಂತರಂ" ತಂದೆ ಹಾಗೂ ತಾಯಿಯಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ, ತಾಯಿ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದ ಬಂದ ಪ್ರಾಣ, ಪ್ರಜ್ಞೆ, ಆತ್ಮಾಂಶಗಳು ಸಂಯುಕ್ತವಾಗಿ ತಂದೆಯ ಇಪ್ಪತ್ತ ಮೂರು, ತಾಯಿಯ ಇಪ್ಪತ್ತಮೂರು ವರ್ಣತಂತುಗಳ ಕೂಡುವಿಕೆಯಿಂದ ಒಂದೇ ಒಂದು ಮೂಲ ಜೀವಕೋಶ ರಚನೆಯಾಗಿ ಅದೇ ಕೋಶ ವಿಭಜನೆಗೊಂಡು ಪ್ರತಿ ಶಿಶುವು ಜನ್ಮ ತಾಳುವುದು.

ತಂದೆಯ ಇಪ್ಪತ್ತ ಮೂರು 'XY' ತಾಯಿಯ ಇಪ್ಪತ್ತ ಮೂರು 'XX' ವರ್ಣತಂತುಗಳ ಗುಣಾಂಶ ಹಾಗೂ ವಂಶವಾಹಿನಿಯಾಗಿ ಬರುತ್ತದೆ. ಮಗುವಿಗೆ ತಾಯಿಯ ಗುಣಾಂಶ 'X' ಸಾಮಾನ್ಯವಾಗಿದ್ದು, ತಂದೆಯ 'Y' ಗುಣಾಂಶವು ತಾಯಿಯ 'XX' ಗುಣಾಂಶವನ್ನು ಮೀರಿ ತಂದೆಯಿಂದ 'Y' ಬರುವುದರಿಂದ ಮಗಳಿಗೆ ತಂದೆಯ 'Y' ಬರಲು ಅಸಾಧ್ಯವಾಗಿದ್ದು, ತಂದೆಯಿಂದ ಗೋತ್ರವು ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಮಾತ್ರ ಮುಂದುವರಿಯುವುದು. ಮೇಲೆ ಹೆಸರಿಸಿದ ಎಂಟು ಋಷಿಗಳಲ್ಲಿ ಎಂಟು ವಿಭಿನ್ನ 'Y' ಗುಣಾಂಶದ ವರ್ಣತಂತುಗಳಿದ್ದು, ಆ ತಳಿಮೂಲಾಂಶದ ವಂಶವಾಹಿನಿ ನಾವಾಗಿದ್ದೇವೆ ಹಾಗೂ ನಾವು ಯಾವ ಮೂಲ ಪುರುಷನ ಸಂತತಿ ಎಂಬುದು ತಿಳಿಯುತ್ತದೆ.
ವಿವಾಹ ವಿಚಾರದಲ್ಲಿ ನಾವು ಸ್ವಗೋತ್ರರಲ್ಲಿ ನೆಂಟಸ್ತಿಕೆ ಮಾಡಿದಲ್ಲಿ 'Y' ಗುಣಾಂಶದ ವರ್ಣತಂತುಗಳು ಭವಿಷ್ಯದಲ್ಲಿ ಮುಂದುವರೆಯಲಾಗದೆ ನಿಃಶಕ್ತ, ನಿತ್ರಾಣ, ಬೆಳವಣಿಗೆ ಕುಂಠಿತ, ರಕ್ತ ಸಂಬಂಧಿ ಕಾಯಿಲೆ, ಪುತ್ರವಿಹೀನ, ಸಂತಾನ ಹೀನ- ಇತ್ಯಾದಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹಾಗಾಗಿ ಗೋತ್ರವು 'Y' ಗುಣಾಂಶದ ವರ್ಣತಂತುಗಳ ರಕ್ಷಕನಾಗಿದೆ.

ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು.

ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.
ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲವಾದ್ದರಿಂದ, ಪ್ರಸಿದ್ಧರಾದ ಮೂರು ಜನ, ಅಥವಾ ಐದು ಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು. ತ್ರಯಾ ಋಷಿಯ, ಪಂಚಾಋಷಿಯ ಶಬ್ದದಿಂದ ಕರೆಯುತ್ತೇವೆ. ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.

ಸೂತ್ರ ಎಂದರೆ

ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ ಸೂತ್ರಗಳಿವೆ. ಇವುಗಳು ಇಂತಿವೆ: 
  1. ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು. 
  2. ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು. 
  3. ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.
ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ - ಗೃಹ್ಯಸೂತ್ರದ ಪ್ರಕಾರ ಷೋಡಶಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು.

ತ್ರಯಾಋಷಯ ಅಥವಾ ಪಂಚಾಋಷಯ ಪ್ರವರಾನ್ವಿತ . . ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು? ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು - ಎಂದು ಹೇಳುವುದು.
ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರುಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆಯ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ, ಸೂತ್ರ ಎನ್ನುವುದು.

ಈ ಗೋತ್ರ,ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. "ಗೋತ್ರ, ಪ್ರವರ,ನಿರ್ಣಯ" ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ, ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶಾತ್ಮಕವಾಗಿ ಬರೆಯಬೇಕು.

ಗೋತ್ರ,ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು. 
  1. ಭೃಗು
  2. ಆಂಗೀರಸ
  3. ಮರೀಚಿ
  4. ಅತ್ರಿ
  5. ಪುಲಹ
  6. ಪೌಲಸ್ತ್ಯ
  7. ವಸಿಷ್ಠ
ಎಂಬುದಾಗಿ ಏಳುಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದ 
  1. ಭೃಗು
  2. ಆಂಗೀರಸ
  3. ಮರೀಚಿ
  4. ಅತ್ರಿ 
ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.

ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:

೧. ಜಮದಗ್ನಿ - ಭೃಗು ವಂಶಸ್ಥರು (೧)
೨. ಭರದ್ವಾಜ - ಆಂಗೀರಸ ವಂಶಸ್ಥರು (೨)
೩. ಗೌತಮ - ಮೇಲಿನಂತೆ
೪. ಕಾಶ್ಯಪ - ಮರೀಚಿ ವಂಶಸ್ಥರು (೩)
೫. ವಸಿಷ್ಠ - ಮೇಲಿನಂತೆ
೬. ಅಗಸ್ತ್ಯ - ಮೇಲಿನಂತೆ
೭. ಅತ್ರಿ - ಅತ್ರಿಯೇ ಮೂಲಪುರುಷರು ಅಥವಾ ಅವರ ವಂಶಸ್ಥರು (೪)
೮. ವಿಶ್ವಾಮಿತ್ರ - ಅತ್ರಿ ಋಷಿಯ ವಂಶಸ್ಥರು

ಈ ರೀತಿ ನಾಲ್ಕುಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.

ಮೇಲೆ ತಿಳಿಸಿದ ಎಂಟುಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತುಋಷಿವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣಕುಲಕ್ಕೆ ಸೇರಿದವರಾದರು. ಎಂದರೆ ಭೃಗುವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-

೧. ವೀತಹವ್ಯ - ಭೃಗು ವಂಶವನ್ನವಲಂಬಿಸಿದವರು
೨. ಮೈತ್ರೇಯ - ಮೇಲಿನಂತೆ
೩, ಶುನಕ - ಮೇಲಿನಂತೆ
೪, ವೇನ - ಮೇಲಿನಂತೆ
೫. ರಥೀತರ - ಆಂಗೀರಸ ಗೋತ್ರವನ್ನವಲಂಬಿಸಿದವರು
೬. ಮುದ್ಗಲ - ಮೇಲಿನಂತೆ
೭. ವಿಷ್ಣುವೃದ್ಧ - ಮೇಲಿನಂತೆ
೮. ಹಾರೀತ - ಮೇಲಿನಂತೆ
೯. ಕಣ್ವ - ಮೇಲಿನಂತೆ
೧೦.ಸಂಕೃತಿ -ಮೇಲಿನಂತೆ

ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ ೧೮ ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು

ಗಾಯತ್ರೀಮಂತ್ರ ಮತ್ತು ದೇವತೆ

ಗಾಯತ್ರೀ ದೇವಿ (ಸಾವಿತ್ರೀ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದಮಾತೆ ಎಂದು ಕರೆಯಲ್ಪಡುವ ಗಾಯತ್ರೀ ದೇವಿಯನ್ನು ಐದುಮುಖ ಮತ್ತು ಹತ್ತುಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ಯಜುರ್ವೇದಿಗಳು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀದೇವನಾದ ಸೂರ್ಯಾಂತರ್ಗತನಾದ ನಾರಾಯಣನನ್ನು ಎಲ್ಲರೂ ಸ್ವೀಕರಿಸಿ ಧ್ಯಾನಿಸುತ್ತಿದ್ದಾರೆ.

|| ಓಂ ಭೂರ್ಭುವಃಸ್ವಃ|
ತತ್ ಸವಿತುರ್ವರೇಣ್ಯಂ|
ಭರ್ಗೋ ದೇವಸ್ಯ ಧೀಮಹಿ|
ಧಿಯೋ ಯೋ ನಃ ಪ್ರಚೋದಯಾತ್ ||

ಪದಗಳ ಅರ್ಥ =
ಓಂ - ಓಂ
ಭೂಃ - ಭೂಮಿ
ಭುವಃ - ಅಂತರಿಕ್ಷ
ಸ್ವಃ - ಆಕಾಶ
ತತ್ - ಆ
ಸವಿತುಃ - ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
ವರೇಣ್ಯಂ - ಪೂಜಾರ್ಹವಾದ
ಭರ್ಗೋ - ತೇಜಸ್ಸನ್ನು
ದೇವಸ್ಯ - ದೇವನ
ಧೀಮಹಿ - ಧ್ಯಾನಿಸುತ್ತೇವೆ
ಧಿಯೋ - ಬುದ್ಧಿ, ವಿವೇಕಗಳನ್ನು
ಯೋ - ಅವನು
ನಃ - ನಮ್ಮೆಲ್ಲರಿಗೂ
ಪ್ರಚೋದಯಾತ್ - ಪ್ರಚೋದಿಸಲಿ

ಭಗವದ್ಗೀತೆಯು ಭಗವಂತನ ವಚನವು.
ಗಾಯತ್ರಿಯ ಮೊದಲ ಅಕ್ಷರ 'ಓಂ' ಅದು ಬ್ರಹ್ಮ ದೇವರಿಗೆ ಭಗವಂತನು ಕೊಟ್ಟ ಮೊದಲ ಉಪದೇಶ. ಹಾಗಾಗಿ ಇದರಲ್ಲಿ ಸಮನ್ವಯ ಮಾಡಬಹುದಾಗಿದೆ.

ತತ್ - ವ್ಯಾಪ್ತಿತ್ವ - ಎಲ್ಲ ಕಡೆ ವ್ಯಾಪಿಸಿದ್ದಾನೆ.
ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ ಪರಮಾತ್ಮನು ತನ್ನ ವಿಶ್ವರೂಪವನ್ನು ತೋರಿಸುವ ಮೂಲಕ ತನ್ನ ಗುಣಗಳ, ಕ್ರಿಯೆಗಳ ಹಾಗೂ ರೂಪಗಳ ವ್ಯಾಪ್ತಿಯನ್ನು ಅರ್ಜುನನಿಗೆ ತೋರಿಸಿದ್ದಾನೆ.

ಸವಿತುಃ - ಅವನು ಸೃಷ್ಟಿಕರ್ತಾ
ಭಗವಂತನು ತಾನು ಪ್ರಕೃತಿಯ ಮೂಲಕ ಸೃಷ್ಟಿಯನ್ನು ಮಾಡುತ್ತೇನೆ ಎನ್ನುವುದಾಗಿ 'ಮಯಾಧ್ಯಕ್ಷೇಣ ಪ್ರಕೃತಿ:' ಎನ್ನುವ ಕಡೆ ಹೇಳುತ್ತಾನೆ.

ವರೇಣ್ಯಂ - ಅವನು ಶ್ರೇಷ್ಠನು
ಗೀತೆಯಲ್ಲಿ 'ಮತ್ತಃ ಪರತರಂ ನಾಸ್ತಿ' ಎಂದು ನನಗಿಂತ ಉತ್ತಮನು ಯಾರೂ ಇಲ್ಲ ಎಂದು ಸ್ವಯಂ ಭಗವಂತನು ಹೇಳುತ್ತಾನೆ. ಹದಿನೈದನೇ ಅಧ್ಯಾಯದಲ್ಲಿ ತಾನು ಕ್ಷರ ಮತ್ತು ಅಕ್ಷರವನ್ನು ಮೀರಿದವನು ಮತ್ತು ತನ್ನನ್ನು ವೇದಗಳು ಪುರುಷೋತ್ತಮ ಎಂದು ಕರೆಯುತ್ತವೆ . ಹೀಗೆ ತಿಳಿಸಲಾಗಿದೆ.

ಭರ್ಗ: ಪ್ರಕಾಶಮಾನವಾಗಿದ್ದಾನೆ
ಸಾವಿರಾರು ಸೂರ್ಯರುಗಳು ಒಮ್ಮೆಲೇ ಉದಯಿಸಿದಾಗ ಆಗುವ ಬೆಳಕು ವಿಶ್ವರೂಪ ಕಾಲದಲ್ಲಿ ಆಯಿತು. ಅರ್ಜುನನಿಗೆ ದಿವ್ಯಚಕ್ಷುಸ್ಸನ್ನು ಕೊಟ್ಟು ವಿಶ್ವರೂಪವನ್ನು ತೋರಿಸಿದನು. ಮತ್ತೆ ವಿಶ್ವರೂಪದಲ್ಲಿ ಸಂಹಾರ ಚಿತ್ರಣೆ ಅಂದರೆ ಎಲ್ಲ ಬಾಂಧವರು ಪರಮಾತ್ಮನ ಬಾಯಿಯಲ್ಲಿ ಹೋಗಿ ಸಾಯುವಂತದ್ದು ಅರ್ಜುನನಿಗೆ ತೋರಿಸಿದ.

ದೇವಸ್ಯ : ಅವನು ಎಲ್ಲರಿಂದ ಸ್ತುತಿಸಲ್ಪಟ್ಟವನು, ಪ್ರೇರಣೆ ಮಾಡುವವನು
ಅರ್ಜುನನಿಗೆ ತನ್ನ ಕರ್ತವ್ಯದಲ್ಲಿ ಪ್ರೇರಣೆ ಮಾಡಿ ಕೌರವಸೇನೆಯನ್ನು ಗೆಲ್ಲುವಂತೆ ಮಾಡಿದನು. ವಿಶ್ವರೂಪದಲ್ಲಿ ಮಹರ್ಷಿಗಳೇ ಮೊದಲಾದವರು ಪರಮಾತ್ಮನನ್ನು ಸ್ತುತಿಸಿದರು.

ಧೀಮಹಿ : ಅವನು ಧ್ಯಾನಿಸಲ್ಪಡಬೇಕಾದವನು
ಎಂಟನೇ ಅಧ್ಯಾಯದಲ್ಲಿ ತಾನು ಎಲ್ಲರಿಂದಲೂ ಅಂತ್ಯಕಾಲದಲ್ಲಿ ಧ್ಯಾನಿಸಲ್ಪಡಬೇಕಾದವನು ಎಂದು ತಿಳಿಸುತ್ತಾನೆ.
ಧಿಯೋ ಯೋ ನ: ಪ್ರಚೋದಯಾತ್ : ಅವನು ನಮ್ಮನ್ನು ಸತ್ಕರ್ಮ/ಯೋಚನೆಗಳಲ್ಲಿ ತೊಡಗಿಸಲಿ ಎಂಬ ಭಾವವು.
--ಸರ್ವೇಸಜ್ಜನಾಃ ಸುಖಿನೋಭವಂತು (ವ್ಯಾಟ್ಸಪ್ ಕೃಪೆ)

ರಾಜೇಶ್ವರಿ. ಹುಲ್ಲೇನಹಳ್ಳಿ. ಕವನಗಳು

ಪ್ರಭಾವ

ಸಮಯವೇ ಇಲ್ಲವೆಂದು

ಸದಾ ಕೊರಗುತ್ತಿದ್ದ ಜನರಿಗೀಗ,

ಕಳೆಯಲಾಗುತ್ತಿಲ್ಲ ಸಮಯ

ಕೊರೊನಾ ನೀ ಬಂದಿರುವಾಗ!

ಸಾಕಿನ್ನು ಆಟ

ಹೇ ಕೊರೊನಾ ಇದೇ ನಿನ್ನ ಕೊಡುಗೇನಾ?

ಜೀವಗಳ ಕಬಳಿಸಿದೆ,ಅಹಮಿಕೆಯ ಕಳಚಿದೆ.

ಬಾಂಧವ್ಯಗಳ ಬೆಸೆದೆ, ಮನೆಯ ಮನೆಯಾಗಿಸಿದೆ.

ಸಾಕಿನ್ನು ನಿನಾ ಆಟ,ನೀ ಕಲಿಸಿದ ಪಾಠ!

ಹೇಳಿಬಿಡು ಬೇಗ ಟಾ ಟಾ.!

ಗುಮ್ಮ

ಹೇ ಕೊರೊನಾ ಏನೆಂದು ಕರೆಯಲಿ ನಾ ನಿನ್ನ?

ಅರೆಛಣದಿ ಮುಚ್ಚಿಬಿಟ್ಟೆಯಲ್ಲಾ

ಮದುವೆಯಾದಾಗಿನಿಂದ ಮುಚ್ಚಿಸಲಾಗದ

ನನ್ನವಳ ಈ ಬಾಯನ್ನ!

ಬಾಯಿಬೀಗ

ದೇವರಿಗೆ ಹರಕೆ ಹೊತ್ತು

ಹಾಕಿಸಿಕೊಳ್ಳುತ್ತಿದ್ದರು "ಬಾಯಿಬೀಗ"

ಜಾತ್ರೆ ಪರಿಷೆ ನಡೆಯುವಾಗ!

ಹಾಕಿಬಿಟ್ಟೆಯಾ ಕೊರೊನಾ ಸದ್ದಿಲ್ಲದೆ

ನೀನೀಗ ಎಲ್ಲರ ಬಾಯಿಗೆ ಬೀಗ!

ಕೊರೊನಾ

ಮನುಜನ ಅಹಮಿಗೆ,

ಇದ್ದಕ್ಕಿದ್ದಂತೆ ದೈವ ಕೊಟ್ಟ ಪೆಟ್ಟು.

ಗೋಜಲಿನ್ನೂ ಅದರ ಹುಟ್ಟಿನ ಗುಟ್ಟು!

ಛಣ ಛಣಕೂ ಏರುತಿದೆ ಸಹಸ್ರ ಪಟ್ಟು!


ಕೊರೋನ: ಬಂದಿದೆ ಬಂದಿದೆ ಕೊರೋನ

ಬಂದಿದೆ ಬಂದಿದೆ ಕೊರೋನ
ಎಚ್ಚರಿಕೆ ಯಿಂದ ಇರೋಣ
ಹೋದರೆ ನೀವು ಹೊರಗೆ
ಬರುವುದು ಕೊರೊನ ಒಳಗೆ

ಹುಟ್ಟೂರ ಕೊರೋನ ತೊರೆದು
ಕೈಯ ಬೀಸಿ ನಮ್ಮನು ಕರೆದು
ಬಂದಿದೆ ನೋಡಿ ಎಲ್ಲೆಡೆ ಹರಡಿ
ಕೂಡಲೆ ಸಾವಿನ ಮನೆಗೆ ಹೊರಡಿ

ಪದೇ ಪದೇ ಕೈಯ ತೊಳೆದು
ಮೊಗಕೊಂದು ಧರಿಸಿ ಮುಸುಕು 
ನಾಲ್ಕಡಿ ದೂರ ಅಂತರ ಕಾಯ್ದು
ಇದ್ದರೆ ನಾವು ನೀವು ಸೇಫು

ಕಂಡರೆ ಕೆಮ್ಮು ಶೀತ ಜ್ವರ ನೆಗಡಿ
ಹೊರಡಿ ಕೂಡಲೆ ವೈದ್ಯರ ಬಳಿಗೆ
ಹರಡದಿರಿ ಸೋಂಕು ಇತರರರಿಗೆ
ಬೇಡುವೆವು ಕೈಮುಗಿದು ನಿಮಗೆ

ನಿರ್ಲಕ್ಷ್ಯ ಬೇಡ ಈ ರೋಗಕೆ
ಮದ್ದೇ ಇಲ್ಲ ಕೊರೋನಕೆ
ಬಂದರೆ ಸೀದಾ ಸ್ಮಶಾನಕೆ
ಇದು ಅರಿತರೆ ಜೀವಂತಿಕೆ

--ಎನ್ .ಶೈಲಜಾ ಹಾಸನ ,ಮೊ-+919448653282

Wednesday, April 22, 2020

ಮಲ್ನಾಡಿನ ಸಣ್ಣ ಕಥೆ...!!

ಮಲ್ನಾಡಿನ ಸಣ್ಣ ಕಥೆ...!!


ನಿನ್ನೆ ಸಂಜೆ ಸರಿ ಸುಮಾರು ೪.೨೦, ಅದೆಲ್ಲೋ ಸಡಿಲವಾಗಿ ದೂರ ಸರಿದಿದ್ದ ಕಪ್ಪು ಮೋಡಗಳು ಒಟ್ಟುಗೂಡಲಾರಂಭಿಸಿದವು. ಅದೆಲ್ಲೋ ಮೆಲ್ಲ ಗುಡುಗು ಬಡಿಯತೊಡಗಿದವು..!!


ನೀರನ್ನು ಕೆಳತೋಟಕ್ಕೆ ತಿರುಗಿಸಿ ಅಪ್ಪಯ್ಯ ರಭಸದಿಂದ ಬಂದು ಕೂಗೊಡೆದರು. ಅಣ್ಣ, ನಾನು, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರೂ ಕಣಕ್ಕೆ ಓಡಿ ಅಲ್ಲಿ ಒಣಗಿಸಿಟ್ಟ ಅಡಿಕೆ, ವಾಟೆಹುಳಿ, ಏಲಕ್ಕಿ, ಬೀಜಕ್ಕೆಂದು ಇಟ್ಟಿದ್ದ ಸೌತೆ, ಕುಂಬಳಬೀಜವನ್ನು ಬೇಗ ಬೇಗ ಎತ್ತಲು ಆರಂಭಿಸಿದೆವು.

ಅಷ್ಟರಲ್ಲಾಗಲೇ ಶುರು ರಾತ್ರಿಯ ಕತ್ತಲು ಆವರಿಸಿಯಾಗಿತ್ತು! ಅಮ್ಮ ಗೇಟಿನ ಬಳಿ ಬಂದ ದನಗಳನ್ನು ಉಣಗೋಲು ತೆಗೆದು ಕೊಟ್ಟಿಗೆಯಲಿ ಕಟ್ಟತೊಡಗಿದಳು, ಎಲ್ಲರ ನಿರೀಕ್ಷೆಯಂತೆ ಕಾದು ಕುಳಿತಿದ್ದ ನಮಗೆ ಮಳೆ ಸುಳ್ಳಾಗಲಿಲ್ಲ!! ನಿರೀಕ್ಷೆಗೂ ಮೀರಿ ಆಲಿಕಲ್ಲು ಸಹಿತ ಮಳೆ ಬಂದೇಬಿಟ್ಟಿತು‌‌‌. ನಾವು ಮಲೆನಾಡಿಗರಿಗೆ ಈ ಮೊದಲ ಮುಂಗಾರೇ ಹಂಚಿನ ನಡುವಿನ ತೂತುಗಳನ್ನು, ಜಗುಲಿ-ಕಡುಮಾಡುಗಳಲ್ಲಿನ ಮಳೆಹನಿ ಸೋರುವ ಜಾಗಗಳನ್ನು ತೋರಿಸಿಕೊಡುತ್ತವೆ..! ಅಂತೆಯೇ ನೀರು ಹನಿಗುಟ್ಟುವ ಜಾಗಗಳಿಗೆಲ್ಲ ಅಡಿಗೆಮನೆಯ ಪಾತ್ರೆಗಳನ್ನು ತಂದು ಇಟ್ಟಿದ್ದೂ ಆಯಿತು.

ಮಳೆಯ ಮುನ್ಸೂಚನೆ ಮುಂಚೆಯೇ ಇದ್ದುದರಿಂದ ಮನೆಗೆ ಮಳೆಗಾಲಕ್ಕೆ ಬೇಕಾಗುವ ಕಟ್ಟಿಗೆ, ಹಪ್ಪಳ - ಸಂಡಿಗೆ ಎಲ್ಲವೂ ಬೇಕಾದಷ್ಟು ಶೇಕರಣೆಯಾಗಿತ್ತು. ಇತ್ತ ಮಳೆ ನಿಲ್ಲುವ ಮುನ್ಸೂಚನೇ ೭ ಗಂಟೆಯಾದರೂ ಬರಲೇ ಇಲ್ಲ, ಇನ್ನು ಕರೆಂಟು ೩-೪ ದಿನಗಟ್ಟಲೇ ಬರುವುದೇ ಡೌಟು.

ಎಷ್ಟು ಆಧುನಿಕತೆಗೆ ನಾವು ಒಗ್ಗಿಕೊಂಡಿದ್ದೇವೆಂದರೇ ಠೀವಿ, ಫ್ರಿಜ್ನಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳು ಬಲಗಾಲಿಟ್ಟು ನಮ್ಮನೆಗೆ ಬಂದಾಗಿತ್ತು. ಸಿಗ್ನಲ್ ಸರಿಯಾಗಿ ಸಿಗದಿದ್ದರೂ ಸಹ ಎಲ್ಲರ ಕೈಗೊಂದು ಮೊಬೈಲ್ ಬಂಧಿಯೂ ಆಗಿತ್ತು. ಇನ್ನೊಂದು ವಿಶೇಷವೆಂದರೆ ಮಲೆನಾಡಿಗರ ಮನೆಯಲ್ಲಿ ರಾತ್ರಿಯಾಗುವುದು ಬಹುಬೇಗ. ಎಷ್ಟೆಂದರೇ ಪುಟ್ಟಗೌರಿ ಮದುವೆಯ ವೇಳೆಗೆ ಊಟ, ಅಗ್ನಿಸಾಕ್ಷಿಯ ವೇಳೆಗೆ ನಿದ್ರೆಗೆ ಜಾರುತ್ತಿದ್ದೆವು.

ಈಗ ಗಂಟೆ ೭ ಆಗಿದ್ದರಿಂದ ಸಂಧ್ಯಾವಂದನೆ ಮಾಡಿ ಊಟಕ್ಕೆ ತಯಾರಾದೆವು, ಅಮ್ಮ ಚಿಕ್ಕಮ್ಮನ ಭಜನೆಯ ತಾಳ ಗುಂಯ್ ಗುಡುವ ಹುಳಗಳ ಸದ್ದಿನೋಡನೆ ಬೆರೆತು ಹೋಗವು.

ಆದರೆ ಊಟಕ್ಕೆ ಕೂರವ ಪಡಸಾಲೆಯಲ್ಲಿ ಮಾತ್ರ ಅಮ್ಮ ಬೆಳಿಗ್ಗೆ ಹಲಸಿನ ಕೊಟ್ಟೆ ಕಡುಬಿಗಾಗಿ ನೆನಸಿಟ್ಟ ಉದ್ದು ಮತ್ತು ಅಕ್ಕಿಗಳು ರುಬ್ಬುವ ಕಲ್ಲಿನ ಮೇಲಿಟ್ಟ ಗ್ರೈಂಡರ್ ನನ್ನೂ ತದೇಕಚಿತ್ತದಿಂದ ನೋಡತೊಡಗಿದವು. ಅದರಲ್ಲಿನ ಒಂದು ಉದ್ದಿನಬೇಳೆ ನನ್ನ ಹೆಸರಿಡಿದು ಕರೆದಾಗ ಬೆಂಗಳೂರಿನ ಯಾರದೋ ಬಾಡಿಗೆಯ ಮನೆಯಲ್ಲಿ lockdown ನಿಂದ ಮಲಗಿದ್ದ ನನಗೆ ಎಚ್ಚರವಾಯಿತು. ನಾವು ಮರೆತಿರುವ, ಬಿಟ್ಟುಬಂದಿರುವ ನೆನಪುಗಳ ಲಕೋಟೆ ಸಣ್ಣ ಹನಿಯಾಗಿ ಹೊರಬಂದಿತು...!

-- ಕೌಶಿಕ ಜೋಯ್ಸ್

Tuesday, April 21, 2020

ಕೋಟಿ ಕೋಟಿ ರೋಗಾಣುಗಳ ನಯವಂಚಕತೆಯಿಂದ

ಕೋಟಿ ಕೋಟಿ

ರೋಗಾಣುಗಳ

ನಯವಂಚಕತೆಯಿಂದ



ಕೋಟಿ ಜನ

ರೋಸಿ ಹೋಗಿ

ನಲುಗು ತಿಹರು



ಕೋರಿಕೆಗೂ ಬಗ್ಗದ ಜನ

ರೋಡಿನಲ್ಲಿ ಬಿದ್ದು

ನಶಿಸಿಹೋಗುತಿಹರು



ಕೊರೋನ

ರೋಷಾವೇಷ

ನಂಬದ ರೀತಿ ಹೊಕ್ಕಿದೆ



ಕೊರೋನ

ರೋಗದಿಂದ ಮುಕ್ತಿಗೆ

ನಡು ಬೀದಿಗೆ ಬರಬಾರದು



ಕೊಬ್ಬು ಬಿಟ್ಟು

ರೋಗ ಕಂಜಿ ಮನೆಯಲ್ಲಿದ್ದರೆ

ನಮ್ಮ ನಾವು ಉಳಿಸಬಹುದು



ಕೊರೋನ

ರೋಗದಿಂದ

ನಾವು ಮುಕ್ತ ಮುಕ್ತ ಎಂದು

ಸಾರಬಹುದು.



ಆಗಬಹುದು ಎಲ್ಲರೂ ಒಮ್ಮೆ

ಶಿಸ್ತಿನ ಸಿಪಾಯಿ

ತೋರಬಹುದು ಸರ್ವೇಜನ ಸುಖಿನೋ ಭವ

ಭಾರತವು ಎಂದು. 

--ಕೆ.ಸಿ. ಗೀತ

ಮಾನವ ಜನ್ಮ ದೊಡ್ಡದು

ಮಾನವ ಜನ್ಮ ದೊಡ್ಡದು

ಇದ ಹಾಳುಮಾಡಿಕೊಳ್ಳಬೇಡಿ

ಹುಚ್ಚಪ್ಪಗಳಿರಾ. ಎನ್ನುವ

ದಾಸಶ್ರೇಷ್ಠರ ನುಡಿ ನೆನಪಿಸಿಕೊಳ್ಳೋಣ
 
--ಕೆ.ಸಿ. ಗೀತ

ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಅನ್ಬೇಡಿ.

ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಅನ್ಬೇಡಿ.

ಕೊರೋನ ಇದ್ರೆ ಬಾಯ್ ಬಿಡಿ.

ದೇವರಾಗಿ ಡಾಕ್ಟರ್ ಇದ್ದಾರೆ.

ಬದುಕು ಬಂಗಾರ ಮಾಡ್ತಾರೆ.

--ಕೆ.ಸಿ. ಗೀತ

ಕೊರೋನ ಒಬ್ಬರಿಂದ ಒಬ್ಬರಿಗೆ ಹರಡದಿರೋಣ.

ಕೊರೋನ

ಒಬ್ಬರಿಂದ

ಒಬ್ಬರಿಗೆ

ಹರಡದಿರೋಣ.

ಕುವೆಂಪು

ನುಡಿ

ನೆನೆಯೋಣ.

ಅಲ್ಪ ಮಾನವ ನಾಗದೆ

ವಿಶ್ವ ಮಾನವರಾಗೋಣ

--ಕೆ.ಸಿ. ಗೀತ

Saturday, April 18, 2020

ಹೇಗಿದ್ದ ಕಾಲ ಹೇಗಾಯಿತು ...

ಹೇಗಿದ್ದ ಕಾಲ ಹೇಗಾಯಿತು

ನನ್ನ ಮಗ ನನ್ನ ಅಳಿಯ ನನ್ನ ಮಗಳು ನನ್ನ ಸೊಸೆ ವಿದೇಶದಲ್ಲಿ ಇದ್ದಾರೆ ಎಂದು ಹೆಮ್ಮೆ ಪಡುತ್ತಿದ್ದ ನಮಗೆ ಇಂದು ವಿದೇಶ ದ ಹೆಸರು ಕೇಳಿದರೆ ಹೆದರಿಕೊಳ್ಳುವ ಪರಿಸ್ಥಿತಿ . ಗೆಳೆಯ ವಿದೇಶದಿಂದ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣ ಪಾರ್ಟಿ ಬುಕ್ ಮಾಡುತ್ತಿದ್ದವರು, ಗೆಳೆಯರನ್ನು ಕರೆದುಕೊಂಡು ಬರಲು ಏರ್ ಫೇೂರ್ಟಿ ಗೆ ಕಾರು ಹಿಡಿದು ಕೊಂಡು ಹೊಗುತ್ತಿದ್ದವರು ಈಗ ಗೆಳೆಯ ವಿದೇಶದಿಂದ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣವೇ ಫೇೂನ್ ಸ್ವಿಚ್ ಆಫ್‌ ಮಾಡಿಕೊಳ್ಳುವ ಪರಿಸ್ಥಿತಿ .ಪರ ಊರಿನಿಂದ ಸಂಬಂಧಿಕರು ಬರುವ ಸುದ್ದಿ ತಿಳಿದಾಗ ಸಂಭ್ರಮಿಸುತ್ತಿದ್ದ ನಮಗೆ ಇಂದು ಯಾಕಾಪ್ಪ ಬರುತ್ತಾರೆ ಎನ್ನುವ ಪರಿಸ್ಥಿತಿ . ಪಕ್ಕದ ಮನೆಯ ಹುಡುಗ ವಿದೇಶ ದಿಂದ ಬರುತ್ತಿದ್ದಾನೆ ಎಂದಾಗ ಕಾತರದಿಂದ ಕಾಯುತ್ತಿದ್ದ ಆಚೆ ಈಚೆ ಮನೆಯವರು ಈಗ ಬರುವ ಸುದ್ದಿ ತಿಳಿದಾಗ ತಮ್ಮಮನೆಗೆ ಮಾತನಾಡಿಸಲು ಬರುತ್ತಾನೆ ಎಂದು ತಮ್ಮಮನೆಯ ಬಾಗಿಲನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ. ಮೈತುಂಬ ಮುಚ್ಚಿ ಕೊಳ್ಳಲು ಬಟ್ಟೆ ಇದ್ದರೂ ವಿದೇಶಿ ಫ್ಯಾಷನ್ ಗೆ ಮರುಳಾಗಿ ಅರೆ ಬರೆ ಬಟ್ಟೆ ಧರಿಸುತ್ತಿದ್ದವರು ಈಗ ಬಾಯಿಯನ್ನು ಸಹ ಬಿಡದೆ ಮುಚ್ಚಿ ಕೊಳ್ಳುವ ಪರಿಸ್ಥಿತಿ. ಯಾವುದೇ ಕೆಲಸ ವಿಲ್ಲದಿದ್ದರು ಒಂದು ಕ್ಷಣವೂ ಮನೆಯಲ್ಲಿ ಕುಳಿತು ಹಿರಿಯರೊಂದಿಗೆ ಮಾತನಾಡುವ ವ್ಯವದಾನವಿಲ್ಲದವರು ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ. ಮನೆಯ ತಿಂಡಿ ತಿನಿಸುಗಳು ಬಾಯಿಗೆ ರುಚಿಸದೆ ಬಗೆ ಬಗೆಯ ತಿಂಡಿಗಾಗಿ ಆನ್ ಲೈನ್ ನಲ್ಲಿ ಬುಕ್ ಮಾಡುತ್ತಿದ್ದವರು ಗಂಜಿ ಸಿಕ್ಕಿದರು ಸಾಕಪ್ಪ ಎನ್ನುವ ಪರಿಸ್ಥಿತಿ. ಕಂತೆ ಕಂತೆ ಗರಿಗರಿ ನೇೂಟು ಹಿಡಿದು ಬರಬರನೆ ಎಣಿಸುತ್ತಿದ್ದವರು ಕರೆಸ್ಸಿ ನೇೂಟನ್ನು ಮುಟ್ಟಲು ಭಯಪಡುವ ಪರಿಸ್ಥಿತಿ. ಯಾವುದೇ ಪರಿಸರ ಪ್ರೇಮಿಗಳ ಹೇೂರಾಟಕ್ಕೆ ಮಣಿಯದೆ ಹಗಲಿರುಳೆಂನದೆ ಹೊಗೆಯುಗುಳುತ್ತಿದ್ದ ಕಾರ್ಖಾನೆಗಳು ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ. ಗಿಜಿ ಗಿಜಿ ಗುಟ್ಟುತ್ತಿದ್ದ ಪಟ್ಟಣಗಳು ಹೆದ್ದಾರಿಗಳು ಬಿಕೇೂ ಎನ್ನುವ ಪರಿಸ್ಥಿತಿ. ಊರಿನಲ್ಲಿ ಬೇಕಾದಷ್ಟು ಹೊಲ ಗದ್ದೆಗಳಿದ್ದರು ಅದೆಲ್ಲವನ್ನು ಬಿಟ್ಟು ಪೇಟೆ ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಬಂಗಲೆ ಕಟ್ಟಿಕೊಂಡವರು ಹಡಿಲು ಬಿದ್ದ ಗದ್ದೆ ಕಡೆಗೆ ಮುಖ ಮಾಡ ಬೇಕಾದ ಪರಿಸ್ಥಿತಿ. ತಂದೆ ತಾಯಿಯರನ್ನು ಅನಾಥಶ್ರಮದಲ್ಲಿ ಬಿಟ್ಟು ಕೊನೆಗೆ ಅವರ ಶವಸಂಸ್ಕಾರಕ್ಕು ಬರಲು ಬಿಡುವಿಲ್ಲದವರು ತಮ್ಮ ಹುಟ್ಟೂರಿಗೆ ಬರಲು ಹರಸಾಹಸ ಪಡುವ ಪರಿಸ್ಥಿತಿ. ಹತ್ತಾರು ವರುಷ ಊರಕಡೆ ಮುಖಮಾಡದವರು ಊರಿಗೆ ಓಡೊಡಿ ಬರುವ ಪರಿಸ್ಥಿತಿ. ಹಳ್ಳಿ ಜೀವನ ಎಂದರೆ ಮೂಗು ಮುರಿಯುತ್ತಿದ್ದವರು ಜೀವ ಭಯದಿಂದ ಹಳ್ಳಿಗೆ ಧಾವಿಸುವ ಪರಿಸ್ಥಿತಿ ಹೇಗಿದ್ದ ಕಾಲ ಹೇಗಾಯಿತು. 

ನಮ್ಮ ಆದಿಮಾನವರು ಕಾಡುಮೇಡು ಅಲೆದಾಡಿ ಗಡ್ಡೆ ಗೆಣಸುಗಳನ್ನು ತಿನ್ನುತ್ತಿದ್ದರು ಎಂಬುದನ್ನು ಇತಿಹಾಸದಲ್ಲಿ ಓದಿದ ನೆನಪು, ಮುಂದೆ ನಮಗು ಆ ಕಾಲ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೇಗಿದ್ದ ಕಾಲ ಹೇಗಾಯಿತು .ಇದಕ್ಕೆ ನಾವು ಕೊಡುವ ಕಾರಣ ಪ್ರಕೃತಿಯ ಮುನಿಸು. ಇದು ಪ್ರಕೃತಿಯ ಮುನಿಸಲ್ಲ ಮಾನವನ ಸ್ವಾರ್ಥ ಹಾಗು ಅತಿಯಾಸೆಯ ಪರಮಾವಧಿ. ಇದಕ್ಕೆ ಪರಿಹಾರ ಪರಮಾತ್ಮ ನೀಡಿವುದಿಲ್ಲ ಮಾನವನೆ ಕಂಡುಕೊಳ್ಳಬೇಕು. ಕಾಲ ಬದಲಾಗಿಲ್ಲ ಬದಲಾದ ನಾವು ಬದಲಾಗಬೇಕು. ಇನ್ನಾದರು ಸ್ವಾರ್ಥ ಅಸೂಯೆ ದುರಾಸೆಗಳನ್ನು ಬಿಟ್ಟು ನಿಜಮಾನವರಾಗಿ ಬದುಕಲು ಕಲಿಯೇೂಣ. ನಮ್ಮ ಮಣ್ಣಿನ ಸಂಸ್ಕಾರ ಸಂಸ್ಕೃತಿಗಳನ್ನು ಗೌರವಿಸೇೂಣ, ಪಾಲಿಸೇೂಣ.
                                                    
--✍️ ಭಾಪೂ (ವ್ಯಾಟ್ಸಾಪ್ ಕೃಪೆ)

ತಬ್ಬಲಿ …

"ತಬ್ಬಲಿ"....

"ಅಪ್ಪಾ ನಂದು ಲಾಸ್ಟ್ ಸೆಮ್ ರೆಸಲ್ಟ್ ಬಂತು, ಈ ಸಾರಿನೂ ಡಿಸ್ಟಿಂಕ್ಷನ್ ನಲ್ಲಿ ಆಗಿದೆ." ಎಂದು ಮಗ ಪೋನಿನಲ್ಲಿ ಹೇಳಿದಾಗ ಸಾಂಬಶಿವರಾಯರಿಗೆ ಸಂತಸದಿಂದ ಕಣ್ಣಲ್ಲಿ ನೀರುಕ್ಕಿತು. ತಾವು ಇಷ್ಟು ದಿನ ಪಟ್ಟ ಶ್ರಮ, ಕನಸುಗಳಿಗೆ ದೇವರು ಫಲ ಕೊಟ್ಟಿದ್ದಾನೆ ಅನ್ನಿಸಿತು. ಕಣ್ಣೊರೆಸಿಕೊಳ್ಳುತ್ತಲೇ "ಹೌದಾ, ತುಂಬ ಸಂತೋಷವಾಯಿತು ಕಣೋ. ಅಮ್ಮನಿಗೂ ಹೇಳ್ತೀನಿ ಖುಷಿ ಪಡ್ತಾಳೆ, ನೀನು ಹೇಗೂ ನಾಡಿದ್ದು ಹಬ್ಬಕ್ಕೆ ಬರ್ತೀಯಲ್ಲ, ಹುಷಾರು" ಅನ್ನುತ್ತಾ ಒಳಗಿದ್ದ ಮಡದಿಯೊಂದಿಗೆ ಸಂತೋಷ ಹಂಚಿಕೊಳ್ಳಲು ಒಳನಡೆದರು.
ರಾಯರಿಗೆ ಈಗ ಅರವತ್ತರ ಸನಿಹ. ಇನ್ನೇನು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಕಡು ಬಡತನದಲ್ಲಿ ಇದ್ದರೂ ಕಷ್ಟ ಪಟ್ಟು ಓದಿದ್ದರಿಂದಾಗಿ ಕೇಂದ್ರಸ್ವಾಮ್ಯದ ಸರ್ಕಾರಿ ಸಂಸ್ಥೆಯಲ್ಲಿ ವಶೀಲಿ ಇಲ್ಲದೆ ಕೆಲಸ ಸಿಕ್ಕಿತ್ತು. ಓದುತ್ತಿರುವಾಗಲೇ ತಂದೆ ತಾಯಿಗಳು ತೀರಿಕೊಂಡಿದ್ದರಿಂದ ಮೈಸೂರಿನ ಹಾಸ್ಟೆಲ್ ಒಂದರಲ್ಲಿ ಯಾರೋ ಪುಣ್ಯಾತ್ಮರು ಉಚಿತ ಸೀಟು ಕೊಡಿಸಿದ್ದರಿಂದ ವಿದ್ಯಾಭ್ಯಾಸ ಪೂರ್ಣವಾಗಿತ್ತು. ಒಳ್ಳೆಯ ಕೆಲಸವಿದ್ದರಿಂದ, ಅನಾಥನಾದರೂ, ಹಿರೇಗದ್ದೆಯ ರಾಮಕೃಷ್ಣಯ್ಯ ತಮ್ಮ ಮಗಳು ಗಿರಿಜಳನ್ನು ಕೊಟ್ಟು ಮದುವೆ ಮಾಡಿದ್ದರು. ಮದುವೆಯಾದ ಮೇಲೆ ಬೆಳಗಾವಿಯಿಂದ ಹರಿಹರಕ್ಕೆ ವರ್ಗಾಯಿಸಿಕೊಂಡು ಅಲ್ಲಿಯೇ ನೆಲೆಸಿದ್ದರು. ಮರು ವರ್ಷದಲ್ಲಿಯೇ ಮಹೀಧರ ಹುಟ್ಟಿದ್ದು. ಅವನೂ ಓದಿನಲ್ಲಿ ಚೂಟಿಯಾಗಿ ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳಿಸಿ ಸಿ.ಇ.ಟಿ ಯಲ್ಲಿ ಒಳ್ಳೆ ರ್ಯಾಂಕ್ ಬಂದಿದ್ದರಿಂದಾಗಿ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಸೀಟೂ ಸಿಕ್ಕಿ ಪ್ರತಿ ವರ್ಷವೂ ಡಿಸ್ಟಿಂಕ್ಷನ್ ನಲ್ಲೇ ಪಾಸಾಗುತ್ತಿದ್ದ. ಅವನು ಹೈಸ್ಕೂನಲ್ಲಿರುವಾಗನಲ್ಲಿರುವಾಗಲೇ ಕೋಲಾರದ ಘಟಕಕ್ಕೆ ಎರಡು ವರ್ಷ ವರ್ಗಾವಣೆಯಾದಾಗಲೂ ಅವನ ಓದಿಗೆ ತೊಂದರೆ ಆಗದಿರಲೆಂದು ತಾವೊಬ್ಬರೇ ಕೋಲಾರದಲ್ಲಿ ನೆಲೆಸಿ ಎರಡು ವರ್ಷ ಹಾಗೂ ಹೀಗೂ ಕಳೆದು ಬಂದಿದ್ದರು. ಕೋಲಾರದಲ್ಲಿ ಇವರ ಕೋಣೆಯ ಪಕ್ಕದಲ್ಲಿಯೇ ಇದ್ದ ನರ್ಸ್ ಒಬ್ಬಳು ಗಂಡನನ್ನು ಕಳೆದುಕೊಂಡ ಮೇಲೆ ಮಗನನ್ನು ಓದಿಸಲು ಪರದಾಡುತ್ತಿದ್ದಾಗ ಇವರು ಅವಳಿಗೆ ಸಹಾಯ ಮಾಡಿದ್ದರಿಂದಾಗಿ ಊಟ ತಿಂಡಿ ಅವರ ಮನೆಯಿಂದಲೇ ಸರಬರಾಜಾಗುತ್ತಿತ್ತು. ಇವರಿಗೂ ಹೊರಗಿನ ಊಟಕ್ಕಿಂತ ಇದೇ ಉತ್ತಮ ಎನ್ನಿಸಿತ್ತು ಎರಡು ವರ್ಷ ಕಳೆದಿದ್ದು ಗೊತ್ತಾಗಲಿಲ್ಲ. ಅಂತೂ ಅವನ ಓದು ಒಂದು ಹಂತಕ್ಕೆ ಬಂದಿದ್ದರಿಂದ ಇವರು ಸದ್ಯದಲ್ಲಿಯೇ ನಿವೃತ್ತರಾಗಲಿರುವುದರಿಂದ ಮುಂದೆ ಓದಿಸುವ ಬಗ್ಗೆ ಯೋಚಿಸಿರಲಿಲ್ಲ. ಅವನೊಂದು ಕೆಲಸ ಹಿಡಿದು ನೆಲೆ ನಿಂತರೆ ಸಾಕು ಅನ್ನಿಸಿತ್ತು.

"ಹಬ್ಬ ಬಂತೆಂದರೆ ಬಸ್, ರೈಲಿನಲ್ಲಿ ಅದೇನು ರಷ್ ಅಪ್ಪಾ, ಬರೀ ಜನ. ಅದೂ ಕೊಳಕು ಎಲ್ಲೆಂದರಲ್ಲಿ ಉಗಿಯುತ್ತಿರುತ್ತಾರೆ, ಬರಬೇಕಾದರೆ ಸಾಕಾಯಿತು" ಎಂದು ಬ್ಯಾಗನ್ನು ಸೋಫಾ ಮೇಲೆ ಕುಕ್ಕಿ ಕುಳಿತ ಮಗನನ್ನೇ ನೋಡುತ್ತಾ ರಾಯರೆಂದರು "ಹೌದು ಕಣಪ್ಪಾ, ಮನೆ ಮಂದಿಯನ್ನು ಬಿಟ್ಟು ಇರುತ್ತಾರಲ್ಲ. ಈ ಹಬ್ಬದ ಸಂದರ್ಭದಲ್ಲಿಯಾದರೂ ಅವರೊಡನೆ ಕಾಲಕಳೆಯುವ ಅಂತ ಜನಕ್ಕೆ ಧಾವಂತ , ಏಳು ಕೈಕಾಲು ತೊಳೆದುಕೋ ಅಮ್ಮಾ ಅಕ್ಕಿರೊಟ್ಟಿ ಚಟ್ನಿ ಮಾಡಿ ಕಾಯ್ತಿದಾಳೆ, ತಿಂಡಿ ತಿನ್ನೋಣ " ಎಂದರು.

"ಮಹೀ ಎಷ್ಟು ಬಡವಾಗಿದೀಯಲ್ಲೋ, ಹಾಸ್ಟೆಲ್ ಊಟ ಮೈಗೆ ಹಿಡೀತಾ ಇಲ್ವಾ? ತಿಂಡಿ ತಿನ್ನು, ಆಮೇಲೆ ಎಣ್ಣೆ ಹಚ್ಚುತ್ತೇನೆ , ಚೆನ್ನಾಗಿ ಬಿಸಿನೀರು ಸ್ನಾನ ಮಾಡುವಿಯಂತೆ." ಎಂದ ಗಿರಿಜಮ್ಮ ಲಗುಬಗೆಯಿಂದ ಮಗನಿಗೆ ತಿಂಡಿ ಬಡಿಸಲು ಅನುವಾದರು.

ಮಧ್ಯಾಹ್ನ ಊಟವಾದ ಮೇಲೆ ರಾಯರು " ಮುಂದೇನು ಮಾಡ್ಬೇಕು ಅಂತಿದೀಯಾ? ಯಾವುದಾದರೂ ಕಂಪನಿಗೆ ಹಾಕಿಕೊಂಡಿದ್ದೀಯಾ? ಎಂದರು. "ಇಲ್ಲಪ್ಪಾ, ಕಂಪನಿ ಕೆಲಸಕ್ಕೆ ಹೋಗುವುದಾದರೆ ಕ್ಯಾಂಪಸ್ ನಲ್ಲಿಯೇ ಬಂದಿತ್ತು. ನಾನು ಎಂ.ಎಸ್. ಮಾಡೋಣ ಅಂತಿದೀನಿ, ಕೆನಡಾದಲ್ಲಿ. ಪ್ರಾಸ್ಪೆಕ್ಟಸ್ ಎಲ್ಲಾ ತಂದಿದ್ದೀನಿ" ಎನ್ನುತ್ತಾ ಬ್ಯಾಗ್ ಬಿಚ್ಚ ತೊಡಗಿದ. ಇದರ ಬಗ್ಗೆ ತನಗೆ ಸುಳಿವೂ ಕೊಡದೆ ಒಂದು ಮಾತೂ ಕೇಳದ ಬಗ್ಗೆ ರಾಯರಿಗೆ ಪಿಚ್ಚೆನಿಸಿದರೂ ತೋರಿಸಿಕೊಳ್ಳದೇ " ಅದಕ್ಕೆ ತುಂಬಾ ದುಡ್ಡು ಖರ್ಚಾಗುತ್ತೇನೋ ಅಲ್ವಾ? ನನಗೆ ನಿವೃತ್ತಿಯಾಗುವುದರಿಂದ ಬ್ಯಾಂಕಿನಲ್ಲಿ ಸಾಲವೂ ಸಿಗಲಾರದು " ಎಂದರು.
 
"ನೀನೇನೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡಪ್ಪ. ಅವರೇ ಸ್ಕಾಲರ್ಶಿಪ್ ಕೊಡ್ತಾರೆ. ತಿಂಗಳಿಗೆ ಮೂರು ಸಾವಿರ ಕೆನಡಿಯನ್ ಡಾಲರ್, ಅಂದರೆ ಹತ್ತಿರ ಹತ್ತಿರ ಒಂದುವರೆ ಲಕ್ಷ ರೂ. ಅಪ್ಪಾ. ಅಲ್ಲಿ ಖರ್ಚೂ ಹಾಗೇ ಇರುತ್ತೆ ಆದರೆ ಸಾಕಾಗುತ್ತೆ. ಎರಡು ವರ್ಷ ಆದಮೇಲೆ ಅವರೇ ಕೆಲಸ ಕೊಡುತ್ತಾರೆ. ವಾರ್ಷಿಕ ಒಂದು ಕಾಲು ಲಕ್ಷ ಡಾಲರ್ ಪ್ಯಾಕೇಜ್" ಎಂದು ಕಣ್ಣರಳಿಸಿದ. " ನೀನು ಇಲ್ಲಿಂದ ಪ್ರಯಾಣಿಸುವ ಮತ್ತಿತರ ಖರ್ಚು ನೋಡಿಕೊಂಡರೆ ಸಾಕು" ಎಂದ, ರಾಯರು ಮೌನವಾದರು.
 
ರಾತ್ರಿ ಮಲಗಿದಾಗ ಹೆಂಡತಿಯೊಡನೆ ವಿಷಯವೆಲ್ಲಾ ವಿವರಿಸಿದಾಗ ಗಿರಿಜಮ್ಮಾ "ಅವನು ಎಲ್ಲಾ ನಿರ್ಧರಿಸಿ ಕೊಂಡ ಮೇಲೆ ನಾವು ಬೇಡ ಎಂದರೆ ಕೇಳುತಾನೆಯೇ? " ಎಂದರು. ಇದುವರೆಗೆ ಕೂಡಿಟ್ಟ ಹಣದಲ್ಲಿ ಮಡದಿಗೆ ಎರಡು ಜೊತೆ ಬಳೆ ಮಾಡಿಸಿದರಾಯಿತು ಈಗ ಬಂಗಾರದ ಬೆಲೆ ಗಗನಕ್ಕೇರಿದಿಯಲ್ಲಾ ಸ್ವಲ್ಪ ಇಳಿದ ಮೇಲೆ ನೋಡೋಣ ಎಂದು ಕೊಂಡಿದ್ದ ರಾಯರಿಗೆ ಈಗ ಆ ಯೋಜನೆ ಕೈಬಿಡುವುದು ಅನಿವಾರ್ಯ ಎನ್ನಿಸಿತು. ಗಿರಿಜಮ್ಮನ ತುರ್ತು ಚಿಕಿತ್ಸೆಗಳಿಗಾಗಿ ಸ್ವಲ್ಪ ತೆಗೆದಿಟ್ಟು ಕೊಂಡರೆ ಉಳಿದ ಎರಡು ಮೂರು ಲಕ್ಷವಾದರೂ ಈಗ ಸದ್ಯಕ್ಕೆ ಅವನ ಖರ್ಚಿಗೆ ತೆಗೆದಿರಿಸಬೇಕು ಅಂತ ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದರು. "ವೀಸಾ, ಪಾಸ್ ಪೋರ್ಟ್ ಮಾಡಿಸಬೇಕಪ್ಪ" ಎಂದು ಮರುದಿನವೇ ಹೊರಟು ನಿಂತ ಮಗನನ್ನು ತಡೆಯಬೇಕು ಅನ್ನಿಸಲಿಲ್ಲ. ಅವನ ಖಾತೆಗೆ ಸ್ವಲ್ಪ ಹಣ ಹಾಕಿ "ಹುಷಾರಾಗಿ ಹೋಗಪ್ಪಾ " ಎಂದು ಕಳಿಸಿಕೊಟ್ಟರು.
 
ಮರುವಾರದಲ್ಲಿಯೇ "ಕೆನಡಾದಲ್ಲಿ ಎಂ.ಎಸ್. ಗೆ ಸೀಟು ಸಿಕ್ಕಿತಪ್ಪಾ, ಮುಂದಿನ ತಿಂಗಳು ಮೊದಲ ವಾರ ಜಾಯಿನ್ ಆಗಬೇಕು, ವೀಸಾ ಪಾಸ್ ಪೋರ್ಟ್ ಬಂದಿದೆ, ವಿಮಾನ ಟಿಕೆಟ್ ಬುಕ್ ಮಾಡ ಬೇಕು ಅಂದಾಗ ರಾಯರು ಬ್ಯಾಂಕಿನಿಂದ ಅವನಿಗೆ ಬೇಕಾದಷ್ಟು ಹಣವನ್ನು ವರ್ಗಾಯಿಸಿದರು. ಮುಂದೆ ಎರಡು ಮೂರು ವಾರ ಕಳೆದದ್ದೇ ಗೊತ್ತಾಗಲಿಲ್ಲ. ಬೇಡ ಬೇಡವೆಂದರೂ ಗಿರಿಜಮ್ಮ "ದಾರಿಯಲ್ಲಿ ತಿನ್ನಲಿಕ್ಕಾಗುತ್ತೆ" ಅಂತಾ ನಿಪ್ಪಟ್ಟು, ಚಕ್ಕುಲಿ ಕೋಡುಬಳೆಯ ಬಾಕ್ಸ್ ರೆಡಿ ಮಾಡಿದ್ದರು.
 
"ಫೋನ್ ಮಾಡ್ತಾ ಇರೋ, ಅಲ್ಲಿ ಇಲ್ಲಿ ಜಾಸ್ತಿ ತಿರಗಬೇಡಾ, ಊಟ ತಿಂಡಿ ಸರಿ ಮಾಡು, ಇಂಡಿಯನ್ ಫುಡ್ ಸಿಗುತ್ತೆ ಅಲ್ವಾ, ರುಕ್ಮಣಕ್ಕನ ಸೋದರಮಾವನ ಮಗಳು ಅಲ್ಲಿ ಎಲ್ಲೋ ಇರೋದಂತೆ ಬಿಡುವಾದಾಗ ಹೋಗಿ ಬರ್ತಾಯಿರು" ವಿಮಾನ ಹತ್ತುವರೆಗೂ ಗಿರಿಜಮ್ಮನ ಉಪದೇಶ ನಡೆದೇ ಇತ್ತು. ಅವನನ್ನು ಕಳಿಸಿಕೊಟ್ಟು ರಾತ್ರಿಯ ರೈಲಿನಲ್ಲಿ ಹರಿಹರಕ್ಕೆ ದಂಪತಿಗಳಿಬ್ಬರೂ ವಾಪಾಸು ಬಂದರು
 
ಮುಂದೆ ಕೆಲವು ವಾರ ಆಗಾಗ್ಗೆ ಫೋನ್ ಮಾಡುತ್ತಿದ್ದವ ಆಮೇಲೆ ತಿಂಗಳಿಗೊಮ್ಮೆ ಮಾಡಿದರೆ ಹೆಚ್ಚು. "ಬಲಿತ ಹಕ್ಕಿಗಳು ಗೂಡಲ್ಲಿರುತ್ವೇ? ನಾವೇ ಹೊಂದ್ಕೋಬೇಕು ಅಂತ ಮಡದಿಯನ್ನು ರಾಯರು ಸಮಾಧಾನಿಸುತ್ತಿದ್ದರು. ಎರಡು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ರಾಯರಿಗೆ ನಿವೃತ್ತಿಯೂ ಆಗಿ ಕೈಗೆ ಒಂದಷ್ಟು ಗಂಟೂ ಬಂದಿತ್ತು. ಮಗನಿಗೆ ಏನೂ ಕಳಿಸಬೇಕಿಲ್ಲದುದರಿಂದ, ನಿತ್ಯದ ಖರ್ಚಿಗೆ ನಿವೃತ್ತಿ ವೇತನವಿದ್ದುದರಿಂದ ಬಂದ ದುಡ್ಡಿನಲ್ಲಿ ಪೇಟೆಯಲ್ಲಿ ಒಂದು ದೊಡ್ಡ ಮನೆಯನ್ನೇ ಕೊಂಡು ಕೊಂಡರು. ಅಲ್ಲಿ ವಾಸಿಸುತ್ತಿದ್ದ ಇವರ ಸಹೋದ್ಯೋಗಿಯೊಬ್ಬರು ಮಗನೊಂದಿಗೆ ವಿದೇಶಕ್ಕೆ ತೆರಳಿದ್ದುದರಿಂದ ಸ್ವಲ್ಪ ಕಡಿಮೆ ಬೆಲೆಗೇ ಇವರಿಗೆ ಮಾರಿದ್ದರು. ಪಕ್ಕದಲ್ಲಿಯೇ ಒಂದು ದೊಡ್ಡ ನರ್ಸಿಂಗ್ ಹೋಮ್ ಇದ್ದುದರಿಂದ ರಾಯರಿಗೆ ಇಳಿವಯಸ್ಸಿನಲ್ಲಿ ಇದೇ ಸೂಕ್ತ ಜಾಗ ಎನ್ನಿಸಿ ಅದನ್ನು ಕೊಂಡು ಕೊಂಡರು. ಮಗನಿಗೆ ತಿಳಿಸಿದಾಗ " ಈಗ್ಯಾಕೆ ತೆಗೆದುಕೊಳ್ಳ ಬೇಕಿತ್ತಪ್ಪ? " ಎಂದು ಸುಮ್ಮನಾಗಿದ್ದ. "ಗೃಹಪ್ರವೇಶ ಮಾಡೋಣ ಬಾರೋ ಅಂತ ಅಮ್ಮ ಕರೆದರೂ ನನಗೀಗ ಪುರುಸೊತ್ತಿಲ್ಲ" ಎಂದು ಜಾರಿ ಕೊಂಡಿದ್ದ.

ಒಂದು ದಿನ ಮಹೀಧರ ಫೋನ್ ಮಾಡಿ " ಅಪ್ಪಾ ನನಗೆ ಇಲ್ಲಿಯೇ ಕಂಪನಿಯೊಂದರಲ್ಲಿ ಇಂಟರ್ನ್ ಶಿಪ್ ಸಿಕ್ಕಿದೆ. ಮುಂದೆ ಅಲ್ಲಿಯೇ ಕೆಲಸ ಅಂದ. "ಊರಿಗೆ ಯಾವಾಗ ಬರ್ತೀಯೋ? ನಿನಗೊಂದು ಮದುವೆ ಮಾಡಬೇಕು ಅಂತಾ ನಿನ್ನಮ್ಮ ತುದಿಗಾಲಲ್ಲಿ ನಿಂತಿದಾಳೆ" ಎಂದಾಗ ಮಾತನಾಡದೆ ಫೋನ್ ಇಟ್ಟಿದ್ದ. ಮತ್ತೊಂದು ದಿನ ಫೋನ್ ಮಾಡಿ " ಅಪ್ಪಾ ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು, ಫ್ರೀ ಇದೀರಾ ? ಎಂದ. "ರಿಟೈರ್ ಆದಮೇಲೆ ಪ್ರೀನೇ ಅಲ್ವೇನಪ್ಪ ಹೇಳು" ಎಂದಾಗ ವಿವರವಾಗಿ ಹೇಳಿದ್ದಿಷ್ಟು. ಅವನ ಜೊತೆ ಕಾಲೇಜಿನಲ್ಲಿ ಓದುತ್ತಿದ್ದ ಹಿರಣ್ಮಯಿ ಎಂಬ ಹುಡುಗಿಯನ್ನು ಅವನು ಇಷ್ಟ ಪಟ್ಟಿದ್ದು ಅವಳದೂ ಈ ವರ್ಷ ಡಿಗ್ರಿ ಮುಗಿದು ಅವಳಿಗೂ ಕೆನಡಾ ದಲ್ಲಿರುವ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಅಂತೆ. ಅವಳನ್ನು ಮದುವೆ ಆಗುವ ಅಂತಿದೀನಿ ಅವರ ತಂದೆ ನಿಮ್ಮ ಬಳಿ ಬಂದು ಮಾತನಾಡಬಹುದು ಅಮ್ಮನಿಗೂ ಹೇಳಿ ಎಂದ. ಇವನು ನಮಗೆ ವಿಷಯವಷ್ಟೇ ತಿಳಿಸುತ್ತಿದ್ದಾನೆ ಅನುಮತಿಯೇನೂ ಕೇಳುತ್ತಿಲ್ಲ ಎಂದು ಪಿಚ್ಚೆನಿಸಿದರೂ "ಕಾಲಾಯ ತಸ್ಮೈ ನಮಃ ಎನ್ನುತ್ತಾ ಮಡದಿಯನ್ನು ಸಮಾಧಾನಿಸಿದ್ದರು". 
 
ಮಾರನೆ ದಿನ "ಸಾಂಬಶಿವರಾಯರ ಮನೆ ಇದೇನಾ ? ಎನ್ನುತ್ತಾ ದಂಪತಿಗಳಿಬ್ಬರು ಮನೆಗೆ ಬಂದರು." ನೀವು ಯಾರೋ ಗೊತ್ತಾಗಲಿಲ್ಲ ಒಳಗೆ ಬನ್ನಿ ಕುಳಿತುಕೊಳ್ಳು ಆಸರೆಗೆ ಕೊಡಲೇ " ಎಂದರು ರಾಯರು. "ನಾನು ಮಧುಕರ ಭಟ್ ಅಂತಾ, ಇವಳು ನನ್ನ ಧರ್ಮ ಪತ್ನಿ ವನಜಾಕ್ಷಿ, ನಮ್ಮದು ಶಿರಸಿ ಬಳಿಯ ಒಂದು ಹಳ್ಳಿ. ಹಿರಣ್ಮಯಿ ನಮ್ಮ ಒಬ್ಬಳೇ ಮಗಳು ಮಹೀಧರರವರು ಫೋನ್ ನಲ್ಲಿ ವಿಷಯ ತಿಳಿಸಿರಬೇಕಲ್ಲಾ? ಎಂದಾಗ ಎಲ್ಲಾ ಅರ್ಥವಾಗಿ ಎಲ್ಲದಕ್ಕೂ ತಲೆದೂಗಿದ್ದರು. ಮುಂದಿನ ತಿಂಗಳೇ ಮದುವೆ ನಿಶ್ಚಯವಾಗಿ ಶಿರಸಿಯ ಕಲ್ಯಾಣಮಂದಿರದಲ್ಲಿ ಮದುವೆಯೂ ನಡೆಯಿತು. ಮದುವೆಗೆ ಬಂದಾಗಲೂ ಸಿಡಿ ಸಿಡಿ ಅನ್ನುತ್ತಲೇ ಇದ್ದ. "ಏನು ಜನಗಳಪ್ಪಾ, ಸ್ವಲ್ಪನೂ ಶಿಸ್ತೇ ಇಲ್ಲ. ಗಲೀಜು. ಒಂದು ಪಂಕ್ತಿ ಊಟವಾದ ಮೇಲೆ ಶುಚಿ ಗೊಳಿಸುವ ಮುಂಚೆ ಬಂದು ಕೂತ್ಬಿಡ್ತಾರೆ. ಬಫೆ ಸಿಸ್ಟಮ್ಮೇ ಒಳ್ಳೇದಿತ್ತು. ಅದು ಎಷ್ಟು ಐಟಂ? ತಿನ್ನುವುದಕ್ಕೇ ಬಂದಂತಿರುತ್ತಾರೆ. THAT IS WHY I DON'T LIKE THIS DIRTY INDIA ಎಂದೆಲ್ಲಾ ಕೂಗಾಡಿದ್ದ. ಎಣ್ಣೆ ಶಾಸ್ತ್ರ ಅರಿಶಿನ ಎಲ್ಲಾ ಬೇಡವೆಂದು ಅಮ್ಮನೊಂದಿಗೂ ರೇಗಾಡಿದ್ದ, ವರಪೂಜೆ ವರನ ಕಾಲ್ತೊಳೆಯುವುದು ಇವೆಲ್ಲ HYGENIC ಅಲ್ಲ ಎಂದು ರೇಗುತ್ತಿದ್ದ ಅವನನ್ನು ಸಮಾಧಾನಿಸಲು ರಾಯರು ಹೆಣಗುತ್ತಿದ್ದರು. "ಹಾಗೆಲ್ಲ ಹೇಳ ಬಾರದಪ್ಪ. ಅವೆಲ್ಲಾ ನಮ್ಮ ಸಂಪ್ರದಾಯಗಳು, ಅಳಿಯನನ್ನೇ ದೈವ ಸ್ವರೂಪನಾಗಿ ಕಂಡು ಮಗಳನ್ನು ಒಪ್ಪಿಸುವ ಪರಿ ಅದು, ಅದರದ್ದೇ ಆದ ಅರ್ಥವಿರುತ್ತೆ" ಎಂದ ತಂದೆಗೆ "ಎಲ್ಲಾ ಬಂಡಲ್ BULLSHIT ನಾನು ಅದನ್ನೆಲ್ಲಾ ನಂಬಲ್ಲ" ಎಂದು ಕೂಗಾಡಿದ್ದ. ಅಂತೂ ಮದುವೆ ಮುಗಿಸಿ ವಾರದಲ್ಲಿಯೇ ಇಬ್ಬರೂ ಹೊರಟು ನಿಂತಾಗ ಮಡದಿಯ ಮುಖ ನೋಡುತ್ತಾ ಕಣ್ಣೊರಿಸಿಕೊಂಡ ರಾಯರನ್ನು ಯಾರೂ ಗಮನಿಸಲಿಲ್ಲ.

ಮುಂದೆಯೂ ಪೋನ್ ಮಾಡಿದ್ದು ಅಷ್ಟಕ್ಕಷ್ಟೇಯೇ. ಮರುವರ್ಷ ಹೆರಿಗೆಗಾಗಿ ತಾಯಿ ಮನೆಗೆ ಬಂದ ಸೊಸೆ ಮನೆಗೆ ಬಂದಿದ್ದು ಒಂದೆರಡು ದಿನ. ಮಳೆಗಾಲ ಕಳೆಯುವ ಮುನ್ನವೇ ಮಗ ಬಂದು ಇಲ್ಲಿದ್ದರೆ ಇನ್ಫೆಕ್ಷನ್ ಆಗುತ್ತೆ, ಆರು ತಿಂಗಳ ಮೇಲಾದರೆ ಪಾಸ್ ಪೋರ್ಟ್ಗ ಗೆ ತೊಂದರೆ ಆಗುತ್ತೆ ಅಂತ ಹೊರಡಲು ಅವಸರಿಸಿದ. ಅವಸರದಲ್ಲಿಯೇ ನಾಮಕರಣ ಶಾಸ್ತ್ರ ಮಾಡಿ ಮಗುವಿಗೆ ಶಾಲಿವಾಹನ ಎಂಬ ನಾಮಕರಣವೂ ಆಯಿತು. ದಂಪತಿಗಳು ಮಕ್ಕಳೊಂದಿಗೆ ಕೆನಡಾಕ್ಕೆ ಹಾರಿ ಆಗಿತ್ತು. ಈಗ ನೀನಲ್ಲಿ ಬಂದರೆ ನಿನ್ನ ಅಸ್ತಮಾ ಜೋರಾಗುತ್ತೆ ಮುಂದೆ ನೋಡೋಣಾ ಎಂದು ಅಮ್ಮನಿಗೆ ಹೇಳುತ್ತಿದ್ದುದನ್ನು ರಾಯರು ಮರೆಯಲ್ಲಿಯೇ ಕೇಳಿಸಿಕೊಂಡರು.
 
ದಿವಸಗಳು ಉರುಳಿದವು ಕಾಲಚಕ್ರ ತಿರುಗುತ್ತಿತ್ತು. ಮೂರನೇ ವರ್ಷದಲ್ಲಿ ಬಂದಾಗ ಮೊಮ್ಮಗನನ್ನು ಮುದ್ದಾಡುತ್ತಾ ಗಿರಿಜಮ್ಮ "ಇವನನ್ನು ಇಲ್ಲಿಯೇ ಬಿಟ್ಟು ಹೋಗೋ ಇಲ್ಲಿಯೇ ಶಾಲೆಗೆ ಸೇರಿಸಿದರಾಯಿತು ಹೇಗೂ ಹತ್ತಿರ ಇದೆ. ನಾವೇ ಕರೆದುಕೊಂಡು ಹೋಗಿ ಬರಬಹುದು ಎಂದರೆ ಮಹೀಧರ "NO WAY. ಇಲ್ಲಿ ಬಿಡೋದಾ, ಈ ಕೊಂಪೆಯಲ್ಲಿ? ನನ್ನ ಕೈಯಲ್ಲೇ ಮೂರು ದಿನ ಇರಕ್ಕೆ ಆಗಲ್ಲ. ಅವನನ್ನು ಇಲ್ಲಿ ಓದಿಸುವುದು ಸಾದ್ಯವೇ ಇಲ್ಲ". ಸೊಸೆಯೂ ಹೂಂಗುಟ್ಟಿದ್ದಳು.

ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ಗಿರಿಜಮ್ಮನಿಗೆ ಅಸ್ತಮಾ ಉಲ್ಬಣಿಸಿ ಮಗನ ಅನುಪಸ್ಥಿತಿಯಲ್ಲಿಯೇ ಕೊನೆಯುಸಿರೆಳೆದರು. ಮಹಾ ಮಾರಿಯೊಂದು ಜಗತ್ತನ್ನೆಲ್ಲಾ ವ್ಯಾಪಿಸತೊಡಗಿದಾಗ ಕೆನಡಾವೂ ಹೊರತಾಗಲಿಲ್ಲ. ವಿಶ್ವವೇ ತತ್ತರಿಸಿದ ಆರ್ಥಿಕ, ಸಾಮಾಜಿಕ ಸ್ವಾಸ್ಥ್ಯದ ಭೂಕಂಪಕ್ಕೆ ಎಲ್ಲಾ ರಾಷ್ಟ್ರಗಳೂ ಬಲಿಯಾದವು. ಕಂಪನಿಗಳು ಲಾಕ್ ಔಟ್ ಘೋಷಿಸಿದವು. ಕಂಪನಿಯಿಂದ ಕೊಡ ಮಾಡಿದ್ದ ಷೇರನ್ನೂ, ತನ್ನ ಗಳಿಕೆಯ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿದ್ದ ಮಹೀಧರ ಕಣ್ಣು ಬಿಡುವುದರೊಳಗೆ ಭಿಕಾರಿ ಆಗಿದ್ದ. ಕೊಂಡಿದ್ದ ಮನೆಯನ್ನು ಮೂರು ಡಾಲರ್ ಗೂ ಕೊಳ್ಳುವವರಿರಲಿಲ್ಲ. ಉಳಿಸಿದ್ದ ಅಲ್ಪಸ್ವಲ್ಪ ಹಣ ಸಾಲಕ್ಕೆ ವಜಾ ಆಗಲಿತ್ತು. ಅಲ್ಲಿಯ ನಾಗರಿಕರೇ ಆಗಿ ಬಿಟ್ಟಿದ್ದರಿಂದ ಇವರನ್ನು ಸುಲಭವಾಗಿ ಭಾರತಕ್ಕೆ ಕಳಿಸುವಂತೆಯೂ ಇರಲಿಲ್ಲ. ಭಾರತೀಯ ರಾಯಭಾರಿ ಕಛೇರಿ ದೃಢಪಡಿಸಿದರೆ ಮಾತ್ರ ತುರ್ತು ಅಗತ್ಯದ ಮೇರೆಗೆ ಕಳಿಸಿಕೊಡಲಾಗುವುದು ಎಂದು ವಿಮಾನ ನಿಲ್ದಾಣ ಮಾಹಿತಿ ಕೊಟ್ಟಿತ್ತು. ಮಹೀಧರ ಒಂದು ನಿರ್ಧಾರಕ್ಕೆ ಬಂದಿದ್ದ. ಹೇಗೂ ಅಪ್ಪನ ಹೆಸರಿನಲ್ಲಿರುವ ಮನೆ ಒಳ್ಳೆ ಬೆಲೆಗೆ ಮಾರಾಟವಾಗುತ್ತೆ. ಆ ದುಡ್ಡಿನಲ್ಲಿ ಹಿರಣ್ಮಯಿಯ ಅಪ್ಪನ ಹಳ್ಳಿ ಹತ್ತಿರ ಒಂದು ಸಣ್ಣ ಮನೆ ಕಟ್ಟಿದರೆ ಉಳಿದ ಹಣದಲ್ಲಿ ಜೀವನ ಸಾಗಿಸಬಹುದು ಎಂದು ಲೆಕ್ಕಾಚಾರ ಹಾಕಿ ವಿಮಾನ ಯಾನ ಸಂಸ್ಥೆಗೆ ಈ ಮೇಲ್ ಮಾಡತೊಡಗಿದ.
 
ಸಂಜೆಗೆ ಅಲ್ಲಿಂದ ಬಂದ ಈ ಮೇಲ್ ನೋಡಿ ಮಹಿ ಪಾತಾಳಕ್ಕೆ ಕುಸಿದ. ಅದರಲ್ಲಿ "ನೀವು ತಿಳಿಸಿದಂತೆ ಭಾರತದಲ್ಲಿ ನಿಮ್ಮ ತಂದೆಗೆ ಯಾವ ತೊಂದರೆಯೂ ಆಗಿಲ್ಲ ಅವರು ಆರೋಗ್ಯವಾಗಿಯೇ ಇದ್ದಾರೆಂದು ಭಾರತೀಯ ರಾಯಭಾರಿ ಕಛೇರಿಯಿಂದ ಮಾಹಿತಿ ಬಂದಿದೆ. ನಿಮ್ಮ ಮನವಿ ಪುರಸ್ಕರಿಸದಿದ್ದುಕ್ಕಾಗಿ ವಿಷಾದಿಸುತ್ತೇವೆ" ಎಂಬ ಒಕ್ಕಣೆ ಇತ್ತು.
 
ಮನೆಗೆ ಬಂದು ಸೋಫಾ ಮೇಲೆ ಕುಳಿತ ಮಹಿ ಲ್ಯಾಪ್ ಟಾಪ್ ಓಪನ್ ಮಾಡಿದರೆ ಅಪ್ಪನಿಂದ ಬಂದ ಈ ಮೇಲ್ ಬಂದಿದುದರ ಮಾಹಿತಿ ಎದುರಿಗಿತ್ತು. ಲಗುಬಗೆಯಿಂದ ಮೇಲ್ ಓಪನ್ ಮಾಡಿ ಓದತೊಡಗಿದ. "ಮಹೀಗೆ ಸವಿನೆನಪುಗಳು, ರಾಯಭಾರ ಕಛೇರಿಯಿಂದ ಈಗಷ್ಟೇ ಫೋನ್ ಬಂದಿತ್ತು. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಕಾರಣವೇನೆಂದು ಕೇಳಿದ ಮೇಲೆ ಉತ್ತರಿಸಿದರು. ನೀನು ಇಲ್ಲಿ ನಾನು ತೀರಾ ಅಸ್ವಸ್ಥಗೊಂಡು ಈಗಲೋ ಆಗಲೋ ಎಂಬ ಸ್ಥಿತಿಯಲ್ಲಿರುವುದಾಗಿಯೂ, ಒಬ್ಬನೇ ಮಗನಾಗಿರುವುದರಿಂದ ತನಗೆ ಭಾರತಕ್ಕೆ ತೆರಳಲು ಅನುಮತಿ ನೀಡಬೇಕೆಂದು ನೀನು ಕೇಳಿದ್ದನ್ನು ತಿಳಿಸಿದರು. ಅವರಿಗೆ ಉತ್ತರಿಸಿ ನಿನಗೆ ಈ ಪತ್ರ ಬರೆಯುತ್ತಿದ್ದೇನೆ. ನೀನು ಕರೆಯುತ್ತಿದ್ದ DIRTY INDIA ಇಂದು ಮತ್ತಷ್ಟು ಸಂಕಷ್ಟದಲ್ಲಿದೆ. ಅದರ ಸಂಕಷ್ಟವನ್ನು ನೀವು ಬಂದು ಮತ್ತಷ್ಟು ಹೆಚ್ಚು ಮಾಡುವುದು ಬೇಡ. ನಾನಿದ್ದ ಮನೆ ಪಕ್ಕದಲ್ಲಿಯೇ ನರ್ಸಿಂಗ್ ಹೋಮ್ ನ್ನು ಸರ್ಕಾರ ತುರ್ತು ಅಗತ್ಯದ ಮೇರೆಗೆ ವಶಕ್ಕೆ ತೆಗೆದುಕೊಂಡಿದೆ ರೋಗ ಪೀಡಿತರನ್ನು ನೋಡಿಕೊಳ್ಳಲು ಪ್ರತ್ಯೇಕ ವಾರ್ಡ್ ಗಳ ಅಗತ್ಯವಿರುವುದರಿಂದ ನನ್ನ ಕೆಳಗಿನ ಮನೆಯ ಕೋಣೆಗಳನ್ನು ಬಿಟ್ಟುಕೊಟ್ಟು ಮೇಲಿನ ಒಂದು ಕೋಣೆಯಲ್ಲಿದ್ದೇನೆ. ಅಂದ ಹಾಗೆ ನಾನು ಕೋಲಾರದಲ್ಲಿದ್ದಾಗ ಪಕ್ಕದ ಮನೆಯಲ್ಲಿದ್ದ ನರ್ಸ್ ಮಗ ಈಗ ಡಾಕ್ಟರ್ ಆಗಿ ಇಲ್ಲಿಗೇ ಬಂದಿದ್ದಾನೆ. ಇಲ್ಲಿಯ ಸುಕ್ಷೇಮ ಟ್ರಸ್ಟ್ ಗೆ ಅವರೇ ಕಾರ್ಯದರ್ಶಿ. ಆ ಟ್ರಸ್ಟ್ ಇಲ್ಲಿಯ ನರ್ಸಿಂಗ್ ಹೋಂನ್ನು ಕೊಂಡುಕೊಂಡಿದೆ. ಅವನ ತಾಯಿಯೂ ಜೊತೆಯಲ್ಲಿದ್ದಾರೆ. ಮನೆ ತಮಗೇ ಮಾರಿದರೆ ಮೂರನೆ ಮಹಡಿಯಲ್ಲಿ ನಿಮಗೊಂದು ರೂಂ ಕಟ್ಟಿ ಕೊಡುತ್ತೇವೆ. ಊಟವೆಲ್ಲಾ ನಮ್ಮಲ್ಲಿಂದಲೇ ಕಳಿಸುತ್ತೇವೆ ಅಂತ ಹೇಳಿದರು. ಗಿರಿಜಾ ಹೋದ ಮೇಲೆ ನಾನೂ ಒಂಟಿ, ಎಲ್ಲಿಗೆ ಅಂತ ಹೋಗಲಿ? ನೀನು ಹೇಗೂ DIRTY INDIA ಎಂದು ಇಲ್ಲಿಗೆ ಬರಲ್ಲ. ಹಾಗಾಗಿ ಅವರು ತಿಳಿಸಿದಂತೆ ಅವರಿಗೇ ಈ ಮನೆ ಕೊಡಲು ನಿರ್ಧರಿಸಿದ್ದೇನೆ. ಈಗ ಸಂಕಷ್ಟದ ಕಾಲದಲ್ಲಿ ನಮ್ಮ ಜನರಿಗೆ ಇದು ಉಪಯೋಗಕ್ಕೆ ಬಂದಿರುವುದು ನೋಡಿ ನನ್ನ ನಿರ್ಧಾರ ಸರಿಯೆನಿಸುತ್ತಿದೆ. ನಿನ್ನ ತಾಯಿ ಸತ್ತಾಗ ನೆನಪಾಗದ ಈ ಭಾರತ ಈಗ ನಿನ್ನ ನಿನ್ನ ಸಂಸಾರದ ಉಳಿವಿಗೆ ಗಂಡಾಂತರ ಬಂದಾಗ ನೆನಪಾಗುತ್ತಿದೆಯಲ್ಲವೇ? Highly hygenic, cultured civility, cleanest ಎಂದು ಕೊಂಡಾಡುತ್ತಿದ್ದ ದೇಶ ಈಗ ಇದ್ದಕ್ಕಿದ್ದಂತೆ ಬೇಡವಾಯ್ತೇ? ಅಲ್ಲಿಯ CLEANLYNESS, CIVILISED CULTURE ನಿನ್ನನು ಕಾಪಾಡಲಾರದಾಯ್ತೆ? ಇಲ್ಲಿಯ ಜನ ಮೇಲ್ನೋಟಕ್ಕೆ ಕೊಳಕರಿರಬಹುದು. ಆದರೆ ಹೃದಯವಂತರು. ಮೊನ್ನೆ ನಾನು ವಾಕಿಂಗ್ ಹೋದವನು ತಲೆ ತಿರುಗಿ ಬಿದ್ದಿದ್ದಾಗ ಇಲ್ಲಿನ ಜನರೇ ನನ್ನನ್ನು ಇಲ್ಲಿಗೆ ತಂದು ಸೇರಿಸಿ ಆರೈಕೆ ಮಾಡಿದ್ದರು. ನೀನು ಹತ್ತಿರದಲ್ಲಿ ಇಲ್ಲ ಎನ್ನುವ ಕೊರತೆ ನನಗೆ ಅನ್ನಿಸಲೇ ಇಲ್ಲ. ಅದಕ್ಕಾಗಿ ಈ ಮನೆಯನ್ನು ಆ ಟ್ರಸ್ಟ್ ಗೆ ದಾನ ಮಾಡಬೇಕು ಅಂತಿದ್ದೇನೆ. ಈ ದೇಶದ ಮಣ್ಣಿನಲ್ಲಿ ನಾನು ಗಳಿಸಿದ ಆಸ್ತಿ ಈ ದೇಶವನ್ನು ಪ್ರೀತಿಸುವವರ ಕೈಗೇ ಸೇರಲಿ. ಇಲ್ಲಿ ಹುಟ್ಟಿ ಇಲ್ಲಿಯ ತಾಯ ಹಾಲ ಕುಡಿದು ಈ ಮಣ್ಣಿನ ಅನ್ನ ತಿಂದು ಒಳ್ಳೆಯ ವಿದ್ಯೆ ಪಡೆದ ಕೃತಜ್ಞತೆ ಸ್ವಲ್ಪವೂ ಇಲ್ಲದೇ ಈ ದೇಶವನ್ನೇ DIRTY ಎಂದು ಹಳಿಯುವವರಿಗೆ ಇಲ್ಲಿನ ಆಸ್ತಿ ಕೊಟ್ಟು ನಾನೂ ಪಾಪಿಯಾಗಲಾರೆ ಒಂದು ವೇಳೆ ನಾನು ಈ ಸಂಕಷ್ಟದಲ್ಲಿ ಮೃತಪಟ್ಟರೂ ಇಲ್ಲಿಯ ಜನರೇ ನನಗೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ನೀನು ಬಂದು ಇಲ್ಲಿ DIRTY ಆಗುವುದು ಬೇಡ. ಅಲ್ಲಿಯೇ ಚೆನ್ನಾಗಿರು....... ಇಂತಿ ನಿನ್ನ DIRTY INDIA ದ HEALTHY ತಂದೆ ಎಂದು. ಒಕ್ಕಣೆ ಮುಗಿಸಿದ್ದರು.
 
ಐ.ಪಾಡಿನಲ್ಲಿ ಯೂ ಟ್ಯೂಬ್ ನೋಡುತ್ತಿದ್ದ ಮಗ ಶಾಲಿವಾಹನ "Dad ನಮಕ್ ಹರಾಮ್ ಎಂದರೆ ಏನು? ಈಗ ಇದರಲ್ಲಿ ಆ ಹೆಸರಿನ ಒಂದು ಸಿನಿಮಾ ನೋಡಿದೆ" ಎಂದ. ಉತ್ತರಿಸಲಾಗದೆ ಮಹೀಧರ ಹಿರಣ್ಮಯಿ ಕಡೆ ನೋಡತೊಡಗಿದ.

--ಅ.ಸು.ರವೀಂದ್ರ, ಶಿವಮೊಗ್ಗ. (ವ್ಯಾಟ್ಸಾಪ್ ಕೃಪೆ)

ಗೆದ್ದೇ ಗೆಲುವೆವು

ಗೆದ್ದೇ ಗೆಲುವೆವು

ಮನೆಯಲಿರು ಮನೆಯಲಿರು
ಭಾರತೀಯ
ನೀ ಮನೆಯಲ್ಲಿದ್ದರೆ ಜೀವ
ಉಳಿಸುತೀಯ......

ನೆರೆಯ ರಾಷ್ಟ್ರದಿಂದ ಬಂದ
ದುರುಳನೊಬ್ಬ
ಸಮಾಧಿಯನ್ನು ಕಟ್ಟುವುದೇ
ಅವನಿಗೆ ಹಬ್ಬ
ದೇಶ,ಭಾಷೆ,ಒಳಿತು,ಕೆಡುಕು
ಎಣಿಸಲಾರನು
ಹೆಣ್ಣು-ಗಂಡು, ಪ್ರಾಣಿ-ಪಕ್ಷಿ
ಸಹಿಸಲಾರನು......

ನುಸುಳಿ ಬಂದ ಮರೆಮಾಚುತ
ಚೀನಾದಿಂದ
ವಿಶ್ವಕೆಲ್ಲ ಚಾಚಿ ಹಸ್ತವ ಅಪ್ಪುಗೆಯಿಂದ
ಮಾಮಳ್ಳಿಯ ಬೆಲೆಗೆ ಬಿದ್ದರು
ಜೋರಿನಿಂದ
ಬೀಳದವರ ಪ್ರಾಣವಿಹುದು
ಜತನದಿಂದ......

ಹೋಗದಿರಿ ಹೊರಗೆ ನೀವು
ಹೊಕ್ಕಿಬಿಡುವನು
ಯಮನೆ ಮರಣ ಹೋಮ ಕಂಡು ದಂಗಾಗಿಹನು
ನಮ್ಮ ಜೀವ ನಮ್ಮ ಕೈಲೇ
ಅಂತರವಿರಲಿ
ರಕ್ಷಿಪ ನಮ್ಮೆಲ್ಲ ಜನಕೆ
ಧನ್ಯತೆಯ ಹೇಳಿರಿ......


ಶಾಂತಿ ಸಹನೆ ಪಾಲಿಸೋಣ
ಇಂಥಾ ಸಮಯದಿ
ಹಳೆಯ ಸದ್ಭಾವನೆಗಳ
ತರುವ ಜಾರಿಲಿ
ಕರೋನ ದುಷ್ಟನನ್ನು ಬಡಿದು
ಗೆದ್ದೇ ಗೆಲುವೆವು
ವಿಶ್ವಕೆಲ್ಲ ಮಾದರಿ ನಾವು
ಎಂದೇ ನಿಲುವೆವು......

--ಸಿ.ಎ.ಇಂದಿರಾ, ತುಮಕೂರು. (ಕೃಪೆ ವ್ಯಾಟ್ಸಾಪ್ )

Sunday, March 29, 2020

ಕರೋನ ವಿರುದ್ಧ ಯುದ್ಧಕ್ಕೆ ಪ್ರತಿ ಮಹಿಳೆಯೊ ವೀರ ವನಿತೆಯಾಗಬೇಕಿದೆ

ಕರೋನ ವಿರುದ್ಧ ಯುದ್ಧಕ್ಕೆ ಪ್ರತಿ ಮಹಿಳೆಯೊ ವೀರ ವನಿತೆಯಾಗಬೇಕಿದೆ

ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ -: ಗೆ ಬಂದ ಟಿಪ್ಪಣಿಯಲ್ಲಿ ಮೂಡಿದ ಕವನ


"ಕರೋನ ವಿರುದ್ಧ ಯುದ್ಧಕ್ಕೆ ಪ್ರತಿ ಮಹಿಳೆಯೊ ವೀರ ವನಿತೆಯಾಗಬೇಕಿದೆ
ತಾಳ್ಮೆಯ ಜೊತೆಗೆ ಸ್ವಚ್ಛತೆಯ ಅಸ್ತ್ರ ಹೊಂದಬೇಕಿದೆ,
ಲಭ್ಯ ಪದಾರ್ಥಗಳನ್ನು ಬಳಸಿ ಜಾಣ್ಮೆಯ ಅಡುಗೆ ಮಾಡಬೇಕಿದೆ,
ಮನೆಯವರೆಲ್ಲರ ಸ್ವಾಸ್ಥ್ಯ ಹೊಣೆ ಹೊರಬೇಕಿದೆ,
ಪ್ರತಿ ಮನೆಯ ಮಹಿಳೆಯರು ಕಂಕಣಬದ್ಧರಾಗಬೇಕಿದೆ
ಸ್ತ್ರೀ ಶಕ್ತಿಯಿಂದ, ಕರೋನದ ಹುಟ್ಟಡಗಿಸಬೇಕಿದೆ
ದೇಶದಿಂದ ಮಹಾಮಾರಿಯ ಹೊರದೊಡಬೇಕಿದೆ"

Tuesday, March 24, 2020

ಇಳೆಯ ಮಕ್ಕಳೆಲ್ಲ ಹೊರಡಿ

ಇಳೆಯ ಮಕ್ಕಳೆಲ್ಲ ಹೊರಡಿ

ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ -: ಗೆ ಬಂದ ಟಿಪ್ಪಣಿಯಲ್ಲಿ ಮೂಡಿದ ಕವನ



ಇಳೆಯ ಮಕ್ಕಳೆಲ್ಲ ಹೊರಡಿ
ಹಳೆಯ ಶಸ್ರ್ತವನ್ನು ಹಿಡಿದು
ಕರೋನ ರಕ್ಕಸನ ಹೂಂಕಾರ ಹೊಸಕಿ ಹಾಕುವ

ಯೋಧರೇ ಕೈಯ ಕುಲುಕಬೇಡಿ ನೀವು
ಕೈಯ ಮುಗಿದು ನಗುವ ಸೂಸಿ
ಇದುವೆ ಹಳೆಯ ಅಸ್ತ್ರ ನಮಗೆ ಯುದ್ಧ ಗೆಲ್ಲಲು


ಅಲ್ಲಿ ಇಲ್ಲಿ ಮುಟ್ಟಿಕೊಂಡು ಕ್ರಿಮಿಗಳನ್ನು ಬೆಳೆಸಬೇಡಿ
ಸಿಕ್ಕ ಸಿಕ್ಕ ಕಡೆಗಳಲ್ಲಿ ಅಲೆದು ತಿರುಗಿ ಸೊರಗಬೇಡಿ
ಮನೆಯೊಳಗೆ ಇದ್ದುಕೊಂಡು ಶಕ್ತಿ ಬೆಸೆಯುವ

ಕೈಯ ಶುಭ್ರ ತೊಳೆದುಕೊಂಡು
ಬಟ್ಟೆ ಬರೆಯ ಬಿಸಿಲಿಗಿಟ್ಟು
ಮೈಯ ತುಂಬ ಸ್ವಚ್ಛ ಶುದ್ಧ ಯುದ್ಧ ಜಯಿಸಲು

ಅನ್ನ ಹಾಲು ನೀರು ಸಾರು
ಏನ ತಿನ್ನು ಏನೊ ಕುಡಿಯೊ
ಕೈಯು ಸ್ವಚ್ಛ ಶುಭ್ರವಿರಲಿ ಯುದ್ಧ ಗೆಲ್ಲಲು

ಮನಸು ತುಂಬ ಜಯದ ತುಮುಲ
ಉಳಿದ ವಿಷಯ ಮಾರುದೂರ
ಜಯದ ಕೇಕೆ ಮುಗಿಲ ಬಗೆದು ನಭವ ಮುಟ್ಟಲಿ

-- ಶಾಮಣ್ಣ ಖಂಡಿಗೆ

Monday, March 23, 2020

ಕರೋನಾ ಯಾ ಮರೋನಾ

"ಕರೋನಾ ಯಾ ಮರೋನಾ" 

ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ -: ಗೆ ಬಂದ ಟಿಪ್ಪಣಿಯಲ್ಲಿ ಮೂಡಿದ ಕವನ



ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಹೇಳಿದರು "ಕರೋನಾ ಯಾ ಮರೋನಾ"

ವಿದಿಯಾಟ!ಇಂದು ನಾವು ಹೇಳಬೇಕಾಗಿದೆ 'ಕರೋನಾ ಇಂದ ಮರಣ'

"ಗೋ ಕರೋನಾ ಗೋ" ಎಂದರೆ ಕರೋನಾ ಹೋಗುತ್ತಾ?

ದೇವರೇ ಈ ಮಹಾಮಾರಿಯಿಂದ ನಮ್ಮನ್ನು ರಕ್ಷಿಸು ಎನ್ನುವುದು ನಿಮ್ಮ ಭಕ್ತಿ,ನಂಬಿಕೆಯಾದರೆ ಅದು ಕೂಡಾ ಅವರ ನಂಬಿಕೆಯಲ್ಲವೇ?

ಕಲಿಯುಗದಲ್ಲಿ ವಿಷ್ಣುವಿನ ಇನ್ನೋಂದು ಮುಖ ನೋಡುವ ಕಾಲ ಬಂದಿದೆ

ಆದರೆ ನಮ್ಮವರ ಮರಣಮೃದಂಗ ನೋಡಲಾಗುತ್ತಿಲ್ಲ ಎನಗೆ

ಮಾಡಬೇಕಾಗಿದೆ ವ್ಯಯಕ್ತಿಕ ಹೋರಾಟ ನಮಗಾಗಿ

ಮನುಕುಲದ ಪರಿಸರ ನಾಶವನ್ನು ನೋಡಲಾಗದೇ

ದೇವರೇ ಕಳಿಸಿದಂತಿದೆ ಈ ಕರೋನಾ

ಹೋರಾಡಬೇಕಾಗಿದೇ ಮನುಕುಲದ ಉಳಿವಿಗಾಗಿ

ಮಹಾಮಾರಿಯ ಅಳಿವಿಗಾಗಿಅಳಿವಿಗಾಗಿ

ಶಿಸ್ತಿನ ಸಿಪಾಯಿಗಳಾಗಿ ಕರೋನಾವನ್ನು ಹಿಮ್ಮೆಟ್ಟಿಸೋಣ

ಒಂದಾಗಿ ನನ್ನೊಂದಿಗೆ ನಿಮ್ಮ ರಕ್ಷಣೆಗಾಗಿ

-ಬಸವರಾಜ್ ಪಿ.

ಕರೋನ ...


ಕರೋನ ...

ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ -: ಗೆ ಬಂದ ಟಿಪ್ಪಣಿಯಲ್ಲಿ ಮೂಡಿದ ಕವನ

 

ಹಿಗ್ಗಿ ಹಿರಿಯುತ್ತಿದ್ದ ಮನುಷ್ಯನ ಅಹಂಕಾರವನ್ನ.

ಉಸಿರುಗಟ್ಟಿಸಿ.. ಹೆಡೆಮುರಿ ಕಟ್ಟಿದೆ ಕರೋನಾ..

ಜಗದಗಲ ಚಾಚಿ , ವಿಜೃಂಭಿಸುತ್ತಿದೆ ತನ್ನ ಕಬಂಧ ಬಾಹು ವನ್ನ ...

ತನ್ನೆದುರು ಮಂಡಿಯೂರಿಸಿದೇ ಇಡೀ ಭೂ ಮಂಡಲವನ್ನ..

ಸಾವಿಲ್ಲದ ಅಸುರನಂತೆ ಧರೆಯಲ್ಲಿ ಮೆರೆಯುತ್ತಿದೆ ಕರೋನ ..

ಬನ್ನಿ ಇದರ ಸಂಹಾರಕ್ಕೆ ನಾವೆಲ್ಲಾ ಕಂಕಣ ಬದ್ಧರಾಗಿ ಹೊರಡೋಣ..



ಕೈ ಕುಲುಕದೆ ಕೈ ಮುಗಿಯೋಣ..

ವ್ಯರ್ಥ ಪ್ರಯಾಣ ಮಾಡದಿರೋಣ..

ಅಸಡ್ಡೆ ಮಾತುಗಳಿಗಾಗಿ ಗುಂಪು ಗುಂಪಾಗಿ ನಿಲ್ಲದಿರೋಣ..

ಕರವಸ್ತ್ರ ಮುಕಗವಿಸು ಉಪಯೋಗಿಸಿ ,,ಜೀವನದ ಸರ್ವಸ್ವ ಕಾಪಡೋಣ...

ಸ್ವಚ್ಚ ಶುಭ್ರ ಜೀವನ ನಮ್ಮದಾಗಿಸಿ ಕೊಳ್ಳೋಣ...



ನಮ್ಮ ಸಂಸ್ಕೃತಿ ಪಾಲಿಸೋಣ ...



ನಮ್ಮ ನಮ್ಮ ಮನೆಯಲ್ಲಿ ದ್ದೇ....ನಾವು ಹೊರಡೋಣ

ಅವರಿಂದ ಇವರಿಂದ ಎನ್ನದೆ ನನ್ನಿಂದ ಇತರರಿಗೆ ಹರಡದೆ ಮಾದರಿಯಾಗೋಣ ...

ಕರೋನ ವಿರುದ್ಧ ದ ಯುದ್ಧದಲ್ಲಿ ..ನಾವು ಶಾಂತ ಸಿಪಾಯಿಗಳಾಗೋಣ..

-ಸಂತು S ಕೊಟಗಿ

Saturday, March 21, 2020

ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ

ಕರೋನಾ ಯುದ್ದ ಸಾರಿದೆ

ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ

ಇದು ಕರೋನಾ ವಿರುದ್ದ ಜಾಗೃತಿ ಸಾರುವ ಘೋಷವಾಕ್ಯ ನಿವೂ ಈ ಜಾಗೃತಿಯ ಭಾಗಿಗಳಾಗಿ ನಿಮ್ಮ ಮನದಾಳದಲ್ಲಿ ಪುಟಿಯುವ ಇಂತಹ ಜಾಗೃತಿ ಕವನಗಳನ್ನು ಈ ಬ್ಲಾಗ್‌ನಲಲ್ಲಿ ಹಂಚಿಕೊಳ್ಳಿ ಇದು ಕರೋನಾ ಹಿಮ್ಮೆಟ್ಟಿಸಲು ಸಹಕಾರಿ. ಇವುಗಳನ್ನ ಲೈಕ್‌ಗಾಗಿ ಹಂಚಿಕೊಳ್ಳಿ ಅತಿ ಹೆಚ್ಚು ಲೈಕ್ ಬಂದ ಕವನಗಳ ಪ್ರಕಟಿಸಿ ಕರೋನಾ ವಿಜಯ ದಿವಸ ಆಚರಣೆಯಲ್ಲಿ ಅನಾವರಣಗೊಳಿಸೋಣ.

ಜೈಹಿಂದ್ 
ಜೈಕರ್ನಾಟಕ

ಸೂಚನೆ : ಆಸಕ್ತರು ತಮ್ಮ ಲೇಖನ, ಕಾವ್ಯಗಳನ್ನು ಪ್ರಕಟಿಸಲು ಇ-ಮೇಲ್ ವಿಳಾಸಕ್ಕೆ ಕಳುಹಿಸಿ. prabhatservices.smg@gmail.com


ಕರೋನಾ ಯುದ್ದ ಸಾರಿದೆ
ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ

ದೇಶ ದೇಶಗಳ ಯುದ್ದಕ್ಕಿಂತ ದೊಡ್ಡಯುದ್ದ
ಮನುಕುಲದ ಅಳಿವು ಉಳಿವಿನ ಯುದ್ದ
ನಮ್ಮನ್ನೇ ಅಸ್ತ್ರವನ್ನಾಗಿಸಿ ನಮ್ಮವರ ವಿರುದ್ದವೇ ಎತ್ತಿಕಟ್ಟುವ,
ಕರೋನಾ ಯುದ್ದಸಾರಿದೆ ನಮ್ಮ ನಿಮ್ಮೆಲ್ಲರ ವಿರುದ್ದ

ನಾನು ಕರೋನಾ ಅಸ್ತ್ರವಾಗದೆ
ಶಿಸ್ತಿನ ಸಿಪಾಯಿಯಾಗಿ ಯುದ್ದ ಮಾಡುತ್ತೇನೆನ್ನುವ
ಕಂಕಣ ಬದ್ಧ ಸಿಪಾಯಿಗಳು ಬೇಕಿದ್ದಾರೆ
ನಾನೂ ಆಗುತ್ತೇನೆ ಅಂತಹ ಮಹಾನ್ ಸಿಪಾಯಿ.

ಯುದ್ದಕ್ಕೆ ಸಿಪಾಯಿಗಳ ಕೊರತೆಯಿದೆ
ದೇಶ ಕರೆಕೊಟ್ಟಿದೆ ಎಲ್ಲರೂ ಸಿಪಾಯಿಗಳಾಗಿರೆಂದು
ಬನ್ನಿ ನನ್ನೋಡನೆ ನೀವೂ ಸಿಪಾಯಿಗಳಾಗಿ
ಸಕಲ ಸನ್ನದ್ಧರಾಗಿ ಸ್ವಚ್ಚತೆಯ ಹರಿಕಾರರಾಗಿ

ಈ ಯುದ್ದಕ್ಕೆ ನಾನೂ ಒಬ್ಬಸಿಪಾಯಿ
ನನ್ನೋಡನೆ ಸೇರ ಬನ್ನಿ ಕರೋನಾ ಹೊರಾಟಪಡೆಗೆ
ಹೆಡೆಮುರಿ ಕಟ್ಟೋಣ ಕರೋನಾ-19 ಪಡೆ
ಆಚರಿಸೋಣ ಕರೋನಾ ವಿಜಯದಿನ, ದೇಶ ಹೆಮ್ಮೆ ಪಡುವಂತೆ.

--ಶಶಿಧರ ಕೆ. ಸಿ.