Wednesday, April 22, 2020

ಮಲ್ನಾಡಿನ ಸಣ್ಣ ಕಥೆ...!!

ಮಲ್ನಾಡಿನ ಸಣ್ಣ ಕಥೆ...!!


ನಿನ್ನೆ ಸಂಜೆ ಸರಿ ಸುಮಾರು ೪.೨೦, ಅದೆಲ್ಲೋ ಸಡಿಲವಾಗಿ ದೂರ ಸರಿದಿದ್ದ ಕಪ್ಪು ಮೋಡಗಳು ಒಟ್ಟುಗೂಡಲಾರಂಭಿಸಿದವು. ಅದೆಲ್ಲೋ ಮೆಲ್ಲ ಗುಡುಗು ಬಡಿಯತೊಡಗಿದವು..!!


ನೀರನ್ನು ಕೆಳತೋಟಕ್ಕೆ ತಿರುಗಿಸಿ ಅಪ್ಪಯ್ಯ ರಭಸದಿಂದ ಬಂದು ಕೂಗೊಡೆದರು. ಅಣ್ಣ, ನಾನು, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರೂ ಕಣಕ್ಕೆ ಓಡಿ ಅಲ್ಲಿ ಒಣಗಿಸಿಟ್ಟ ಅಡಿಕೆ, ವಾಟೆಹುಳಿ, ಏಲಕ್ಕಿ, ಬೀಜಕ್ಕೆಂದು ಇಟ್ಟಿದ್ದ ಸೌತೆ, ಕುಂಬಳಬೀಜವನ್ನು ಬೇಗ ಬೇಗ ಎತ್ತಲು ಆರಂಭಿಸಿದೆವು.

ಅಷ್ಟರಲ್ಲಾಗಲೇ ಶುರು ರಾತ್ರಿಯ ಕತ್ತಲು ಆವರಿಸಿಯಾಗಿತ್ತು! ಅಮ್ಮ ಗೇಟಿನ ಬಳಿ ಬಂದ ದನಗಳನ್ನು ಉಣಗೋಲು ತೆಗೆದು ಕೊಟ್ಟಿಗೆಯಲಿ ಕಟ್ಟತೊಡಗಿದಳು, ಎಲ್ಲರ ನಿರೀಕ್ಷೆಯಂತೆ ಕಾದು ಕುಳಿತಿದ್ದ ನಮಗೆ ಮಳೆ ಸುಳ್ಳಾಗಲಿಲ್ಲ!! ನಿರೀಕ್ಷೆಗೂ ಮೀರಿ ಆಲಿಕಲ್ಲು ಸಹಿತ ಮಳೆ ಬಂದೇಬಿಟ್ಟಿತು‌‌‌. ನಾವು ಮಲೆನಾಡಿಗರಿಗೆ ಈ ಮೊದಲ ಮುಂಗಾರೇ ಹಂಚಿನ ನಡುವಿನ ತೂತುಗಳನ್ನು, ಜಗುಲಿ-ಕಡುಮಾಡುಗಳಲ್ಲಿನ ಮಳೆಹನಿ ಸೋರುವ ಜಾಗಗಳನ್ನು ತೋರಿಸಿಕೊಡುತ್ತವೆ..! ಅಂತೆಯೇ ನೀರು ಹನಿಗುಟ್ಟುವ ಜಾಗಗಳಿಗೆಲ್ಲ ಅಡಿಗೆಮನೆಯ ಪಾತ್ರೆಗಳನ್ನು ತಂದು ಇಟ್ಟಿದ್ದೂ ಆಯಿತು.

ಮಳೆಯ ಮುನ್ಸೂಚನೆ ಮುಂಚೆಯೇ ಇದ್ದುದರಿಂದ ಮನೆಗೆ ಮಳೆಗಾಲಕ್ಕೆ ಬೇಕಾಗುವ ಕಟ್ಟಿಗೆ, ಹಪ್ಪಳ - ಸಂಡಿಗೆ ಎಲ್ಲವೂ ಬೇಕಾದಷ್ಟು ಶೇಕರಣೆಯಾಗಿತ್ತು. ಇತ್ತ ಮಳೆ ನಿಲ್ಲುವ ಮುನ್ಸೂಚನೇ ೭ ಗಂಟೆಯಾದರೂ ಬರಲೇ ಇಲ್ಲ, ಇನ್ನು ಕರೆಂಟು ೩-೪ ದಿನಗಟ್ಟಲೇ ಬರುವುದೇ ಡೌಟು.

ಎಷ್ಟು ಆಧುನಿಕತೆಗೆ ನಾವು ಒಗ್ಗಿಕೊಂಡಿದ್ದೇವೆಂದರೇ ಠೀವಿ, ಫ್ರಿಜ್ನಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳು ಬಲಗಾಲಿಟ್ಟು ನಮ್ಮನೆಗೆ ಬಂದಾಗಿತ್ತು. ಸಿಗ್ನಲ್ ಸರಿಯಾಗಿ ಸಿಗದಿದ್ದರೂ ಸಹ ಎಲ್ಲರ ಕೈಗೊಂದು ಮೊಬೈಲ್ ಬಂಧಿಯೂ ಆಗಿತ್ತು. ಇನ್ನೊಂದು ವಿಶೇಷವೆಂದರೆ ಮಲೆನಾಡಿಗರ ಮನೆಯಲ್ಲಿ ರಾತ್ರಿಯಾಗುವುದು ಬಹುಬೇಗ. ಎಷ್ಟೆಂದರೇ ಪುಟ್ಟಗೌರಿ ಮದುವೆಯ ವೇಳೆಗೆ ಊಟ, ಅಗ್ನಿಸಾಕ್ಷಿಯ ವೇಳೆಗೆ ನಿದ್ರೆಗೆ ಜಾರುತ್ತಿದ್ದೆವು.

ಈಗ ಗಂಟೆ ೭ ಆಗಿದ್ದರಿಂದ ಸಂಧ್ಯಾವಂದನೆ ಮಾಡಿ ಊಟಕ್ಕೆ ತಯಾರಾದೆವು, ಅಮ್ಮ ಚಿಕ್ಕಮ್ಮನ ಭಜನೆಯ ತಾಳ ಗುಂಯ್ ಗುಡುವ ಹುಳಗಳ ಸದ್ದಿನೋಡನೆ ಬೆರೆತು ಹೋಗವು.

ಆದರೆ ಊಟಕ್ಕೆ ಕೂರವ ಪಡಸಾಲೆಯಲ್ಲಿ ಮಾತ್ರ ಅಮ್ಮ ಬೆಳಿಗ್ಗೆ ಹಲಸಿನ ಕೊಟ್ಟೆ ಕಡುಬಿಗಾಗಿ ನೆನಸಿಟ್ಟ ಉದ್ದು ಮತ್ತು ಅಕ್ಕಿಗಳು ರುಬ್ಬುವ ಕಲ್ಲಿನ ಮೇಲಿಟ್ಟ ಗ್ರೈಂಡರ್ ನನ್ನೂ ತದೇಕಚಿತ್ತದಿಂದ ನೋಡತೊಡಗಿದವು. ಅದರಲ್ಲಿನ ಒಂದು ಉದ್ದಿನಬೇಳೆ ನನ್ನ ಹೆಸರಿಡಿದು ಕರೆದಾಗ ಬೆಂಗಳೂರಿನ ಯಾರದೋ ಬಾಡಿಗೆಯ ಮನೆಯಲ್ಲಿ lockdown ನಿಂದ ಮಲಗಿದ್ದ ನನಗೆ ಎಚ್ಚರವಾಯಿತು. ನಾವು ಮರೆತಿರುವ, ಬಿಟ್ಟುಬಂದಿರುವ ನೆನಪುಗಳ ಲಕೋಟೆ ಸಣ್ಣ ಹನಿಯಾಗಿ ಹೊರಬಂದಿತು...!

-- ಕೌಶಿಕ ಜೋಯ್ಸ್

No comments:

Post a Comment