Friday, March 3, 2023

ಬೆಳಕಿಗೆ ಬಾರದ ಸ್ವಾತಂತ್ರ ಹೋರಾಟಗಾರ ತಡಗಣಿ ಶಿವಪ್ಪ : ಒಂದು ನೆನಪು

ಬೆಳಕಿಗೆ ಬಾರದ ಸ್ವಾತಂತ್ರ ಹೋರಾಟಗಾರ ತಡಗಣಿ ಶಿವಪ್ಪ : ಒಂದು ನೆನಪು



ಡಾ || ಟಿ ಎಸ್ ವಾಗೀಶ್
ಡಾ|| ಎಂ ಎಸ್ ಸಂಗೂರ್




ಅರ್ಪಣೆ


ತಡಗಣಿ ಶಿವಪ್ಪನವರ ಜೀವನ ಮೌಲ್ಯಗಳನ್ನು ಸಮರ್ಥವಾಗಿ ಅಳವಡಿಸಿಕೊಂಡು ನೊಂದವರ ಬಾಳಿನ ಬೆಳಕಾಗಿ ಬದುಕಿದ


ದಿ || ಪ್ರೇಮ ದೇವಸೂರು ಅವರಿಗೆ





ಲೇಖಕರ ಮಾತು


ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದ ನೆನಪಿನಲ್ಲಿ ಭಾರತ ಸರ್ಕಾರವು ಮಾರ್ಚ್, 2021 ರಿಂದ ಆಗಸ್ಟ್ 15, 2023ರ ವರೆಗೆ ‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಣೆಯನ್ನು ಘೋಷಿಸಿದೆ. ಸ್ವಾತಂತ್ರ್ಯಕ್ಕೋಸ್ಕರ ಪ್ರಾಣದ ಹಂಗು ತೊರೆದು ಹೋರಾಡಿದರೂ ತೆರೆಮರೆಯಲ್ಲಿಯೇ ಉಳಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಕೂಡ ಈ ಆಚರಣೆಯ ಉದ್ದೇಶಗಳಲ್ಲಿ ಒಂದು. ಇದಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರದ ‘ಆಜಾದಿ ಕಾ ಅಮೃತ ಮಹೋತ್ಸವ’ ಅಧಿಕೃತ ಪೋರ್ಟಲ್ ನಲ್ಲಿ ತೆರೆಮರೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಲಾಗಿದೆ. ಇದನ್ನು ಓದುವಾಗ ನಮ್ಮ ಶಿವಮೊಗ್ಗ ಭಾಗದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದೂ ‘ನೇಪತ್ಯದ ನಕ್ಷತ್ರ’ ವಾಗಿಯೇ ಉಳಿದ ತಡಗಣಿ ಶಿವಪ್ಪನವರ ಬಗ್ಗೆ ಅರಿವು ಮೂಡಿಸಬೇಕೆಂದು ನಮಗೆ ಅನ್ನಿಸಿತು. ಆದರೆ ಯಾವುದೇ ಪ್ರಚಾರ, ಸನ್ಮಾನಗಳಿಂದ ದೂರವೇ ಉಳಿದ ಶಿವಪ್ಪನವರ ಜೀವನದ ಬಗ್ಗೆ ಇಷ್ಟು ದೀರ್ಘಕಾಲದ ನಂತರ ಮಾಹಿತಿ ಸಂಗ್ರಹಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಆದರೂ ಅಂದಿನ ವಿಧಾನ ಪರಿಷತ್ತಿನ ಅಧ್ಯಕ್ಷರು, ಸ್ನೇಹಿತರೂ ಆದ ಶ್ರೀಯುತ ಕೆ ವಿ ನರಸಪ್ಪನವರ ಪತ್ರಗಳು, ಶಿರಾಳಕೊಪ್ಪದ ಪುರಸಭೆಯಲ್ಲಿ ಸಿಕ್ಕ ಕೆಲವು ಮಾಹಿತಿಗಳು ಹಾಗೂ ಸ್ನೇಹಿತರು-ಬಂಧುಗಳು ಕೊಟ್ಟ ಮಾಹಿತಿಯನ್ನು ಆಧರಿಸಿ ಶಿವಪ್ಪನವರ ಹೋರಾಟದ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಅಪೂರ್ಣವಾದ ಮಾಹಿತಿಯಿಂದ ಕೆಲವು ಘಟನೆಗಳನ್ನು ಇಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಓದುಗರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ, ಫೋಟೋಗಳು ಇದ್ದರೆ ಈ ಕಿರುಹೊತ್ತಿಗೆಯನ್ನು ಪರಿಷ್ಕರಿಸುವ ಆಲೋಚನೆ ಕೂಡ ಇದೆ.


ಈ ಲೇಖನದ ಬರಹಗಾರರಾದ ಡಾII ಟಿ ಎಸ್ ವಾಗೀಶ್ ಮತ್ತು ಡಾII ಎಂ ಎಸ್ ಸಂಗೂರ್ ಇವರುಗಳು ತಡಗಣಿ ಶಿವಪ್ಪನವರ ಪುತ್ರರು. ಈ ಲೇಖನಕ್ಕಾಗಿ ಕೆಲವು ಅಮೂಲ್ಯ ಮಾಹಿತಿಗಳನ್ನು ಕೊಟ್ಟ ಶಿವಪ್ಪನವರ ಮಕ್ಕಳಾದ ಶ್ರೀಮತಿ ಮಧು ಅಮರನಾಥ, ಶ್ರೀ ಟಿ ಎಸ್ ನಾಗರಾಜ್ ಮತ್ತು ಮೊಮ್ಮಕ್ಕಳಾದ ಶ್ರೀಮತಿ ಸುಜಾತ, ಗಿರೀಶ ದೇವಸೂರ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು. ಹಾಗೆಯೇ ಪ್ರಕಾಶ್ ಸಂಗೂರ್, ಪುಷ್ಪ ಮುರುಗೇಶ್ ಮತ್ತು ಕವಚೂರು ಸೋಮಶೇಖರ್ ಇವರಿಗೂ ಮಾಹಿತಿಗಾಗಿ ಅನಂತ ಧನ್ಯವಾದಗಳು.


ಡಾ|| ಟಿ. ಎಸ್. ವಾಗೀಶ್ ಡಾ|| ಟಿ ಎಸ್ ವಾಗೀಶ್

ಡಾ|| ಎಂ. ಎಸ್. ಸಂಗೂರ್ ಡಾ|| ಎಂ ಎಸ್ ಸಂಗೂರ್


ದಿನಾಂಕ 30.1.2023 ಶಿವಮೊಗ್ಗ




ಭಾರತ, ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಿ, 2022 - 23ರಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಅಮೃತ ಭಾರತಿಗೆ ಕನ್ನಡದಾರತಿ ಎಂಬಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಸ್ಮರಣೀಯ ಪಾತ್ರವನ್ನು ನೆನೆಯಲು ಇದು ಸುಸಂದರ್ಭ. ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಹಿರಿಯ ನಾಯಕರುಗಳಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ ವಲ್ಲಭ ಭಾಯಿ ಪಟೇಲ್, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ. ಇತರರು ಹಾಗೂ ರಾಜ್ಯಮಟ್ಟದಲ್ಲಿ ಕಿತ್ತೂರ ಚನ್ನಮ್ಮ ,ಕಾರ್ನಾಡ್ ಸದಾಶಿವರಾಯರು, ನಿಟ್ಟೂರ ಶ್ರೀನಿವಾಸರಾವ್, ಎನ್ ಎಸ್ ಹಾರ್ಡೀಕರ್ ಮತ್ತಿತರರು ಮುಂಚೂಣಿಯಲ್ಲಿದ್ದು ಪ್ರೇರಕ ಶಕ್ತಿಯಾಗಿದ್ದರು ಎಂಬುದು ನಿರ್ವಿವಾದ. ಆದರೆ ಸ್ವಾತಂತ್ರ್ಯದ ಕಿಚ್ಚು ದೇಶದ ಉದ್ದಗಲಕ್ಕೂ ಹರಡುತ್ತಾ ಬಂದಂತೆ ತಮ್ಮ ಸರ್ವಸ್ವವನ್ನು ತ್ಯಾಗಮಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನಸಾಮಾನ್ಯರ ಸೇವೆಯನ್ನು ಮರೆಯಲಾಗದು. ಕರ್ನಾಟಕದಲ್ಲಿ ಸಹ ಅನೇಕರು ಬೆಳಕಿಗೆ ಬಾರದೆ ಎಲೆಮರೆಯ ಕಾಯಿಯಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಅಪೂರ್ವ ಕೊಡುಗೆಯನ್ನು ನೀಡಿ, ಕಷ್ಟದ ಜೀವನ ಸಾಗಿಸಿ ನಮ್ಮಿಂದ ಮರೆಯಾಗಿದ್ದಾರೆ. ಇದು ಅಂತಹ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ತಡಗಣಿ ಶಿವಪ್ಪ (ಟಿ. ಎಸ್. ಶಿವಪ್ಪ ) ನವರ ಕಥೆ.


ಶಿವಪ್ಪನವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಡಗಣಿ ಎಂಬ ಗ್ರಾಮದಲ್ಲಿ. ಈಗಿನ ತಡಗಣಿ ಒಂದು ಕಾಲದಲ್ಲಿ ಶಿವಶರಣೆ ಅಕ್ಕಮಹಾದೇವಿ ಜನಿಸಿದ ಪುಣ್ಯ ಭೂಮಿ ಉಡುತಡಿಯ ಒಂದು ಭಾಗವಾಗಿತ್ತು. ತಡಗಣಿಯ ಒಂದು ರೈತಾಪಿ ಕುಟುಂಬದಲ್ಲಿ ಶಾಂತವೀರಪ್ಪ ಸಂಗೂರ್ ಮತ್ತು ಶಿವಲಿಂಗಮ್ಮ ಎಂಬ ದಂಪತಿಗಳಿಗೆ ಶಿವಪ್ಪನವರು ಎರಡನೆಯ ಮಗನಾಗಿ ಸಾವಿರ ಒಂಬೈನೂರ ಹದಿನಾರರಲ್ಲಿ ಹುಟ್ಟಿದರು. ಒಟ್ಟು ನಾಲ್ಕು ಹೆಣ್ಣು ಮತ್ತು ಮೂರು ಗಂಡು ಮಕ್ಕಳ ಒಂದು ದೊಡ್ಡ ಕುಟುಂಬವಾದರೂ ಶಿವಪ್ಪನವರು ಬಾಲ್ಯದಿಂದಲೇ ಒಬ್ಬ ಬುದ್ಧಿವಂತ ವಿದ್ಯಾರ್ಥಿಯಾಗಿ ಆಗಿನ ಕಾಲಕ್ಕೆ ಮೆಟ್ರಿಕ್ ಮುಗಿಸಿದರು. ನಂತರದಲ್ಲಿ ತಾಲೂಕು ಕಚೇರಿಯಲ್ಲಿ ಗುಮಾಸ್ತನ ಕೆಲಸ ಸಿಕ್ಕರೂ ಸ್ವಾಭಿಮಾನಕ್ಕೆ ಒಗ್ಗದ ಆ ಕೆಲಸವನ್ನು ಬಿಟ್ಟು ಶಿಕ್ಷಕ ವೃತ್ತಿಯನ್ನು ಸೇರಿಕೊಂಡರು. ನಂತರ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಪುಟ್ಟವ್ವನವರ ಜೊತೆ ವಿವಾಹವಾಯಿತು. ಉತ್ತಮ ಶಿಕ್ಷಕರಾಗಿ ಹೆಸರು ಮಾಡಿದ ಅವರು ನಂತರ ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಕರೆಗೆ ಓಗೊಟ್ಟು ಕೆಲಸಕ್ಕೆ ರಾಜೀನಾಮೆ ಕೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಭೂಗತರಾಗಿದ್ದುಕೊಂಡೇ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು, ವಿದ್ಯುತ್ ತಂತಿಗಳನ್ನು ಕೀಳುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಸ್ವಾತಂತ್ರ್ಯ ಹೋರಾಟದ ನಾಯಕರೊಂದಿಗೆ ಅವರ ಸಂಪರ್ಕದಿಂದ ಕೆಲದಿನಗಳಲ್ಲಿ ಈಸೂರು ಸಂಗ್ರಾಮ ಅವರನ್ನು ಕೈಬೀಸಿ ಕರೆಯಿತು.


ಆಗಸ್ಟ್ 9, 1942 - ಮಹಾತ್ಮ ಗಾಂಧಿಯವರ ‘ಭಾರತ ಬಿಟ್ಟು ತೊಲಗಿ’ ಘೋಷಣೆಯಿಂದ ಅಂದಿನ ಬ್ರಿಟಿಷ್ ಸರ್ಕಾರ ಭಾರತದ ಸ್ವಾತಂತ್ರ್ಯ ಚಳುವಳಿಯ ಹಿರಿಯ ನಾಯಕರನ್ನೆಲ್ಲ ಬಂಧಿಸಿತ್ತು.


ಸೆಪ್ಟೆಂಬರ್ 25, 1942 - ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಈಸೂರು ಎಂಬ ಪುಟ್ಟ ಹಳ್ಳಿಯೊಂದು ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು ಬ್ರಿಟಿಷ್ ಸರ್ಕಾರದ ಅಧಿಕಾರವನ್ನು ಧಿಕ್ಕರಿಸಿ ಹಳ್ಳಿಯನ್ನು ಸ್ವತಂತ್ರವೆಂದು ಘೋಷಿಸಿತು. ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂದು ಘೋಷಿಸಿ ಇಡೀ ಕರ್ನಾಟಕದಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊದಲ ಹಳ್ಳಿಯೆಂದು ಈಸೂರು ಖ್ಯಾತಿ ಪಡೆಯಿತು. ತಡಗಣಿ ಶಿವಪ್ಪನವರು ಈಸೂರಿನ ಮುಂದಾಳುಗಳಾದ ಸಾಹುಕಾರ್ ಬಸವಣ್ಣಪ್ಪ, ಹುಚ್ಚರಾಯಪ್ಪ ಮತ್ತಿತರರೊಂದಿಗೆ ಜೊತೆಗೂಡಿ ಸಭೆಗಳನ್ನು ನಡೆಸುವುದು, ಕರಪತ್ರಗಳನ್ನು ಹಂಚುವುದು ಇತ್ಯಾದಿ ಚಟುವಟಿಕೆಗಳಿಂದ ಸ್ವಾತಂತ್ರ್ಯ ಹೋರಾಟದ ಜಾಗೃತಿಯನ್ನು ಮೂಡಿಸತೊಡಗಿದರು. ಸೆಪ್ಟೆಂಬರ್ 28ರಂದು ನಡೆದ ಉಗ್ರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ತಾಲೂಕಿನ ಅಮಲ್ದಾರ್ ಮತ್ತು ಒಬ್ಬ ಪೊಲೀಸ್ ಅಧಿಕಾರಿಯ ಸಾವಿಗೆ ಕಾರಣವಾಯಿತು. ಇದರಿಂದ ಕೆರಳಿದ ಬ್ರಿಟಿಷ್ ಸರ್ಕಾರ ಸೈನ್ಯ ಮತ್ತು ಪೊಲೀಸ್ ಅನ್ನು ಕಳಿಸಿ ಜನರನ್ನ ಚಿತ್ರಹಿಂಸೆಗೆ ಗುರಿ ಮಾಡಿತು. ಆಗ ಕೆಲವು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ತಡಗಣಿ ಶಿವಪ್ಪನವರು ಕಾಡಿನೊಳಗೆ ಬಚ್ಚಿಟ್ಟುಕೊಂಡು ಭೂಗತರಾದರು. ಆದರೆ ನಂತರದಲ್ಲಿ ಸೆರೆಸಿಕ್ಕ ಈಸೂರಿನ 5 ಜನನಾಯಕರನ್ನು (ಕೆ. ಗುರಪ್ಪ. ಜಿ.ಮಲ್ಲಪ್ಪ, ಬಿ. ಹಾಲಪ್ಪ, ಸೂರ್ಯನಾರಾಯಣ ಆಚಾರ್, ಮತ್ತು ಗೌಡ್ರ ಶಂಕರಪ್ಪ) ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ್ದು ಮತ್ತು ಹದಿನೇಳು ಜನರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿದ್ದು ಈಗ ಇತಿಹಾಸ. ನಂತರ ಶಿವಪ್ಪನವರು ಶಿಕಾರಿಪುರ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹರಡಿಸುವ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.


ಹೀಗೆ ಭೂಗತ ಚಟುವಟಿಕೆಗಳನ್ನು ನಡೆಸುತ್ತಾ ಶಿವಪ್ಪನವರು ಒಮ್ಮೆ ಹಿರೇಕೆರೂರಿನಲ್ಲಿ ತಮ್ಮ ತಂಗಿ ಸರೋಜಮ್ಮನ ಮನೆಗೆ ಬಂದರು. ಅದು ಹೇಗೋ ಪೊಲೀಸರಿಗೆ ಸುಳಿವು ಸಿಕ್ಕು ಅವರನ್ನು ಹುಡುಕುತ್ತಾ ಮನೆಗೆ ಬಂದರು. ಮನೆಯಲ್ಲಿ ಯಾರಿದ್ದಾರೆ ಎಂದು ಪೊಲೀಸರು ವಿಚಾರಿಸಿದಾಗ ಸರೋಜಮ್ಮನವರು ಯಾರೂ ಇಲ್ಲ ಎಂದು ಉತ್ತರಿಸಿದರು. ನಮಗೆ ಮಾಹಿತಿಯಿದೆ ನಾವು ಮನೆಯನ್ನು ತಲಾಶ್ ಮಾಡಬೇಕೆಂದು ಪೋಲೀಸಿನವರು ಕೇಳಿದಾಗ ಬೂಟುಗಾಲಿನಲ್ಲಿರುವ ನಿಮ್ಮನ್ನು ಮನೆಯೊಳಗೆ ನಾನು ಕಾಲಿಡಲು ಬಿಡುವುದಿಲ್ಲ ಎಂದರು. ಆಗ ಪೋಲೀಸಿನವರು ಆಗಿನಕಾಲದ ಪೊಲೀಸ್ ಬೂಟುಗಳನ್ನು ತೆಗೆದು ಒಳ ಬರುವಷ್ಟರಲ್ಲೇ ಸಿಕ್ಕ ಎರಡು ನಿಮಿಷಗಳ ಸಮಯದಲ್ಲಿ ಮಿಂಚಿನಂತೆ ಕಾಂಪೌಂಡ್ ಹಾರಿ ಶಿವಪ್ಪನವರು ತಪ್ಪಿಸಿಕೊಂಡು ಪುನಃ ಭೂಗತರಾದರು.


ಆದರೆ ಬ್ರಿಟಿಷರ ಆಡಳಿತದಲ್ಲಿ ಇವರು ಭೂಗತರಾಗಿ ಬಹಳ ದಿನ ಮುಂದುವರಿಯಲು ಆಗಲಿಲ್ಲ. ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿ ಬ್ರಿಟಿಷರಿಗೆ ಸೆರೆಸಿಕ್ಕ ಇವರನ್ನು ಶಿವಮೊಗ್ಗ ಕಾರಾಗೃಹದಲ್ಲಿ, ನಂತರ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಟ್ಟು ಆರು ತಿಂಗಳ ಕಾಲ ಸೆರೆಮನೆಯಲ್ಲಿ ಇಟ್ಟಿದ್ದರು. ಜೈಲಿನಲ್ಲಿ ಸನ್ನಡತೆಗಾಗಿ ಬೇಗ ಬಿಡುಗಡೆಗೊಂಡ ಇವರು ಪುನಃ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಿಯಾಶೀಲರಾದರು. ಶ್ರೀಯುತರಾದ ಎಸ್ ನಿಜಲಿಂಗಪ್ಪನವರು, ಕೆ ವಿ ನರಸಪ್ಪನವರು, ಪಾಟೀಲ್ ಪುಟ್ಟಪ್ಪನವರು ಮುಂತಾದವರ ಒಡನಾಟದಲ್ಲಿ ಇವರ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇನ್ನೂ ಹೆಚ್ಚಾಗುತ್ತಾ ಹೋಯಿತು. 1947 ರಲ್ಲಿ ಮಹಾರಾಜರ ಆಳ್ವಿಕೆ ಕೊನೆಯಾಗಿ ಜನಪರ ಸರ್ಕಾರದ ರಚನೆಯಾಗಬೇಕೆಂದು ಒತ್ತಾಯಿಸಿ ನಡೆದ ಮೈಸೂರು ಚಲೋ ಚಳುವಳಿ ಯಲ್ಲಿ ಶಿವಪ್ಪನವರು ಸಕ್ರಿಯವಾಗಿ ಭಾಗವಹಿಸಿ ಮತ್ತೆ ಜೈಲು ಸೇರಿದರು. ಆದರೆ ಮೈಸೂರು ಚಲೋ ಚಳುವಳಿ ಅಂತ್ಯಗೊಂಡಾಗ ಬೇರೆಯವರ ಜೊತೆ ಇವರೂ ಬಿಡುಗಡೆಗೊಂಡರು.


ಆಗಸ್ಟ್ 15, 1947 ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಈ ಸಂಭ್ರಮವನ್ನು ಮೀರಿದ ಜವಾಬ್ದಾರಿ ಅವರನ್ನು ಕಾಯುತ್ತಿತ್ತು. ಇವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಂಸಾರವನ್ನು ಬಡತನದ ಕಷ್ಟಗಳ ನಡುವೆ ಇವರ ಶ್ರೀಮತಿ ಆದ ಪುಟ್ಟವ್ವನವರು ನಿಭಾಯಿಸುತ್ತಿದ್ದರು. ಅನುಕೂಲಸ್ಥ ಕುಟುಂಬದಿಂದ ಬಂದಿದ್ದರೂ ಅನಿರೀಕ್ಷಿತವಾಗಿ ಬಂದ ಬಡತನದ ಕಷ್ಟಗಳಿಗೆ ಎಂದೂ ಎದೆಗುಂದಲಿಲ್ಲ. ಯಾರ ಬಳಿಯೂ ಕೈಚಾಚದೆ ಧೈರ್ಯದಿಂದ ಅವರು ಕುಟುಂಬವನ್ನು ಮುನ್ನಡೆಸಿದರು. ಈಗ ಶಿವಪ್ಪನವರಿಗೆ ಸಂಸಾರದ ಜವಾಬ್ದಾರಿಯನ್ನು ಹೊರುವ ಕಾಲ ಬಂದಿತ್ತು. ತಡಗಣಿ ಶಿವಪ್ಪನವರು ಸ್ವಾತಂತ್ರ್ಯ ಹೋರಾಟದ ಉದಾತ್ತ ಗುರಿಯಷ್ಟೇ ಅಲ್ಲದೆ ಅನೇಕ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಇದು ಅವರ ಜೀವನದಲ್ಲಿ ನಂತರ ನಡೆದ ಅನೇಕ ಕೆಳಗಿನ ಘಟನೆಗಳಿಂದ ವ್ಯಕ್ತವಾಗುತ್ತದೆ.


ಧರ್ಮಪತ್ನಿ ಶ್ರೀಮತಿ ಪುಟ್ಟವ್ವನವರೊಂದಿಗೆ ತಡಗಣಿ ಶಿವಪ್ಪನವರು

ಶಿವಪ್ಪನವರ ಹಿರಿಯ ಮಗಳು ಪ್ರೇಮ ಶಾಲೆಯಲ್ಲಿ ಓದುತ್ತಿದ್ದಾಗ ನಡೆದ ಒಂದು ಘಟನೆ. ಆಗ ತುಂಬಾ ಬಡತನ. ಶಾಲಾ ಫೀ ತುಂಬಲು ಕಷ್ಟಪಡಬೇಕಾದ ದಿನಗಳು. ಶಿಕ್ಷಕರ ಒತ್ತಾಯದ ಮೇರೆಗೆ ಪ್ರೇಮ ಬಡ ವಿದ್ಯಾರ್ಥಿಗಳಿಗಾಗಿ ಇರುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಷಯ ಗೊತ್ತಾದಾಗ ಶಿವಪ್ಪನವರು “ಅದು ಯಾರೂ ದಿಕ್ಕಿಲ್ಲದ ಮಕ್ಕಳಿಗೆ ಸೇರಬೇಕಾದ ವಿದ್ಯಾರ್ಥಿವೇತನ. ನಿನಗೆ ಕಷ್ಟವಾದರೆ ಅದರ ಪರಿಹಾರದ ವ್ಯವಸ್ಥೆ ಮಾಡಲು ನಾನಿದ್ದೇನೆ” ಎಂದು ಅರ್ಜಿಯನ್ನು ವಾಪಸ್ ಕೊಡಿಸಿದರು. ಏನೇ ಕಷ್ಟ ಬಂದರು ಇನ್ನೊಬ್ಬರಲ್ಲಿ ಧನಸಹಾಯ ಕೇಳದೆ ಬಡತನದಲ್ಲಿಯೇ ಆತ್ಮಗೌರವವನ್ನು ಕಾಣಬೇಕು ಎಂದು ಅವರು ಹೇಳುತ್ತಿದ್ದರು.


**


ಅವರ ಇಬ್ಬರು ಹಿರಿಯ ಗಂಡು ಮಕ್ಕಳಾದ ಮೃತ್ಯುಂಜಯ ಸಂಗೂರ್ ಮತ್ತು ನಾಗರಾಜ್ ಅವರು ಮೆರಿಟ್ ವಿದ್ಯಾರ್ಥಿಗಳಾಗಿದ್ದರೂ ಸಾಲ ಮಾಡಿ ಉನ್ನತ ಶಿಕ್ಷಣವನ್ನು ಪೂರೈಸಿದರು. ಸ್ವಾತಂತ್ರ ಹೋರಾಟಗಾರರ ಮಕ್ಕಳಿಗೆ ಕೊಡುವ ಸ್ಕಾಲರ್ಶಿಪ್ ಗಳಿಗಾಗಿ ಎಂದೂ ಕೈಚಾಚಲಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಹಿರಿಯ ಮಗನಾದ ಮೃತ್ಯುಂಜಯ ಸಂಗೂರ್ ಮೆಡಿಕಲ್ ಓದುತ್ತಿದ್ದಾಗ ಯಾವ ಕಾರಣಕ್ಕೂ ರಾಜಕೀಯ ಸಂತ್ರಸ್ತರ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಕೂಡದು ಎಂದು ಅವರು ಬರೆದ ಪತ್ರವನ್ನು ಡಾII ಸಂಗೂರ್ ಅವರು ಇಂದಿಗೂ ಜೋಪಾನವಾಗಿ ಇಟ್ಟಿದ್ದಾರೆ.


ಸ್ವಾತಂತ್ರ್ಯಹೋರಾಟಗಾರರ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬಾರದೆಂದು ಮೃತ್ಯುಂಜಯ ಸಂಗೂರ್ ಗೆ ಶಿವಪ್ಪನವರು 1964 ರಲ್ಲಿ ಬರೆದ ಪೋಸ್ಟ್ ಕಾರ್ಡ್

**


ಒತ್ತಾಯಪೂರ್ವಕವಾಗಿ ಜನರೇ ಖರ್ಚು ಹಾಕಿಕೊಂಡು ಇವರನ್ನು ಚುನಾವಣೆಯಲ್ಲಿ ನಿಲ್ಲಿಸಿದ ಮೇಲೆ 1959 ಮತ್ತು 1960 ರಲ್ಲಿ ಇವರು ಶಿರಾಳಕೊಪ್ಪದ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಧ್ಯಕ್ಷರಾಗಿ ಹಾಗೂ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಆಪ್ತರಾಗಿ ಇವರು ಊರಿನಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಆಗಲೂ ಸಹ ತಾವು ನಂಬಿದ ಆದರ್ಶ ಮತ್ತು ಸಿದ್ದಾಂತಗಳನ್ನು ಬಿಡಲಿಲ್ಲ. ಊರಲ್ಲಿ ಒಂದು ಚಿತ್ರಮಂದಿರವನ್ನು ಕಟ್ಟಲು ಮುನಿಸಿಪಾಲಿಟಿಯ ಒಪ್ಪಿಗೆಗಾಗಿ ಅಧ್ಯಕ್ಷರಿಗೆ ಅರ್ಜಿ ಬಂದಿತ್ತು. ಚಿತ್ರಮಂದಿರ ಕಟ್ಟಿಸಲು ಉದ್ದೇಶಿಸಿದ್ದ ಜಾಗ ಗದ್ದೆಗಳು ಇದ್ದ ಜಾಗವಾಗಿತ್ತು. ಆದ್ದರಿಂದ ಗದ್ದೆಗಳನ್ನು ಹಾಳು ಮಾಡಿ ಚಿತ್ರಮಂದಿರವನ್ನು ಕಟ್ಟಲು ಒಪ್ಪಿಗೆ ನೀಡಲಿಲ್ಲ. ಆದರೂ ಆ ಮಹನೀಯರು ರಾಜಕೀಯ ಪ್ರಭಾವ ಬಳಸಿ ಅದೇ ಜಾಗದಲ್ಲಿ ಚಿತ್ರಮಂದಿರವನ್ನು ಕಟ್ಟಿಯೇ ಬಿಟ್ಟರು.ಇದರಿಂದ ನೊಂದ ಅವರು ತಮ್ಮ ಕೊನೆಗಾಲದವರೆಗೂ ಆ ಚಿತ್ರಮಂದಿರಕ್ಕೆ ಕಾಲೇ ಇಡಲಿಲ್ಲ.


**


ಆಗ ಊರಿನ ಗಡಿ ಪ್ರವೇಶಿಸುವಾಗ ಗಡಿಯ ಸುಂಕದ ಕಟ್ಟೆಯಲ್ಲಿ ಸುಂಕ ಪಾವತಿಸ ಬೇಕಾಗುತಿತ್ತು. ಶಿವಪ್ಪನವರ ಅಣ್ಣ ತಮ್ಮಂದಿರು ಪಕ್ಕದ ಹಳ್ಳಿ ತಡಗಣಿಯಲ್ಲಿ ವಾಸಿಸುತ್ತಿದ್ದರು. ಅದು ತಮ್ಮನ ಮದುವೆಯ ಸಂದರ್ಭ. ಆ ದಿನ ಮನೆಯವರೆಲ್ಲಾ ಚಕ್ಕಡಿ ಗಾಡಿಯಲ್ಲಿ ತಡಗಣಿ ಇಂದ ಶಿರಾಳಕೊಪ್ಪಕ್ಕೆ ಹೋಗುತ್ತಿದ್ದಾಗ ಗಡಿಯ ಸುಂಕದ ಕಟ್ಟೆಯಲ್ಲಿ ಇದ್ದ ಸುಂಕ ವಸೂಲಿಕಾರರು ಸುಂಕ ತೆಗೆದುಕೊಳ್ಳದೇ ಹಾಗೇ ಹೋಗಲು ಬಿಟ್ಟರು.ಆ ಗಾಡಿಯಲ್ಲೇ ಇದ್ದ ಶಿವಪ್ಪನವರು ಕೋಪಗೊಂಡು ಏಕೆ ಸುಂಕ ವಸೂಲಿ ಮಾಡಲಿಲ್ಲ, ಹೀಗೇ ದಿನಕ್ಕೆ ಎಷ್ಟು ಜನರನ್ನು ಬಿಟ್ಟು ಕಳಿಸುತ್ತೀರಿ ಎಂದು ಗದರಿಸಿದರು.ಪಾಪ ಸುಂಕ ವಸೂಲಿಯವರು ಇವರ ಕಾಲನ್ನು ಹಿಡಿದುಕೊಂಡು “ತಪ್ಪಾಯಿತು ಸ್ವಾಮೀ...ಅಧ್ಯಕ್ಷರ ಗಾಡಿ ಎಂದು ಹಾಗೇ ಬಿಟ್ಟೆವು..ಮತ್ತೆಂದೂ ಈ ರೀತಿ ಬಿಡುವುದಿಲ್ಲ” ಎಂದು ಕ್ಷಮಾಪಣೆ ಕೇಳಿದ್ದರಂತೆ.


**


ಶಿರಾಳಕೊಪ್ಪದಲ್ಲಿ ತಡಗಣಿ ಶಿವಪ್ಪನವರ ಮನೆ ರಾಜಕೀಯ ಚರ್ಚೆ, ವಿಶ್ಲೇಷಣೆಗಳ ಕೇಂದ್ರಬಿಂದುವಾಗಿತ್ತು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಕೆ ವಿ ನರಸಪ್ಪನವರು, ವಿಧಾನಸಭಾ ಸದಸ್ಯರಾದ ತಾಳಗುಂದ ವೀರಪ್ಪನವರು, ನಾಡೋಜ ಪಾಟೀಲ್ ಪುಟ್ಟಪ್ಪನವರು, ಕರ್ನಾಟಕ ಸರ್ವೋದಯ, ಭೂದಾನ ಚಳುವಳಿಯ ಮುಖಂಡರು ಹಾಗೂ ವಿಧಾನಸಭಾ ಸದಸ್ಯರೂ ಆದ ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪ ಗೌಡರು ಹೀಗೆ ಅನೇಕ ಗಣ್ಯ ವ್ಯಕ್ತಿಗಳು ರಾಜಕೀಯ ಚರ್ಚೆ ಮತ್ತು ವಿಮರ್ಶೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಎಲ್ಲರೊಂದಿಗೆ ಊಟಮಾಡುತ್ತಾ ರಾಜಕೀಯ ಚರ್ಚೆ ಮಾಡುವ ಸಮಯದಲ್ಲಿ ಶಿವಪ್ಪ ನವರಿಗೆ ಜಾತಿ ಪ್ರಶ್ನೆ ಎಂದೂ ಅಡ್ಡ ಬರಲೇ ಇಲ್ಲ.


**


ತಮಗೆ ಪ್ರಿಯವಾದ ಖಾದಿ ಧಾರಣೆವ್ರತ ಮತ್ತು ಸತ್ಯನಿಷ್ಠೆಯನ್ನು ಕೊನೆಯವರೆಗೂ ಅವರು ಪಾಲಿಸಿಕೊಂಡು ಬಂದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಸರಕಾರದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಅನೇಕ ವಿಧದ ಸಹಾಯ ಸೌಲಭ್ಯಗಳನ್ನು ಕೊಡಲಾಯಿತು. ಆದರೆ ಅವರು ಆ ಎಲ್ಲಾ ಧನ ಸಹಾಯ, ಜಮೀನು ಮತ್ತು ಇತರ ಸೌಲಭ್ಯಗಳನ್ನು ದೄಢ ಮನಸ್ಸಿನಿಂದ ನಿರಾಕರಿಸಿದರು. ಸ್ವಾತಂತ್ರ್ಯ ಸೇನಾನಿಗಳಿಗೆ ಸರ್ಕಾರದಿಂದ ಕೊಡುವ ಗೌರವ ದ್ಯೋತಕ ತಾಮ್ರಪತ್ರವನ್ನು ಇವರು ಸ್ವೀಕರಿಸಲಿಲ್ಲ. ಆ ಸಮಯದಲ್ಲಿ ಹೆಚ್ಚು ಆದಾಯವಿಲ್ಲದೆ ಆರು ಹೆಣ್ಣು ಮತ್ತು ಮೂರು ಗಂಡು ಮಕ್ಕಳ ದೊಡ್ಡ ಸಂಸಾರ ನಡೆಸಲು ಕಷ್ಟ ಪಡುತ್ತಿದ್ದರು.ಸರಕಾರದ ಸೌಲಭ್ಯಗಳನ್ನು ಪಡೆದವರು ನಮ್ಮ ತಂದೆಗೂ ಇವುಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರೂ ಆಮಿಷಗಳಿಗೆ ಬಲಿಯಾಗದೇ ಎಲ್ಲವನ್ನೂ ವಿನಯಪೂರ್ವಕವಾಗಿ ನಿರಾಕರಿಸಿದರು."ಸರಕಾರದವರು ಮುಂದೆ ಇಂತಹ ಸಹಾಯಗಳನ್ನು ನೀಡುತ್ತಾರೆಂದು ನಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಿಲ್ಲ, ಅದು ದೇಶಕ್ಕಾಗಿ ನನ್ನ ಕರ್ತವ್ಯವಾಗಿತ್ತು " ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಬೇರೆಯವರ ಸಹಾಯಕ್ಕೆ ಎಂದೂ ಕೈಚಾಚದೆ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಾ ಆತ್ಮಗೌರವದಿಂದ ಬದುಕಿದರು.


ಸ್ವಾತಂತ್ರ ಚಳುವಳಿಯಲ್ಲಿ ಭೂಗತ ಹೋರಾಟದ ಬದುಕು, ದೊಡ್ಡ ಸಂಸಾರದ ಹೊಣೆ, ಬಡತನ ಇತ್ಯಾದಿ ಸಮಸ್ಯೆಗಳಿಂದಾಗಿ ಅವರ ಆರೋಗ್ಯ ಕ್ರಮೇಣ ಕ್ಷೀಣಿಸುತ್ತಾ ಬಂತು. ಅವರ ಕೊನೆಯ ದಿನಗಳಲ್ಲಿ ಅಸ್ತಮಾ ಪೀಡಿತರಾಗಿ ತುಂಬಾ ಸಮಸ್ಯೆಯನ್ನು ಎದುರಿಸಿದ್ದರೂ ಅವರ ಜೀವನ ಪ್ರೀತಿ, ಮನೋಧಾರ್ಡ್ಯ ಎಂದಿಗೂ ಕಡಿಮೆಯಾಗಲಿಲ್ಲ. ತಮ್ಮ ಕರ್ತವ್ಯವನ್ನು ಪೂರೈಸಿದ ತೃಪ್ತಿಯೊಂದಿಗೆ 1978 ರಲ್ಲಿ ತಮ್ಮ ಅರವತ್ತೆರಡನೇ ವಯಸ್ಸಿನಲ್ಲಿ ತಡಗಣಿ ಶಿವಪ್ಪನವರು ಇಹಲೋಕ ತ್ಯಜಿಸಿದರು.


ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಜಿಸಿ, ತಾನು ನಂಬಿದ ಮೌಲ್ಯಗಳನ್ನು ಕೊನೆಯವರೆಗೂ ಪಾಲಿಸಿದ ತಡಗಣಿ ಶಿವಪ್ಪನವರ ಅದಮ್ಯ ಚೇತನಕ್ಕೆ ಗೌರವಪೂರ್ಣ ವಂದನೆ.


~ ~ ~ ~ ~ ~ ~

Sunday, July 5, 2020

ಗುರುಪೂರ್ಣಿಮೆ : ಮಹಾಋಷಿ ವೇದವ್ಯಾಸರ ಅರ್ಥಪೂರ್ಣ ಜನ್ಮದಿನ


ಗುರುಪೂರ್ಣಿಮೆ

ಮಹಾಋಷಿ ವೇದವ್ಯಾಸರ ಅರ್ಥಪೂರ್ಣ ಜನ್ಮದಿನ 

ಇಂದು ೫ನೇ ಜುಲೈ ೨೦೨೦ರಂದು ಭಾನುವಾರ “ಗುರುಪೂರ್ಣಿಮೆ”ಯನ್ನು ಆಚರಿಸುತ್ತಿದ್ದೇವೆ. ಆದರೆ, ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೇ ಈಬಾರಿ ಗುರುಪೂರ್ಣ್ಮೆಯನ್ನು ಆಚರಿಸುತ್ತಿದ್ದಾರೆ.

ಕ್ಷೀರಸಮುದ್ರವಾಸಿಯಾದ ಶ್ರೀವೈಕುಂಠಾಧಿಪತಿ ಶ್ರೀಮನ್ನಾರಾಯಣನ ಅವತಾರವೇ ಎನಿಸಿದ ಮಹಾತಪಸ್ವಿ “ಮಹಾಋಷಿ ವೇದವ್ಯಾಸ”ರ ಜನ್ಮದಿನವನ್ನೇ “ಗುರುಪೂರ್ಣಿಮೆ”ಯ ದಿನವನ್ನಾಗಿ ಆಚರಿಸುವ ಪ್ರಾಚೀನ ವೈದಿಕ ಪದ್ಧತಿ ಇಂದಿಗೂ ಬಳಕೆಯಲ್ಲಿದ್ದು, ಜಗತ್ತಿನೆಲ್ಲೆಡೆ ಇರುವ ವಿವಿಧ ವೈದಿಕ ಮಠಗಳ ಮಠಾಧಿಪತಿಗಳು ಈ ಮಹತ್ವದ ದಿನದಂದು “ವ್ಯಾಸಪೂಜೆ” ನೆರವೇರಿಸಿ ತಮ್ಮ “ಚಾತುರ್ಮಾಸ್ಯ ವೃತ”ವನ್ನು ಆರಂಭಿಸುವುದು ಒಂದು ಪ್ರಾಚೀನ ಸಂಪ್ರದಾಯವೂ ಹೌದು.
ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅತ್ಯಂತ ಸಂಕೀರ್ಣ ಜೀವನಪದ್ಧತಿ ಎನಿಸಿರುವ ಹಿಂದೂ ವೈದಿಕ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಜೀವನಾದರ್ಶಗಳನ್ನು ನಾಲ್ಕು ಚತುರ್ವೇದಗಳನ್ನಾಗಿಯೂ, ನಾಲ್ಕು ಉಪವೇದಗಳನ್ನಾಗಿಯೂ ವಿಂಗಡಿಸಿದ್ದೇ ಆಲದೆ ೧೮ ಪುರಾಣಗಳನ್ನು ರಚಿಸಿ ನೀಡಿದ ಮಹಾತಪಸ್ವಿ – ಮಹಾಗುರು “ಮಹರ್ಷಿ ವೇದವ್ಯಾಸ”ರು. ಪ್ರಾಚೀನ ವೇದಕಾಲದಿಂದ ಹಿಡಿದು ಇಂದಿಗೂ ಪ್ರಸ್ತುತರಾದ ಶ್ರೀಗಳು ಜನನ - ಮರಣಗಳನ್ನು ಗೆದ್ದ ಅಮರರು. ಹಾಗಾಗಿ ಇಂದಿಗೂ ಭರತಖಂಡದ ಸಕಲ ವೈದಿಕ ವೃಂದದ ಆಂತರ್ಯದಲ್ಲಿ ಇರುವವರು ಇವರು.

ಈ ಮಹಾಮಹಿಮ ಮಹಾಋಷಿ ವೇದವ್ಯಾಸರ ಪೂರ್ಣನಾಮ “ಶ್ರೀಕೃಷ್ಣ ದ್ವೈಪಾಯನ ವ್ಯಾಸ” ಎಂದು. ಇವರ ಮೈಬಣ್ಣ ಕಪ್ಪಾಗಿರುವುದರಿಂದ “ಶ್ರೀಕೃಷ್ಣ” ಎಂದೂ, ಕಲ್ಪಿ ಎಂಬ “ದ್ವೀಪ”ದಲ್ಲಿ ಜನಿಸಿದ್ದರಿಂದ “ದ್ವೈಪಾಯನ” ಎಂದೂ, ಪವಿತ್ರ ಕ್ಷೇತ್ರ ಬದರೀಕಾಶ್ರಮದಲ್ಲಿ ವಾಸಿಸುತ್ತಿದ್ದುದರಿಂದಾಗಿ “ಬಾದರಾಯಣ”ರೆಂದೂ ಕರೆಯಲ್ಪಡುವ ಇವರು ವೇದಗಳನ್ನೂ - ಉಪವೇದಗಳನ್ನೂ ಜಗತ್ತಿಗೆ ನೀಡಿರುವುದರಿಂದ “ವೇದವ್ಯಾಸ”ರೆಂದೇ ಜಗತ್ತಿಗೆ ಚಿರಪರಿಚಿತರು.

ಇವರು ಮಹಾಋಷಿ ಪರಾಶರ ಹಾಗೂ ಸತ್ಯವತಿಯರ ಸುಪುತ್ರರು. ಇಡೀ ಮಹಾಭಾರತವನ್ನು ಕಣ್ಣಾರೆ ಕಂಡವರು. ಮಹಾಭಾರತಕ್ಕಿಂತ ಆದಿಯಲ್ಲಿಯೇ ಜನಿಸಿ, ಮಹಾಭಾರತದ ಕಾಲದುದ್ದಕ್ಕೂ ಪ್ರತಿಯೊಂದು ಘಟನೆಯನ್ನೂ ಕಣ್ಣಾರೆ ಕಂಡು, ಅಗತ್ಯವಿದ್ದಾಗಲೆಲ್ಲಾ ಪಾಂಡವ – ಕೌರವರಿಗೆ ಮಾರ್ಗದರ್ಶನ ನೀಡಿ, ಬುದ್ಧಿವಾದಗಳನ್ನು ಹೇಳಿ, ಸೃಷ್ಠಿಕರ್ತ ಬ್ರಹ್ಮದೇವನ ಆಶಯದಂತೆ ಇಡೀ ಮಹಾಭಾರತ ಮಹಾಕಾವ್ಯವನ್ನು ಭಗವಾನ್ ಗಣಪತಿಯಿಂದ ಬರೆಸಿ ಜಗತ್ತಿಗೆ ನೀಡಿದ ಮಹಾನುಭಾವರಿವರು.

“ವೇದವ್ಯಾಸ ಜಯಂತಿ”ಯೂ ಹಾಗೂ “ಗುರುಪೂರ್ಣಿಮೆ”ಯೂ ಆದ ಇಂದು ಈ ಮಹಾಮಹಿಮ ವೈದಿಕ ಗುರುಗಳು ಬಾಳಿ-ಬದುಕಿದ ಶ್ರೀಕ್ಷೇತ್ರಗಳನ್ನು ಒಮ್ಮೆ ಸಂದರ್ಶಿಸೋಣ ಬನ್ನಿ.

ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರಳೆನಿಸಿರುವ ಬದರೀನಾಥ – ಕೇದಾರನಾಥ ಯಾರಿಗೆ ಗೊತ್ತಿಲ್ಲ ಹೇಳಿ ? ಪವಿತ್ರ ಕ್ಷೇತ್ರ ಬದರೀನಾಥದಿಂದ ಸ್ವಲ್ಪವೇ ದೂರದಲ್ಲಿರುವ ಶ್ರೀಕ್ಷೇತ್ರ “ಆದಿ ಬದರಿ”. ಇಲ್ಲಿಯೇ ಸಮೀಪದಲ್ಲಿ ಅನೇಕಾನೇಕ ವೇದಕಾಲೀನ ಘಟನೆಗಳಿಗೆ ಸಾಕ್ಷೀಭೂತವಾದ ಪವಿತ್ರ ಸರಸ್ವತೀ ನದಿ ಹರಿಯುತ್ತಿದೆ. ಈ ಪ್ರದೇಶದಲ್ಲಿಯೇ “ವ್ಯಾಸಗುಹೆ” (ವ್ಯಾಸ ಗುಹಾ) ಎನ್ನುವ ಗುಹೆಯಿದ್ದು ಇಲ್ಲಿ ಪ್ರತಿದಿನವೂ ಮಹಾಋಷಿ ವೇದವ್ಯಾಸ ಪೂಜಿಸಲ್ಪಡುತ್ತಾರೆ. ಹೊರಗಿನಿಂದ ಆಧುನಿಕ ಮನೆಯಂತೆ ಕಂಡರೂ ಒಳಗಿನಿಂದ ಇಂದಿಗೂ ಗುಹಾರೂಪದಲ್ಲಿರುವ ಈ ಗುಹೆಯಲ್ಲಿಯೇ ಶ್ರೀ ವೇದವ್ಯಾಸರು ತಪಸ್ಸನ್ನಾಚರಿಸಿದ್ದರು ಎಂಬ ಐತಿಹ್ಯವಿದೆ.

ಬಹುಷಃ ಮಹಾಋಷಿ ವೇದವ್ಯಾಸರ ಸುಪುತ್ರರೂ, ಮಹಾಋಷಿಗಳೂ ಆಗಿದ್ದ ಶುಕಮುನಿಗಳೂ, ಇವರ ಪುನರವತಾರವೆಂದೇ ಪ್ರಸಿದ್ಧರಾದ ಪರಮಗುರು ಗೌಡಪಾದಾಚಾರ್ಯರೂ ಹಾಗೂ ಗೌಡಪಾದಾಚಾರ್ಯರ ಪ್ರಿಯಶಿಷ್ಯರೂ ಆದ ಗೋವಿಂದ ಭಗವತ್ಪಾದರೂ ಇದ್ದಿದ್ದು ಇದೇ ಗುಹೆಯಲ್ಲಿರಬಹುದು. ಇದು ನಿಜವಾದರೆ ಆದಿಗುರು ಶ್ರೀ ಶಂಕರಾಚಾರ್ಯರಿಗೆ ಅವರ ಗುರು ಶ್ರೀ ಗೋವಿಂದ ಭಗವತ್ಪಾದರು ಸನ್ಯಾಸದೀಕ್ಷೆ ನೀಡಿದ್ದೂ ಇದೇ ಗುಹೆಯಲ್ಲಿರಬಹುದೇನೋ ?

ಸರಿಸುಮಾರು ಇದೇ ಪ್ರದೇಶದಲ್ಲೇ ಇಂಥದ್ದೇ ಮತ್ತೊಂದು ಪ್ರಾಚೀನ ಗುಹೆಯಿದ್ದು ಇದನ್ನು “ಗಣೇಶ ಗುಹಾ” ಎಂದೇ ಕರೆಯುತ್ತಿದ್ದು, ಮಹಾಋಷಿ ವೇದವ್ಯಾಸರು ಭಗವಾನ್ ಗಣಪತಿಯಿಂದ ಮಹಾಭಾರತ ಮಹಾಕಾವ್ಯವನ್ನು ಬರೆಸಿದ್ದೂ ಇಲ್ಲೇ ಎಂಬ ಪ್ರಾಚೀನ ಐತಿಹ್ಯವಿದೆ.

ಉತ್ತರ ಭಾರತದ ವೇದಕಾಲೀನ ಸರಸ್ವತೀ ನದೀತೀರದಲ್ಲಿ ಬಾಳಿಬದುಕಿದ್ದ ವೈದಿಕ ಜನಾಂಗವೆನಿಸಿದ “ಗೌಡ ಸಾರಸ್ವತ ಬ್ರಾಹ್ಮಣ” (ಜಿ.ಎಸ್.ಬಿ.) ಸಮುದಾಯದವರ ಮೂರು ಗುರುಮಠಗಳಲ್ಲಿ ಒಂದಾದ ಪ್ರಾಚೀನ ಶ್ರೀಕಾಶೀಮಠದ ಆರಾಧ್ಯದೇವರೂ “ಶ್ರೀವ್ಯಾಸ ರಘುಪತಿ” ಎಂಬ ಹೆಸರಿನಲ್ಲಿರುವ “ಶ್ರೀ ವೇದವ್ಯಾಸ”ರೇ. ಈ ಕಾಶೀಮಠದ ಬ್ರಹ್ಮೈಕ್ಯ್ಯ ಶ್ರೀಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಶ್ರೀಪಾದಂಗಳವರು ಮಹಾಋಷಿ ವೇದವ್ಯಾಸರು ಜನ್ಮತಾಳಿದ “ಕಲ್ಪಿ” ಎಂಬ ದ್ವೀಪದಲ್ಲಿ “ವೇದವ್ಯಾಸ ಮಂದಿರ”ವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಶ್ರೀಶ್ರೀಗಳವರ ಶುಭಾಶೀರ್ವಾದಗಳಿಂದಾಗಿಯೇ ನಮ್ಮ ಶಿವಮೊಗ್ಗದ ಜಿ.ಎಸ್.ಕೆ.ಎಂ. ರಸ್ತೆಯಲ್ಲಿ ಶಿವಮೊಗ್ಗ ಗೌಡಸಾರಸ್ವತ ಸಮಾಜಕ್ಕೆ ಸೇರಿದ ಬೃಹತ್ ಶ್ರೀಲಕ್ಷ್ಮೀ ವೆಂಕಟರಮಣ ದೇವಮಂದಿರವೂ ನಿರ್ಮಾಣಗೊಂಡಿರುವುದು ಸ್ತುತ್ಯರ್ಹ.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ನಮ್ಮ ಹುಟ್ಟಿನಿಂದ ಇಂದಿನವರೆಗೂ ವಿವಿಧ ಹಂತಗಳಲ್ಲಿ ನಮ್ಮನ್ನು ಕೈಹಿಡಿದು ದಾಟಿಸಿದ ಎಲ್ಲಾ ಗುರುಗಳನ್ನೂ ನೆನೆಯುತ್ತಾ ಮಹಾಗುರು ಶ್ರೀ ವೇದವ್ಯಾಸರಿಂದಲೇ ರಚಿಸಲ್ಪಟ್ಟ ಶ್ರೀವಿಷ್ಣುಸಹಸ್ರನಾಮವನ್ನೋ ಅಥವಾ ಶ್ರೀಮದ್ ಭಗವದ್ಗೀತೆಯನ್ನೋ ಪಾರಾಯಣಮಾಡುವ ಮೂಲಕ ನಮ್ಮ ನಮ್ಮ ಮನೆಗಳಲ್ಲಿಯೇ “ವ್ಯಾಸಪೂರ್ಣಿಮೆ”ಯನ್ನು ಅರ್ಥಪೂರ್ಣವಾಗಿ ಆಚರಿಸೋಣ.

ಶ್ರೀವೇದವ್ಯಾಸರಾದಿಯಾಗಿ ಎಲ್ಲ ಶ್ರೀಗುರುಗಳೂ ನಿಮ್ಮೆಲ್ಲರನ್ನೂ ಹರಸಲಿ ಮತ್ತು ಕೊರೋನಾ ಮಹಾಮಾರಿಯ ಉಪಟಳದಿಂದ ಈ ಜಗತ್ತನ್ನು ಪಾರುಮಾಡಲಿ.

ಸಚಿತ್ರ ಲೇಖನ : ಸತೀಶ್ ನಾಯಕ್, ಶಿವಮೊಗ್ಗ

Tuesday, May 5, 2020

ಅಳತೆ ಉಪಕರಣಗಳ ಪರಿಚಯ

ಪೀಠಿಕೆ: ತಲೆತಲಾಂತರಗಳ ಅನುಭವದ ಆಧಾರದ ಮೇಲೆ, ಉದ್ದಳೆತಗಳನ್ನು ಮಾಡುವ ವಿಧಾನಗಳು ಅಭಿವೃದ್ಧಿಗೊಂಡಿವೆ. ಇಂದು ಲಭ್ಯವಿರುವ ವಿಧಾನಗಳನ್ನು ಬಳಸಲು ಬೇಕಾದ ಉಪಕರಣಗಳು ಹಲವು. ಅಳತೆ ವಿಧಿವಿಧಾನ ಅರಿಯುವ ಮುನ್ನ ಈ ಉಪಕರಣಗಳನ್ನು ಪರಿಚಯ ಮಾಡಿಕೊಳ್ಳುವುದು ಸೂಕ್ತ.

ಕಲಿಕೆಯ ಉದ್ದೇಶ:

ಈ ಭಾಗದ ಅಧ್ಯಯನದ ನಂತರ ವಿದ್ಯಾರ್ಥಿಗಳು ಕೆಳಗಿನ ಕೌಶಲ್ಯಗಳನ್ನು ಕಲಿಯಬೇಕೆಂಬುದು ಆಶಯ.
ಅ) ಜಮೀನಿನ ಅಳತೆಗೆ ಬೇಕಾಗುವ ಉಪಕರಣಗಳನ್ನು ಗುರುತಿಸುವುದು.
ಆ) ಜಮೀನಿನ ಅಳತೆಗೆ ಬೇಕಾಗುವ ಉಪಕರಣಗಳ ಬಳಸುವ ಕೌಶಲ್ಯ

ಉಪಕರಣಗಳು

ಸರಪಳಿ(ಚೈನ್) ಮತ್ತು ಟೇಪು

ಸರಪಳಿ: ಗಟ್ಟಿಯಾದ ಉಕ್ಕಿನ ತಂತಿಯಿಂದ ಸರಪಳಿ ತಯಾರಿಸುತ್ತಾರೆ. ಸರಪಳಿಯಲ್ಲಿ ಲಿಂಕ್ ಗಳಿರುತ್ತವೆ. ಒಂದು ಲಿಂಕಿಗೂ ಇನ್ನೊಂದು ಲಿಂಕಿಗೂ ಜೋಡಿಸಲು 3 ಸಣ್ಣ ವ್ಯಾಸದ ಉಂಗುರಗಳಿರುತ್ತವೆ. ಸರಪಳಿಯ ಎರಡೂ ಕೊನೆಗಳಲ್ಲಿ ಹಿತ್ತಾಳೆ ಹಿಡಿ ಇರುತ್ತವೆ. ಅಳತೆ ಮಾಡುವಾಗ ಲಿಂಕ್ ಎಣಿಸಲು ಅನುಕೂಲವಾಗುವಂತೆ ತಾಳಿ/ಟ್ಯಾಲಿಗಳಿರುತ್ತವೆ.






ಸರಪಳಿ ವಿಧಗಳು

ಅಳತೆ ಮಾನಕಕ್ಕೆ ಅನುಗುಣವಾಗಿ ನಾಲ್ಕು ತರಹದ ಸರಪಳಿಗಳನ್ನು ಬಳಸುವರು.
    1. ಗುಂಟರ್ ಸರಪಳಿ: ಈ ಸರಪಳಿ 66 ಅಡಿ ಉದ್ದವಿದ್ದು 100 ಲಿಂಕ್ ಗಳಿರುತ್ತವೆ. ಎಕರೆ ಮತ್ತು ಮೈಲು ಅಳತೆಗೆ ಉಪಯೋಗಿಸುತ್ತಾರೆ.
    2. ರೆವಿನ್ಯೂ ಸರಪಳಿ(ಅಣಾ ಚೈನ್): ಇದು 33 ಅಡಿ ಉದ್ದವಿದ್ದು 50 ಲಿಂಕ್ ಗಳಿರುತ್ತವೆ. ಸರ್ವೆ ಇಲಾಖೆ ಮೊದಲು ಬಳಸುತ್ತಿದ್ದ ಸರಪಳಿ ಇದಾಗಿದೆ.
    3. ಇಂಜನಿಯರ್ ಸರಪಳಿ: ಈ ಸರಪಳಿ 100 ಅಡಿ, 100 ಲಿಂಕ್ ಇರುತ್ತದೆ.
    4. ಮೆಟ್ರಿಕ್ ಸರಪಳಿ: ಇದರಲ್ಲಿ 20, 30 ಮೀಟರ್ ಉದ್ದದ 100 ರಿಂದ 150 ಲಿಂಕ್ ಗಳಿರುವ ಸರಪಳಿಗಳು ಸಿಗುತ್ತವೆ. ಮೆಟ್ರಿಕ್ ಅಳತೆಗೆ ಅನುಕೂಲವಾಗುವುದು.

ಟೇಪು: ಟೇಪುಗಳನ್ನು ವೈವಿಧ್ಯಮಯ ವಸ್ತುಗಳಿಂದ ಮಾಡುತ್ತಾರೆ. ಇವುಗಳ ಉದ್ದದಲ್ಲೂ ವೈವಿಧ್ಯತೆ ಕಾಣಬಹುದು. ಸರ್ವೆ ಮಾಡುವವರು ಸಾಮಾನ್ಯವಾಗಿ ಬಳಸುವರು. ಇಂಜನಿಯರಿಂಗ್ ಅಳತೆಗೆ ಸ್ಟೀಲ್ ಟೇಪು, ಲೋಹ/ಲೋಹೇತ್ತರ ವಸ್ತು ಹೆಣೆದ ಟೇಪು, ಫೈಬರ್ ಟೇಪುಗಳನ್ನು ಬಳಸುತ್ತಾರೆ.



ಬಟ್ಟೆ ಅಥವಾ ಲೆನಿನ್ ಟೇಪು: ಇವುಗಳ ಹತ್ತಿರ ಇರುವ ಬಿಂದುಗಳ ಅಳತೆಗೆ ಬಳಸುತ್ತಾರೆ. ವಾರ್ನಿಶ್ ಬಳಿದು, ಹೆಣದು ತಯಾರಿಸಿದ್ದು, ಸುಮಾರು 1½ ಸೆಂ.ಮೀ. ಅಗಲವಿದ್ದು ಸುಲಭವಾಗಿ ಸುತ್ತಲು ಬರುವಂತೆ ವಿನ್ಯಾಸ ಮಾಡಿದ ಚರ್ಮ ಅಥವಾ ಪ್ಲಾಸ್ಟಿಕ್ ಕೇಸ್/ಬಾಕ್ಸ್ ಗಳಲ್ಲಿ ಜೋಡಿಸಿರುತ್ತಾರೆ. ತುದಿಗೆ ಹಿಡಿಯಲು ಅನುಕೂಲವಾಗುವಂತೆ ಹಿತ್ತಾಳೆ ಅಥವಾ ಲೋಹದ ರಿಂಗ್ ಇರುತ್ತದೆ. ಇಂಚು ಮತ್ತು ಸೆಂಟಿಮೀಟರ್ ಅಳತೆ ಮಾನಕ ಅಳವಡಿಸಲಾಗಿರುತ್ತದೆ. ಹಗುರ ಬಳಕೆಗೆ ಸುಲಭ ಆದರೆ ಆರ್ಧ್ರತೆ ಇದ್ದರೆ ಬೇಗ ಹಾಳಾಗುತ್ತದೆ.

ಲೋಹದ ಟೇಪು: ದಾರ ಮತ್ತು ಲೋಹದ (ಹಿತ್ತಾಳೆ/ತಾಮ್ರ) ದಾರಗಳನ್ನು ಹೆಣೆದು ತಯಾರಿಸಿರುತ್ತಾರೆ. ಇದರಿಂದ ತಿರುಚುವುದನ್ನು ತಡೆಯಬಹುದು ಹಾಗೂ ಎಳೆದಾಗ ಹಿಗ್ಗುವುದನ್ನು ಸಹ ತಪ್ಪಿಸಬಹುದು. ಆದ್ದರಿಂದ ಬಟ್ಟೆ ಟೇಪುಗಳಿಗಿಂತ ನಿಖರವಾಗಿ ಅಳತೆ ಮಾಡಬಹುದು.

ಇನ್ವರ್ ಟೇಪು: ಹೆಚ್ಚು ನಿಖರ ಅಳತೆಗೆ ಬಳಸಬಹುದು. ಇದನ್ನು ಕಬ್ಬಿಣ(70%) ಮತ್ತು ನಿಕ್ಕಲ್(30%) ಮಿಶ್ರ ಮಾಡಿದ ಅಲಾಯ್ ಲೋಹದಿಂದ ಮಾಡುತ್ತಾರೆ. ಅತ್ಯಂತ ಕಡಿಮೆ ಹಿಗ್ಗುವಿಕೆ ಹೊಂದಿರುತ್ತದೆ. ಆರು ಮಿಲಿಮೀಟರ್ ಅಗಲ ಹಾಗೂ 100 ಮೀಟರ್ ವರೆಗಿನ ವಿವಿಧ ಅಳತೆಯಲ್ಲಿ ಲಭ್ಯ.

ಲಂಬಗೋಲು: ಜಮೀನಿನಲ್ಲಿ ಲಂಬರೇಖೆಗಳನ್ನು ನಿರ್ಮಿಸಿಕೊಳ್ಳಲು ಬೇಕಾದ ಉಪಕರಣ



    1. ಕ್ರಾಸ್ ಸ್ಟ್ಯಾಫ್: ಮರದ ಚೌಕಾಕಾರದ ಘನಾಕೃತಿಯಲ್ಲಿ ಮೇಲು ಭಾಗದಲ್ಲಿ ಪರಸ್ಪರ ಛೇದಿಸುವಂತೆ ಎರಡು ಕಂಡಿ ಮಾಡಿದ್ದು, ಒಂದು ಕಂಡಿ ಇನ್ನೊಂದು ಕಂಡಿಗೆ ಛೇದಿಸುವಲ್ಲಿ 900 ಕೋನ ಉಂಟಾಗಿರುತ್ತದೆ. ಇದರ ಕೆಳಭಾಗದಲ್ಲಿ 5 ಅಡಿ ಉದ್ದದ ಕಬ್ಬಿಣದ ಸಲಾಕೆಯನ್ನು ಮರದ ಬುರುಡೆಗೆ ಸ್ಕ್ರೂ ಮಳೆಗಳಿಂದ ಸೇರಿಸಿರುತ್ತೆ. ಕಂಬಿಯ ಕೆಳಭಾಗ ನೆಲದಲ್ಲಿ ಹೂಳಲು ಅನುಕೂಲವಾಗುವಂತೆ ಮೊನಚಾಗಿರುತ್ತದೆ.


    2. ತೆರೆದ ಕ್ರಾಸ್ ಸ್ಟ್ಯಾಫ್: ಇದು ಕ್ರಾಸ್ ಸ್ಟ್ಯಾಫ್ ರೀತಿಯೇ ಇರುತ್ತದೆ. ಮೇಲು ಭಾಗದ ಮರದ ಘನಾಕೃತಿಯ ಬದಲು ಮಧ್ಯ ಕೂದಲೆಳೆಯಷ್ಟು ಕಿಂಡಿ ಇರುವ ಲೋಹದ ನಾಲ್ಕು ಪಟ್ಟಿಗಳನ್ನು 900 ಕೋನದ ಅಂತರದಲ್ಲಿ ಹಿತ್ತಾಳೆ/ಲೋಹದ ತಳಪಟ್ಟಿಯ ಮೇಲೆ ಜೋಡಿಸಲಾಗಿರುತ್ತದೆ. ವಿರುದ್ಧ ದಿಕ್ಕಿನಲ್ಲಿರುವ ಎರಡು ಪಟ್ಟಿಗಳ ಮೂಲಕ ಹಾದು ಹೋಗುವ ರೇಖೆಗಳು ಪರಸ್ಪರ ಲಂಬವಾಗಿ ಛೇದಿಸುವಂತೆ ವಿನ್ಯಾಸವಿರುತ್ತದೆ.



    3. ಆಪ್ಟಿಕಲ್ ಸ್ಕ್ವೇರ್(ಕನ್ನಡಿ ಚೌಕ): ಸಾಮಾನ್ಯವಾಗಿ ಹಿತ್ತಾಳೆಯ ಲೋಹದಿಂದ 5 ಸೆಂ.ಮೀ. ದುಂಡಾಗಿ 1.25 ಸೆಂ.ಮೀ. ದಪ್ಪವಾಗಿ ಡಬ್ಬ ರೀತಿಯಲ್ಲಿ ತಯಾರಿಸಿರುತ್ತಾರೆ. ಡಬ್ಬಿಯ ಮೂರು ಪಾರ್ಶ್ವಗಳಲ್ಲಿ ಕೂದಲೆಳೆಯ ರೀತಿ ಕಿಂಡಿಗೆರೆಗಳಿದ್ದು ಎರಡು ಪರಸ್ಪರ ಅಭಿಮುಖವಾಗಿದ್ದು ಇನ್ನೊಂದು ಅಭಿಮುಖವಾಗಿರುವ ಕಿಂಡಿಗಳ ರೇಖೆಯನ್ನು ಲಂಬ ಛೇದಿಸುವಂತೆ ಮಾಡಲಾಗಿರುತ್ತದೆ. ಒಳಗಡೆ ಎರಡು ಕನ್ನಡಿಗಳನ್ನು ಲಂಬಕೋನದಲ್ಲಿ ಜೋಡಿಸಲಾಗಿರುತ್ತದೆ. ಕನ್ನಡಿಯಲ್ಲಿ ಎರಡು ಕಿಂಡಿಗಳಿಂದ ಬರುವ ಪ್ರತಿಬಿಂಬಗಳು ಗೋಚರಿಸುವಂತೆ ಜೋಡಿಸಲಾಗಿರುತ್ತದೆ. ಎರಡು ಕನ್ನಡಿಯ ಬದಲು ಒಂದು ಪ್ರಿಸಂ ಅಥವಾ ಎರಡು ಪ್ರಿಸಂನಿಂದ ಸಿದ್ಧಪಡಿಸಿದ ಪ್ರಿ ಸಮ್ಯಾಟಿಕ್ ಸ್ವ್ಕೇರ್ ಎಂದು ಕರೆವ ಉಪಕರಣಗಳೂ ಸಿಗುತ್ತವೆ. ಅವನ್ನೂ ಈ ಕಾರ್ಯಕ್ಕೆ ಬಳಸಬಹುದು.

ತೂಕದ ಗುಂಡು: ಲಂಬವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಬಳಸುವ ಸಾಧನ. ತುದಿ ಚೂಪಾಗಿರುವ ಲೋಹದ ಗುಂಡು, ಇದನ್ನು ದಾರದಿಂದ ತೂಗುವಂತೆ ಹಿಡಿಯುತ್ತಾರೆ. ತೂಗುವುದು ಸ್ಥಿರವಾದ ಸ್ಥಿತಿ ಲಂಬತೆಯನ್ನು ಸೂಚಿಸುತ್ತದೆ.



ಆಚಾರ್ ರಸಮಟ್ಟ: ಒಂದು ವಸ್ತು ಉಪಕರಣದ ಮಟ್ಟ ಅಥವಾ ಲಂಬವಾಗಿರುವುದನ್ನು ಗುರುತಿಸಲು/ಖಾತ್ರಿಪಡಿಸಿಕೊಳ್ಳಲು ಬಳಸುತ್ತಾರೆ. ಒಂದೇ ರಸಮಟ್ಟದಲ್ಲಿ ಹಲವು ಬಾಗಿದ ಮಟ್ಟ ನೋಡುವ ಕೊಳವೆಗಳಿರಬಹುದು. ಪ್ರತಿಯೊಂದು ರಸಮಟ್ಟದ ಕೊಳವೆಗಳನ್ನು ಅಪೂರ್ಣವಾಗಿ ದ್ರವ ವಸ್ತುವಿನಿಂದ ತುಂಬಲಾಗಿರುತ್ತದೆ.(ನೀರು, ಎಣ್ಣೆ ಅಥವಾ ಪ್ಯಾರಾಫಿನ್), ಉಳಿದ ಭಾಗ ಗಾಳಿ, ಇದು ಗುಳ್ಳೆಯಂತೆ ಕಾಣುತ್ತದೆ. ಈ ಕೊಳವೆ ಮೇಲೆ ಮಧ್ಯ ಎರಡು ಗುರುತಿನ ಗೆರೆ ಇರುತ್ತವೆ. ಮಟ್ಟ/ಲಂಬವಾಗಿದ್ದಾಗ ಗುಳ್ಳೆ ಎರಡು ಗುರುತಿನ ಗೆರೆ ಮಧ್ಯ ಇರುತ್ತದೆ.



ಸಾಲುಗೋಲು(ರೇಂಜಿಂಗ್ ರಾಡ್/ಪೊಲ್): ಪ್ರದೇಶ ಗುರುತಿಸಲು ಮತ್ತು ಸಾಲು ನೇರ ಮಾಡಲು ಬಳಸುವರು. ಕಬ್ಬಿಣದ ಕೊಳವೆ ಅಥವಾ ಮರದ ಕೋಲುಗಳ ಒಂದು ತುದಿ ಮೊನಚಾಗಿರುವಂತೆ ತಯಾರಿಸಿರುತ್ತಾರೆ. ಸಾಮಾನ್ಯವಾಗಿ 3 ರಿಂದ 4 ಸೆಂ.ಮೀ. ದಪ್ಪ ಮತ್ತು 2 ಮೀಟರ್ ಉದ್ದವಿರುತ್ತದೆ. ದೂರದಿಂದ ಕಾಣಲು ಅನುಕೂಲವಾಗುವಂತೆ ಕೆಂಪು ಮತ್ತು ಬಿಳಿ ಬಣ್ಣಗಳನ್ನು ಹಚ್ಚಿ ಸಿದ್ಧಪಡಿಸಲಾಗುತ್ತದೆ. ಅಗತ್ಯಬಿದ್ದಲ್ಲಿ ಕೋಲಿನ ತುದಿಗೆ ಕೆಂಪು ಮತ್ತು ಬಿಳಿ ಬಣ್ಣದ ಬಾವುಟ ಕಟ್ಟಬಹುದು.




ಗೂಟ: ಅಳತೆ ಮಾಡುವಾಗ ಎಲ್ಲೆ/ಅಂಚುಗಳನ್ನು ಅಥವಾ ಅಳತೆ ಮಾಡಬೇಕಾದ ಬಿಂದುಗಳನ್ನು ಗುರುತಿಸಲು ಗೂಟಗಳನ್ನು ಬಳಸಲಾಗುವುದು. ಸಾಮಾನ್ಯವಾಗಿ ಗೂಟಗಳನ್ನು ಮರದ ರೆಂಬೆ ಕೊಂಬೆಗಳನ್ನು ಕೆತ್ತಿ ಸಿದ್ಧಪಡಿಸಿಕೊಳ್ಳಲಾಗುವುದು. ಕಬ್ಬಿಣದ ರಾಡ್ ಗಳಿಂದಲೂ ಮಾಡುತ್ತಾರೆ. ಇದರ ಉದ್ದ ಸಾಮಾನ್ಯವಾಗಿ 40 ರಿಂದ 60 ಸೆಂ.ಮೀ. ಇರುತ್ತದೆ. ಬಳಕೆಗೆ ಅನುಗುಣವಾಗಿ ಉದ್ದಳತೆಯಲ್ಲಿ ವ್ಯತ್ಯಾಸ ಮಾಡಿಕೊಳ್ಳಬಹುದು.

           
ಗುರುತು ಮೊಳೆ: ಪ್ರತಿ ಸರಪಳಿಯೊಂದಿಗೆ 10 ಗುರುತು ಮೊಳೆಗಳಿರುತ್ತವೆ. ಈ ಮೊಳೆಗಳನ್ನು ಗಟ್ಟಿಯಾದ 4 ಮಿ.ಮೀ. ವ್ಯಾಸದ ಉಕ್ಕಿನ ಸರಳುಗಳಿಂದ ಮಾಡಿದ್ದು, ಒಂದು ತುದಿ ಮೊನಚು ಇನ್ನೊಂದು ತುದಿ ಉಂಗುರಾಕಾರವಿರುತ್ತದೆ. ಉದ್ದಳತೆ ಮಾಡಲು ಹಾಗೂ ಕ್ಷೇತ್ರದಲ್ಲಿ ಬಿಂದುಗಳನ್ನು ಗುರುತು ಮಾಡಲು ಇವನ್ನು ಬಳಸುತ್ತಾರೆ.

 

 

ಚಟುವಟಿಕೆ:

    1. ಸಾಲುಗೋಲನ್ನು ಲಂಬವಾಗಿ, ನಿಗದಿತ ಬಿಂದುವಿಗೆ ಹಾಕುವುದನ್ನು ಅಭ್ಯಾಸ ಮಾಡುವುದು.
    2. ಸರಪಳಿ ಬಿಚ್ಚುವುದು, ಮಡಿಚುವುದು ಹಾಗೂ ಎರಡು ಬಿಂದುಗಳ ಮಧ್ಯ ಸರಪಳಿ ನೇರಗೊಳಿಸಿ ಅಳತೆ ಮಾಡುವುದು.
    3. ಕ್ರಾಸ್ ಸ್ಟ್ಯಾಫ್ ಬಳಕೆ ಮಾಡುವ ಕೌಶಲ್ಯ.

Friday, May 1, 2020

ಸ್ತಬ್ಧವಾಗಿದೆ ಜಗತ್ತು

ಸ್ತಬ್ಧವಾಗಿದೆ ಜಗತ್ತು'
ತನ್ನ ಹದಗೆಟ್ಟ ಬದುಕು ಸಾವಿನ ಮೆಟ್ಟಿಲೇರುವಾಗ
ಮಹಾಮಾರಿಯ ನೋಟ ಮಸಣದೆಡೆಗೆ ನೂಕುವಾಗ,
ತನ್ನ ವ್ಯಷ್ಟಿ ಸಮಷ್ಟಿಯ ಬದುಕು
ದೊಂಬರಾಟವಾಡುವಾಗ
ಭೀತಿಯೇ ಭೂತವಾಗಿ ಕಾಡಿದಾಗ,

ಸ್ತಬ್ಧವಾಗಿದೆ ಜಗತ್ತು'
ವ್ಯಥೆಗಳ ಗುರುತು ಗುರುತಾಗುವಾಗ
ನೆರಳುಗಳೆ ನರಕವಾಗಿ ನಲಿವಾಗ
ಬಾಂಧವರೆ ಬೆವರಿಳಿಸುವ ಮೃತ್ಯುವಾಗುವಾಗ
ಕರುಳ ಕುಡಿಗಳೆ ದೂರವಾಗುವಾಗ,
ಹಿರಿಯ ಕಿರಿಯರಾದಿಯಾಗಿ ಮಣ್ಣಲ್ಲಿ ಕೊಳೆತು ಕಥೆಯಾಗುವಾಗ,

ಸ್ತಬ್ಧವಾಗಿದೆ ಜಗತ್ತು'
ತನ್ನದೇ ವಿಪರೀತಗಳ ವೈಪರೀತ್ಯಗಳಿಗೆ
ಸಂಸ್ಕಾರ ಮರೆತು ಪ್ರಕೃತಿಯ ಪರಿಹಾಸ್ಯಗೈವಾಗ
ನಮ್ಮ ಸುಖದ ಆಗರಗಳೆ ಬದುಕ ಕಸಿವಾಗ
ತನ್ನತನವೆಲ್ಲ ತಣ್ಣಗಾಗಿಸಿ ಸ್ವಾರ್ಥತೆಯ ಮೆರೆವಾಗ,
ಕೋಟೆ ಕೊತ್ತಳೆನ್ನದೆ ನಗರ ಹಳ್ಳಿಗಳೆನ್ನದೆ
ಕರೋನ ತನ್ನ ಬೀಜವ ಜಗದಗಲ ಬಿತ್ತುವಾಗ,

ಸ್ತಬ್ಧವಾಗಿದೆ ಜಗತ್ತು'
ಕಟ್ಟಿದ ಬಾಳೆಲ್ಲ ಕಟ್ಟೆಯೊಡೆದು ಕೊಚ್ಚಿಹೋಗುವಾಗ
ದುಮ್ಮಾನದಿ ನರಳುತಿಹ ಬಾಳು,
ಮತ್ತೆ ಕಟ್ಟಿಕೊಳುವ ತವಕದಲಿ
ಸ್ತಬ್ದವಾಗಿದೆ ಜಗದ ಬದುಕು,
ಮನವಾಗದಿರಲಿ,
ಮನವು ಮತ್ತೆ ಚಿಗುರನುಳಿಸಿಕೊಳ್ಳಲಿ,
ಸ್ತಬ್ಧವಾಗಿಹ ಈ ಜಗದ ಬೇಗುದಿಯಲಿ,
ಕರೋನ ಮೋಡ ಕವಿದ
ವಾತಾವರಣದಲಿ...💙

✍ ಶಾಲಿನಿ ಆರ್,ಹುಬ್ಬಳ್ಳಿ ...🦋*

Tuesday, April 28, 2020

ಅದ್ಭುತ ತಾಂತ್ರಿಕ ಹವ್ಯಾಸ “ಹ್ಯಾಮ್ ರೇಡಿಯೋ”


ಈ ಜಗತ್ತಿನಲ್ಲಿ ಜನರು ಬಿಡುವಿನ ವೇಳೆಯನ್ನು ಕಳೆಯುವುದಕ್ಕೋಸ್ಕರ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ನೂರಾರು ತರಹದ ಹವ್ಯಾಸಗಳಲ್ಲಿ ಕೆಲವು ಅತಿವಿಶಿಷ್ಠವಾದವುಗಳು. ಇವುಗಳ ಪೈಕಿ ಅದ್ಭುತವಾದ ತಾಂತ್ರಿಕ ಹಾಗೂ ಪರಸ್ಪರ ಸಂವಹನ (ಕಮ್ಯೂನಿಕೇಷನ್) ನಡೆಸುವ ಹವ್ಯಾಸವೂ ಒಂದಿದೆ. ಅದೇ “ಅಮೆಚ್ಯೂರ್ ರೇಡಿಯೋ”. ಈ ಹವ್ಯಾಸದಲ್ಲಿ ತೊಡಗಿಕೊಂಡಿರುವವರು “ಹ್ಯಾಮ್”ಗಳೆಂದೇ ಜಗತ್ಪ್ರಸಿದ್ಧರು.
 
H A M ಎಂಬ ಮೂರಕ್ಷರದ ಹೆಸರಿನ ಹಿಂದೆ ಮೂರುಮಂದಿ ಆಧುನಿಕ ಜಗತ್ತಿನ ವಿಜ್ಞಾನಿಗಳ ಹೆಸರು ಅಚ್ಚೊತ್ತಿಕೊಂಡಿದೆ. ಏಕೆಂದರೆ ಈ ಹವ್ಯಾಸದಲ್ಲಿ ಈ ಮೂವರು ಅನ್ವೇಷಿಸಿದ ತತ್ವಗಳನ್ನೇ ಬಳಸಿಕೊಂಡಿರುವುದು. ಇಲ್ಲಿ ಮೊದಲ “H” ಅಕ್ಷರವು ವಿದ್ಯುದಯಸ್ಕಾಂತೀಯ ತರಂಗಗಳನ್ನು ಪ್ರಕೃತಿಯಲ್ಲಿ ನೈಸರ್ಗಿಕ ರೂಪಲ್ಲಿ ಗ್ರಹಿಸಿದ ಜರ್ಮನ್ ವಿಜ್ಞಾನಿ ಹೆನ್ರಿಚ್ ಹಟ್ರ್ಸ್‍ನ ಹೆಸರಿನ ಮೊದಲಕ್ಷರವಾಗಿದ್ದು, ಎರಡನೆಯ “A” ಅಕ್ಷರವು ಧ್ವನಿ ತರಂಗಗಳನ್ನು ವಿದ್ಯುದಯಸ್ಕಾಂತೀಯ ತರಂಗಗಳಾಗಿ ಮಾರ್ಪಡಿಸಿ, ತಂತಿಯಲ್ಲಿ ದೂರಕ್ಕೆ ಚಲಿಸಿದ ನಂತರ ಮತ್ತೆ ದ್ವನಿ ತರಂಗಗಳಾಗಿ ಮಾರ್ಪಡಿಸುವ “TELIVISION” ತಂತ್ರಜ್ಞಾನ ಅನ್ವೇಷಿಸಿದ ಅಲೆಕ್ಸಾಂಡರ್ ಗ್ರಹಾಂಬೆಲ್ನ ಹೆಸರಿನ ಮೊದಲಕ್ಷರವಾಗಿದೆ ಮತ್ತು ಮೂರನೆಯದಾದ “M” ರೇಡಿಯೋ ತಂತ್ರಜ್ಞಾನ ಅನ್ವೇಷಿಸಿದ ಮಾರ್ಕೋನಿಯ ಹೆಸರಿನ ಮೊದಲಕ್ಷರವಾಗಿದೆ.
 
ನಿಜಕ್ಕೂ ರೇಡಿಯೋ ಜನಕ ಮಾರ್ಕೋನಿ ಅಲ್ಲ. ಬದಲಾಗಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಎನ್ನುವುದು ಇಂದು ಜನಜನಿತ ವಿಷಯ. ಮಾರ್ಕೋನಿ ತನ್ನ ಉಪಕರಣದಲ್ಲಿ ಬಳಸಿರುವುದು ಜೆ.ಸಿ. ಬೋಸರ್ ಅನೇಷಣೆಯಾದ “ಕೋಹೆರರ್”ನ್ನು.
 
ಇಂದು ಜಗತ್ತಿನಾದ್ಯಂತ ಭಾರೀ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಎಲೆಕ್ಟ್ರಾನಿಕ್ ಸಂವಹನ ತಂತ್ರಜ್ಞಾನದ ಬೆನ್ನಹಿಂದೆ ಕೆಲಸ ಮಾಡುತ್ತಿರುವ ತಂತ್ರಜ್ಞರಲ್ಲಿ ಅತ್ಯಧಿಕ ಪ್ರಮಾಣದ ಹ್ಯಾಮ್‍ಗಳಿದ್ದಾರೆ. ಹ್ಯಾಮ್‍ಗಳು ಸದಾ ಏನಾದರೋಂದು ಚಟುವಟಿಕೆ ನಡೆಸುತ್ತಲೇ ಇರುತ್ತಾರೆ ಎನ್ನುವುದಕ್ಕೆ ಈ ತಾಂತ್ರಿಕ ಬೆಳವಣಿಗೆಗಳೇ ಸಾಕ್ಷಿ.
 
ಶತಮಾನದ ಆದಿಯಿಂದಲೂ ಸರಳ - ಸುಲಭ ಮಾಹಿತಿ ವರ್ಗಾವಣೆಯ ಮಾಧ್ಯಮವೆನಿಸಿದ್ದ “ಮೋರ್ಸ್‍ಕೋಡ್” (ಟೆಲಿಗ್ರಾಂ ಸಂಕೇತಗಳು) ಇಂದು ನಾಪತ್ತೆಯಾಗಿದ್ದರೂ “ಡಾಟ್-ಡ್ಯಾಷ್”ಗಳ ಈ ಸಂಕೇತಭಾಷೆಯು ಇಂದಿಗೂ ಬಳಕೆಯಾಗುತ್ತಿರುವುದು ಹ್ಯಾಮ್‍ಗಳಿಂದ ಮಾತ್ರ. ನೀವೂ “ಹ್ಯಾಮ್ ರೇಡಿಯೋ ಆಪರೇಟರ್” ಆಗಬೇಕಾದರೆ ವೇಗವಾಗಿ ಕೇಳುವ ಮೋರ್ಸ್ ಕೋಡ್ ಧ್ವನಿ ಆಲಿಸಿ ಅದನ್ನು ಅಕ್ಷರಗಳಲ್ಲಿ ಬರೆಯುವುದು ಹಾಗೂ ಟೆಲಿಗ್ರಾಫಿಕ್ ಕೀ-ಯನ್ನು ಬಳಸಿ ಯಾವುದೇ ವಾಕ್ಯವನ್ನಾದರೂ ಮೋರ್ಸ್ ಕೋಡ್‍ಗಳಲ್ಲಿ ರವಾನಿಸುವ ಸಾಮಥ್ರ್ಯ ಇರಲೇಬೇಕು. ಇದರ ತರಬೇತಿಯನ್ನೂ ಕೊಡಲಾಗುತ್ತದೆ.
 
18ವರ್ಷ ಮೇಲ್ಪಟ್ಟ ಯಾರು ಬೇಕಾದರೂ “ಹ್ಯಾಮ್ ರೇಡಿಯೋ ಆಪರೇಟರ್”ಗಳಾಗಬಹುದಿದ್ದರೂ ಮೊದಲಿಗೆ ಭಾರತದ ಕೇಂದ್ರ ಸರ್ಕಾರದ ಸಂವಹನ ಮಂತ್ರಾಲಯ (Ministry of Communication) ದವರು ನಡೆಸುವ ಪರೀಕ್ಷೆಯಲ್ಲಿ ಟೆರ್ಗಡೆ ಹೊಂದಬೇಕಾಗಿರುತ್ತದೆ. ಈ ಪರೀಕ್ಷೆಗೆ “ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್” ವತಿಯಿಂದ ತರಬೇತಿಯನ್ನು ನೀಡಲಾಗುತ್ತಿದೆ.

ಇಲ್ಲಿ “ಮೋರ್ಸ್ ಕೋಡ್ ರಿಸೀವಿಂಗ ಮತ್ತು ಸೆಂಡಿಂಗ್”, “ವೈರ್‍ಲೆಸ್ ರೂಲ್ಸ್ ಎಂಡ್ ರೆಗ್ಯುಲೇಷನ್ಸ್” ಮತ್ತು “ಎಲೆಕ್ಟ್ರಾನಿಕ್ಸ್ ಬೇಸಿಕ್ಸ್”ಗಳ ವಿಚಾರವಾಗಿ ತರಬೇತಿ ನೀಡಿ, ಸರ್ಕಾರ ನಡೆಸುವ ಪರೀಕ್ಷೆಗೆ ಕೂರಿಸಲಾಗುತ್ತದೆ. ಪರೀಕ್ಷಾರ್ಥಿಗಳು ಮಂಗಳೂರು ಅಥವಾ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ತಮ್ಮದೇ ಆದ “ಹ್ಯಾಮ್ ರೇಡಿಯೋ ಸ್ಟೇಷನ್” ಸ್ಥಾಪಿಸುವ ಪರವಾನಗಿ ಅರ್ಥಾತ್ ಲೈಸೆನ್ಸ್ ಗಳಿಸುವರು. ಆನಂತರ ಕಮರ್ಷಿಯಲ್ ಹ್ಯಾಮ್ ಟ್ರಾನ್ಸೀವರ್ ಅಥವಾ ಮನೆಯಲ್ಲೇ ತಯಾರಿತ ಹೋಮ್-ಬ್ರ್ಯೂ ಹ್ಯಾಮ್ ಸೆಟ್ ಬಳಸಿ ನಿಮ್ಮ ಮನೆಯ ಕೋಣೆಯಲ್ಲೇ ಹ್ಯಾಮ್ ಸ್ಟೇಷನ್ ಸ್ಥಾಪಿಸಿ ಜಗತ್ತಿನಾದ್ಯಂತ ಇರುವ ಹ್ಯಾಮ್ ಗಳ ಜೊತೆಯಲ್ಲಿ ಸಂವಹನ ನಡೆಸಬಹುದು.

ನಿಮ್ಮ ಈ ಪರವಾನಗಿಯೊಂದಿಗೆ ನಿಮ್ಮದೇ ಆದ “ಕಾಲ್ ಸೈನ್” ಅಥವಾ “ಸಂಕೇತ ನಾಮ” ದೊರೆಯುತ್ತದೆ. ಹ್ಯಾಮ್ ಜಗತ್ತಿನಲ್ಲಿ ನಿಮ್ಮನ್ನು ಹೆಸರಿನಿಂದ ಯಾರೂ ಗುರುತಿಸುವುದಿಲ್ಲ. ಬದಲಾಗಿ ವಿಶಿಷ್ಠ “ಕಾಲ್ ಸೈನ್”ನೊಂದಿಗೆ ನಿಮ್ಮನ್ನು ಗುರುತಿಸುವರು. ಉದಾಹರಣೆಗೆ, ”ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್”ನ ಕಾಲ್ ಸೈನ್ “VU2SHV“. ಇಲ್ಲಿ VU2 ಭಾರತದ ಸಂಕೇತ ಹಾಗೂ ಉಳಿದ ಅಕ್ಷರಗಳು ನಿಮ್ಮ ಹೆಸರಿಗೆ ಸಂಬಂಧಿಸಿದ್ದು. ನಮ್ಮ “ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್” ಸ್ಥಾಪಿಸಿದ ಕೀರ್ತಿ ಶಿವಮೊಗ್ಗ ಜಿಲ್ಲೆಯ ಫೌಂಡ್ರಿ ಉದ್ಯಮದ ಪಿತಾಮಹರಲ್ಲೊಬ್ಬರಾದ ದಿವಂಗತ ಶ್ರೀ ಹೆಚ್.ಎನ್. ಗುಂಡೂರಾಯರಿಗೆ ಸಲ್ಲುತ್ತದೆ. ಶ್ರೀಯುತರ ಕಾಲ್-ಸೈನ್ “VU2HVG“.

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಹ್ಯಾಮ್‍ಗಳಿದ್ದಾರೆ. ಇವರಲ್ಲಿ ಅಸಂಖ್ಯ ಮಂದಿ ಸೆಲೆಬ್ರಿಟಿಗಳಿದ್ದಾರೆ. ಈ ಯಾವ ಹ್ಯಾಮ್ ಆಪರೇಟರ್ ಸಹಾ ಪ್ರೇಮಾಲಾಪನೆ, ಹಾಡು, ವ್ಯಾಪಾರ, ರಾಜಕೀಯ, ಅನೈತಿಕ ಚಟುವಟಿಕೆಗಳಿಗಾಗಿ ಈ ಹವ್ಯಾಸವನ್ನು ಬಳಸಿಕೊಳ್ಳುವಂತಿಲ್ಲ. ಆದರೆ, ಹವ್ಯಾಸಗಳ ಬಗ್ಗೆ, ವಿಜ್ಞಾನ – ತಂತ್ರಜ್ಞಾನಗಳ ಬಗ್ಗೆ ಗಂಟೆಗಟ್ಟಲೆ ಹರಟಬಹುದು. ಬಿಡುವಿನ ವೇಳೆಯಲ್ಲಂತೂ ಇದೊಂದು ಅದ್ಭುತ ಹವ್ಯಾಸವಾಗಬಲ್ಲುದು.
 
ಎಲ್ಲಾ ಹ್ಯಾಮ್ ಗಳೂ ತಮ್ಮದೇ ಆದ ವಿಶಿಷ್ಠ ಧಾಟಿಯಲ್ಲಿ ಮಾತನಡುವುದರಲ್ಲಿ ಸಿದ್ಧಹಸ್ತರು. ಹಾಗೆಯೇ ಸಂಭಾಷಣೆಯ ವೇಳೆಯಲ್ಲಿ ಬಳಸುವ ವೈವಿಧ್ಯಮಯ “Q-Code”ಗಳೆಂಬ ಸಂಕೇತಪದಗಳೇ ಇದ್ದು ಇವುಗಳನ್ನು ಕೇಳುವುದೇಚೆನ್ನ. ಹ್ಯಾಮ್ ಗಳು ದೂರದೇಶಗಳಲ್ಲಿ ನೆಲೆಸಿರುವ ಹ್ಯಾಮ್‍ಗಳನ್ನು ಸಂಪರ್ಕಿಸಿದಾಗ ಆ ಹೊಸ ಸ್ನೇಹಿತರ ರೇಡಿಯೋ ಸಿಗ್ನಲ್ ಗಳ ಕುರಿತ ತಾಂತ್ರಿಕ ಮಾಹಿತಿಯನ್ನು ಅವರಿಗೆ ರವಾನಿಸಿ ಅವರಿಂದ ವಿಶಿಷ್ಠ ರೂಪದಲ್ಲಿ ಪ್ರಿಂಟ್ ಹಾಕಲ್ಪಟ್ಟ “QSL Card“ ಗಳಿಸುವ ಪರಿಪಾಠವೇ ಇದೆ.

ಹ್ಯಾಮ್ ಗಳಲ್ಲಿ ಎಲ್ಲ ಗಂಡಸರೂ “ಓಲ್ಡ್ ಮ್ಯಾನ್” ಅಥವಾ ಸಂಕ್ಷಿಪ್ತವಾಗಿ “ಓ.ಎಂ.” ಎಂದೇ ಕರೆಯಲ್ಪಡುತ್ತಾರೆ. ಹಾಗೆಯೇ ಎಲ್ಲ ಮಹಿಳೆಯರೂ “ಯಂಗ್ ಲೇಡಿ” ಅಥವಾ ಸಂಕ್ಸಿಪ್ತವಾಗಿ “ವೈ.ಎಲ್.” ಎಂದೇ ಕರೆಯಲ್ಪಡುತ್ತಾರೆ.
ಇಲ್ಲಿ “QSL” ಎಂದರೆ ನಿಮ್ಮ ಸ್ಥಳ ಯಾವುದು ಎಂದೂ, “QRM” ಎಂದರೆ ಸಿಗ್ನಲ್ ನಲ್ಲಿ ಅಡಚಣೆ ಎಂದೂ, “73” ಅಂದರೆ ಅಭಿನಂದನೆ ಅಥವಾ ಟಾಟಾ ಎಂದೇ ಅರ್ಥ. ಹ್ಯಾಮ್ ಗಳ ಸಂಭಾಷಣೆಯೇ ರೋಮಾಂಚಕಾರಿ.
 
ಹ್ಯಾಮ್ ಹವ್ಯಾಸದ ಬಗ್ಗೆ ವಿವರಿಸುವಾಗ ಇನ್ನೊಂದು ವಿಶೇಷ ವಿಷಯವನ್ನು ಪ್ರಸ್ತಾಪಿಸದೇ ಇದ್ದರೆ ತಪ್ಪಾದೀತು. ಅದೆಂದರೆ “ಹ್ಯಾಮ್ ಹವ್ಯಾಸಿಗಳಿಗಿರುವ ಸಾಮಾಜಿಕ ಕಳಕಳಿ, ಅದೂ ವಿಶೇಷ ಸಂದರ್ಭಗಳ ವೇಳೆಯಲ್ಲಿ ತುರ್ತು ಸಂಪರ್ಕ ಏರ್ಪಡಿಸುವಲ್ಲಿ ಅವರ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ”.
 
ಅದು “ಮೋರ್ವಿ ದುರಂತ”ವಿರಬಹುದು, “ಗುಜರಾತ ಅಥವಾ ಮೆಕ್ಸಿಕೋ ಭೂಕಂಪ”ವಿರಬಹುದು ಇಲ್ಲವೇ “ಕೊಂಕಣ ರೈಲು ಮಾರ್ಗದ ಮತ್ಸ್ಯಗಂಧಾ ರೈಲು ಅಪಘಾತ”ವಿರಬಹುದು. ತಕ್ಷಣವೇ ತಮ್ಮ “ಹ್ಯಾಮ್ ರೇಡಿಯೋ ಸೆಟ್, ಬ್ಯಾಟರಿಗಳ ಸಹಿತ ಸ್ಥಳದಲ್ಲೇ ಬೀಡುಬಿಟ್ಟು ಪ್ರತಿಕ್ಷಣದ ಸಾವು-ನೋವುಗಳ ಮಾಹಿತಿಯನ್ನು ಹೊಜಗತ್ತಿಗೆ ತಲುಪಿಸಿದ್ದೇ ಹ್ಯಾಮ್ ಗಳು”. ಅರ್ಧ ಶತಮಾನದ ಹಿಂದೆ ಮೆಕ್ಸಿಕೋ ದೇಶದಲ್ಲಿ ಭೀಕರ ಭೂಕಂಪ ಘಟಿಸಿ ಎಲ್ಲ ಸಂಪರ್ಕವೂ ನಾಶವಾದಾಗ “ಅಯ್ಯೋ, ಮೆಕ್ಸಿಕೋ ನಗರದಲ್ಲಿ ಕಟ್ಟಡಗಳು ಇಸ್ಪೀಟೆಲೆಗಳಂತೆ ಉದುರುತ್ತಿವೆ” ಎನ್ನುತ್ತಾ ಹೊರಜಗತ್ತಿಗೆ ತಿಳಿಸಿದ್ದೇ ಒಬ್ಬ ಹ್ಯಾಮ್.
 
ಫಾರೆಸ್ಟ್, ಮಿಲಿಟರಿ, ಪೋಲೀಸ್, ಕೋಸ್ಟ್ ಗಾರ್ಡ್, ಹ್ಯಾಮ್, ಸಿಟಿಜ಼್‌ನ್ ಬ್ಯಾಂಡ್ (ಸಿಬಿ), ಇತ್ಯಾದಿ... ಗಳಿಗಾಗಿ ಪ್ರತ್ಯೇಕ ವೈರ್‍ಲೆಸ್ ಕಮ್ಯೂನಿಕೇಷನ್ ಬ್ಯಾಂಡ್‍ಗಳೇ ಇದ್ದು, ಒಬ್ಬರ ಬ್ಯಾಂಡ್ ನಲ್ಲಿ ಬೇರೊಬ್ಬರು ಸಂಪರ್ಕ ಸಾಧಿಸುವ ಅಧಿಕಾರ ಇರುವುದಿಲ್ಲ. ಅಕಸ್ಮಾತ್ ಹಾಗೇನಾದರೂ ಬೇರೊಬ್ಬರು ಸಂಪರ್ಕಿಸಿದಲ್ಲಿ ಅದನ್ನು ಕ್ರಿಮಿನಲ್ ಆಪಾದನೆಯಾಗಿಯೇ ಪರಿಗಣಿಸಲಾಗುವುದು. ಆದರೂ, ಅನಿವಾರ್ಯ ಸಂದರ್ಭಗಳಲ್ಲಿ “ಹ್ಯಾಮ್‍ಗಳೇನಾದರೂ ಈ ಬೇರೆ ಬ್ಯಾಂಡ್ ಗಳಲ್ಲಿ ಅತಿಕ್ರಮಿಸಿ ಯಾವುದೇ ತುರ್ತು ಮಾಹಿತಿ ನೀಡಿದಲ್ಲಿ ಎಲ್ಲ ಸೇನೆಗಳೂ ಅ ಮಾಹಿತಿಗೆ ಕೂಡಲೇ ಸ್ಪಂದಿಸಿ ಕಾರ್ಯಾಚರಣೆ ನಡೆಸುತ್ತವೆ”. ಇದಕ್ಕೆ ಇದುವರೆಗೂ ಯಾವ ಹ್ಯಾಮ್ ಆಪರೇಟರನೂ ಯಾವುದೇ ಸುಳ್ಳು ಸುದ್ಧಿ ಪ್ರಚಾರ ಮಾಡಿದ ಉದಾಹರಣೆ ಒಂದೂ ಇಲ್ಲ. ಆದ್ದರಿಂದಲೇ, “ಹ್ಯಾಮ್”ಗಳೆಂದರೆ ವಿವಿಧ ದೇಶಗಳ ಸೇನೆಗಳವರಿಗೆ ತುಂಬಾ ಗೌರವ, ಅಚ್ಚುಮೆಚ್ಚು.

ಯಾರಿಗಾದರೂ ತಾವೂ ಹ್ಯಾಮ್ ಆಪರೇಟರ್ ಆಗಬೇಕೆಂಬ ಆಸಕ್ತಿ ಇದ್ದಲ್ಲಿ “ಶಿವಮೊಗ್ಗ ಅಮೆಚ್ಯೂರ್ ರೇಡಿಯೋ ಕ್ಲಬ್”ನ ಕಾರ್ಯದರ್ಶಿ ಶ್ರೀ ರಾಜೇಶ್ (ಮೊಬೈಲ್ : +91 98456 79549) ರವರನ್ನು ಸಂಪರ್ಕಿಸಬಹುದು. 

ಲೇಖಕ : ಸತೀಶ್ ನಾಯಕ್, ಶಿವಮೊಗ್ಗ

Saturday, April 25, 2020

ಭಾರತದಲ್ಲಿ ಗೋತ್ರ ಪದ್ಧತಿ

ಭಾರತದಲ್ಲಿ ಗೋತ್ರ ಪದ್ಧತಿ

ಭಾರತದಲ್ಲಿ ಅನೇಕ ಸಮುದಾಯಗಳಲ್ಲಿ ಗೋತ್ರ ಪದ್ಧತಿ ಇದೆ. ಗೋತ್ರ ಪದ್ಧತಿ ಅನುಸರಿಸುವ ಈ ಸಮುದಾಯಗಳ ಜನರ ಹತ್ತಿರ ಗೋತ್ರ ಅಂದರೇನು ಎಂದು ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಬಹಳಷ್ಟು ಹಿರಿಯರಿಗೇ ಗೊತ್ತಿಲ್ಲ ಎಂದ ಮೇಲೆ ಇನ್ನು ಕಿರಿಯರಿಗೆ ಹೇಗೆ ಗೊತ್ತಿರಬೇಕು?

ಈ ಕುರಿತು ಅಧ್ಯಯನ ಮಾಡಿದ ಮಹಾವ್ಯಕ್ತಿಯೊಬ್ಬರು (ಅವರ ಹೆಸರು ಉಲ್ಲೇಖಿಸಲು ನಾನು ಅವರ ಅನುಮತಿ ಪಡೆದಿಲ್ಲ. ಆದ್ದರಿಂದ ಅವರ ಹೆಸರನ್ನು ಇಲ್ಲಿ ನಮೂದಿಸುತ್ತಿಲ್ಲ) ಹೇಳಿದ್ದರ ತಾತ್ಪರ್ಯವನ್ನು ಇಲ್ಲಿ ಬರೆಯುತ್ತಿದ್ದೇನೆ.

ಒಬ್ಬ ವ್ಯಕ್ತಿಯು ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡವಳಿಕೆ ಮುಂತಾದವುಗಳ ಮೂಲಕ ದೀರ್ಘ ಕಾಲ ತಪಸ್ಸು (ದೇಹ-ಮನಸ್ಸು-ಬುದ್ಧಿಗಳ ಶುದ್ಧೀಕರಣ) ಮಾಡಿದರೆ ಆತ ಋಷಿ ಎನಿಸಿಕೊಳ್ಳುತ್ತಾನೆ. ತಪಸ್ಸು ಕಠಿಣವಾಗುತ್ತ, ದೀರ್ಘವಾಗುತ್ತ ಹೋದಹಾಗೆ ಆತ ಔನ್ನತ್ಯದ ವಿವಿಧ ಮಜಲುಗಳನ್ನು ತಲುಪುತ್ತಾಹೋಗುತ್ತಾನೆ.
ಋಷಿ, ರಾಜರ್ಷಿ, ಮಹರ್ಷಿ ಇತ್ಯಾದಿ ಹಂತಗಳನ್ನು ದಾಟುತ್ತಾನೆ. ಈ ರೀತಿ ಕಠೋರ ತಪಸ್ಸಿನ ಕೊಟ್ಟಕೊನೆಯ ಹಂತ ಎಂದರೆ ಬ್ರಹ್ಮರ್ಷಿತ್ವ. ಯಾರು ಬ್ರಹ್ಮರ್ಷಿ ಪದವಿಯನ್ನು ಗಳಿಸಿಕೊಳ್ಳುತ್ತಾನೋ, ಆತ ಶುದ್ಧೀಕರಣ ಪ್ರಕ್ರಿಯೆಯ ಕೊನೆಯ ಸ್ಥಿತಿತಲುಪಿದ್ದಾನೆ, ಇನ್ನು ಶುದ್ಧಗೊಳ್ಳಲು ಏನೂ ಉಳಿದಿಲ್ಲ ಎಂದರ್ಥ.
ಋಷಿಗಳೆಂದರೆ ಸಂನ್ಯಾಸಿಗಳಲ್ಲ. ಅವರು ಸಾಮಾನ್ಯವಾಗಿ ಗೃಹಸ್ಥರೇ ಆಗಿರುತ್ತಾರೆ. ಇಂಥ ಬ್ರಹ್ಮರ್ಷಿಯ ಮಗನೂ ಬ್ರಹ್ಮರ್ಷಿಯಾದರೆ, ಆ ಮಗನ ಮಗನೂ ಬ್ರಹ್ಮರ್ಷಿಯಾದರೆ, ಈ ರೀತಿ ಒಬ್ಬರ ಬಳಿಕ ಒಬ್ಬರಂತೆ ಆ ಕುಟುಂಬದಲ್ಲಿ ಏಳು ತಲೆಮಾರುಗಳ ತನಕ ಬ್ರಹ್ಮರ್ಷಿಗಳಾದರೆ ಮೊದಲನೆಯ ಬ್ರಹ್ಮರ್ಷಿಯ ಹೆಸರಿನಲ್ಲಿ ಗೋತ್ರ ನಿರ್ಮಾಣವಾಗುತ್ತದೆ. ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಆಂಗೀರಸ, ಕಶ್ಯಪ, ಗೌತಮ, ಭಾರದ್ವಾಜ ಮುಂತಾದವರು ಗೋತ್ರ ಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.
ಇಲ್ಲಿ ಇನ್ನೊಂದು ಸೂಕ್ಷ್ಮವೂ ಕುತೂಹಲಕಾರಿಯೂ ಆಗಿರುವ ಸಂಗತಿಯೊಂದಿದೆ. ಒಬ್ಬರ ಬಳಿಕ ಒಬ್ಬರಂತೆ ಏಳು ಜನ ಬ್ರಹ್ಮರ್ಷಿಗಳಾದುದರಿಂದ ಆ ವಂಶವೇ ಶುದ್ದತೆಯ ಪರಿಪೂರ್ಣತೆಯನ್ನು ತಲುಪಿದೆ ಎಂದರ್ಥ. ಆ ಗೋತ್ರದಲ್ಲಿ ಹುಟ್ಟಿದವರೆಲ್ಲ ತಮ್ಮ ವಂಶವಾಹಿನಿಗಳಲ್ಲಿ ತಮ್ಮ ಪೂರ್ವಜರ ಶುದ್ಧತೆಯನ್ನು ಪಡೆದುಕೊಂಡು ಬಂದಿದ್ದಾರೆಂದು ನಮ್ಮ ಪರಂಪರೆ ಭಾವಿಸುತ್ತದೆ. ಆಧುನಿಕ ವೈದ್ಯವಿಜ್ನಾನ ಕೂಡ ಡಿ.ಎನ್.ಎ. ಹೆಸರಿನ ವರ್ಣತಂತುಗಳು ವ್ಯಕ್ತಿಯ ಪೂರ್ವಜರ ಗುಣವಿಶೇಷಗಳನ್ನು ಹೊತ್ತುತಂದಿರುತ್ತವೆ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತದೆ. ಅಲ್ಲಿಗೆ ಅದು ಗೋತ್ರತತ್ವ ಏನು ಹೇಳುತ್ತದೆಯೋ ಅದನ್ನೇ ಹೇಳಿದಂತಾಯಿತು.

ಗೋತ್ರ ಅಂದರೇನು?

ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ:
  • ಗೋತ್ರ ಎಂದರೇನು?
  • ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ?
  • ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ?
  • ಏಕೆ ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ಮಗಳಲ್ಲ?
  • ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ?
ಪ್ರಥಮತವಾಗಿ "ಗೋತ್ರ" ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು 'ಗೋ' ಅಂದರೆ ಹಸು, 'ತ್ರಾಹಿ' ಅಂದರೆ ಕೊಟ್ಟಿಗೆ ಎಂದರ್ಥ. ಗೋತ್ರವು 'ಹಸುವಿನ ಕೊಟ್ಟಿಗೆ' ಎಂದಾಗಿದ್ದು, ಪುರುಷ ತಳಿಯ ವಾಹಕವಾಗಿದೆ. ಹಾಗಾದರೆ ನಾವೆಲ್ಲರೂ ನಮ್ಮ ಮೂಲಪುರುಷ ಯಾವುದೋ ಋಷಿ ಅಥವಾ ಅಷ್ಟಋಷಿಗಳಲ್ಲೊಬ್ಬರ ಅನುಯಾಯಿ ಆಗಿದ್ದು, ನಮ್ಮ ಗೋತ್ರವು ಆ ಮೂಲ ಪುರುಷ ಋಷಿಯ ಹೆಸರಿನಿಂದ ಗುರುತಿಸಿ ಕೊಳ್ಳುವೆವು. (ಸಪ್ತ ಋಷಿಗಳು: ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಆಂಗೀರಸ, ಜಮದಗ್ನಿ, ಕಶ್ಯಪ, ಗೌತಮ ಮತ್ತು ಭಾರಧ್ವಾಜ)

"ಸಪ್ತಧಾತು ಸಮಪಿಂಡಂ ಸಮಯೋನಿ ಸಮುದ್ಭವಂ ಆತ್ಮಜೀವ ಸಮಾಯುಕ್ತಂ ಸೃಷ್ಟಿಕಾರ್ಯಂ ನಿರಂತರಂ" ತಂದೆ ಹಾಗೂ ತಾಯಿಯಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ, ತಾಯಿ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದ ಬಂದ ಪ್ರಾಣ, ಪ್ರಜ್ಞೆ, ಆತ್ಮಾಂಶಗಳು ಸಂಯುಕ್ತವಾಗಿ ತಂದೆಯ ಇಪ್ಪತ್ತ ಮೂರು, ತಾಯಿಯ ಇಪ್ಪತ್ತಮೂರು ವರ್ಣತಂತುಗಳ ಕೂಡುವಿಕೆಯಿಂದ ಒಂದೇ ಒಂದು ಮೂಲ ಜೀವಕೋಶ ರಚನೆಯಾಗಿ ಅದೇ ಕೋಶ ವಿಭಜನೆಗೊಂಡು ಪ್ರತಿ ಶಿಶುವು ಜನ್ಮ ತಾಳುವುದು.

ತಂದೆಯ ಇಪ್ಪತ್ತ ಮೂರು 'XY' ತಾಯಿಯ ಇಪ್ಪತ್ತ ಮೂರು 'XX' ವರ್ಣತಂತುಗಳ ಗುಣಾಂಶ ಹಾಗೂ ವಂಶವಾಹಿನಿಯಾಗಿ ಬರುತ್ತದೆ. ಮಗುವಿಗೆ ತಾಯಿಯ ಗುಣಾಂಶ 'X' ಸಾಮಾನ್ಯವಾಗಿದ್ದು, ತಂದೆಯ 'Y' ಗುಣಾಂಶವು ತಾಯಿಯ 'XX' ಗುಣಾಂಶವನ್ನು ಮೀರಿ ತಂದೆಯಿಂದ 'Y' ಬರುವುದರಿಂದ ಮಗಳಿಗೆ ತಂದೆಯ 'Y' ಬರಲು ಅಸಾಧ್ಯವಾಗಿದ್ದು, ತಂದೆಯಿಂದ ಗೋತ್ರವು ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಮಾತ್ರ ಮುಂದುವರಿಯುವುದು. ಮೇಲೆ ಹೆಸರಿಸಿದ ಎಂಟು ಋಷಿಗಳಲ್ಲಿ ಎಂಟು ವಿಭಿನ್ನ 'Y' ಗುಣಾಂಶದ ವರ್ಣತಂತುಗಳಿದ್ದು, ಆ ತಳಿಮೂಲಾಂಶದ ವಂಶವಾಹಿನಿ ನಾವಾಗಿದ್ದೇವೆ ಹಾಗೂ ನಾವು ಯಾವ ಮೂಲ ಪುರುಷನ ಸಂತತಿ ಎಂಬುದು ತಿಳಿಯುತ್ತದೆ.
ವಿವಾಹ ವಿಚಾರದಲ್ಲಿ ನಾವು ಸ್ವಗೋತ್ರರಲ್ಲಿ ನೆಂಟಸ್ತಿಕೆ ಮಾಡಿದಲ್ಲಿ 'Y' ಗುಣಾಂಶದ ವರ್ಣತಂತುಗಳು ಭವಿಷ್ಯದಲ್ಲಿ ಮುಂದುವರೆಯಲಾಗದೆ ನಿಃಶಕ್ತ, ನಿತ್ರಾಣ, ಬೆಳವಣಿಗೆ ಕುಂಠಿತ, ರಕ್ತ ಸಂಬಂಧಿ ಕಾಯಿಲೆ, ಪುತ್ರವಿಹೀನ, ಸಂತಾನ ಹೀನ- ಇತ್ಯಾದಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹಾಗಾಗಿ ಗೋತ್ರವು 'Y' ಗುಣಾಂಶದ ವರ್ಣತಂತುಗಳ ರಕ್ಷಕನಾಗಿದೆ.

ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು.

ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.
ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲವಾದ್ದರಿಂದ, ಪ್ರಸಿದ್ಧರಾದ ಮೂರು ಜನ, ಅಥವಾ ಐದು ಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು. ತ್ರಯಾ ಋಷಿಯ, ಪಂಚಾಋಷಿಯ ಶಬ್ದದಿಂದ ಕರೆಯುತ್ತೇವೆ. ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.

ಸೂತ್ರ ಎಂದರೆ

ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ ಸೂತ್ರಗಳಿವೆ. ಇವುಗಳು ಇಂತಿವೆ: 
  1. ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು. 
  2. ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು. 
  3. ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.
ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ - ಗೃಹ್ಯಸೂತ್ರದ ಪ್ರಕಾರ ಷೋಡಶಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು.

ತ್ರಯಾಋಷಯ ಅಥವಾ ಪಂಚಾಋಷಯ ಪ್ರವರಾನ್ವಿತ . . ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು? ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು - ಎಂದು ಹೇಳುವುದು.
ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರುಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆಯ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ, ಸೂತ್ರ ಎನ್ನುವುದು.

ಈ ಗೋತ್ರ,ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. "ಗೋತ್ರ, ಪ್ರವರ,ನಿರ್ಣಯ" ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ, ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶಾತ್ಮಕವಾಗಿ ಬರೆಯಬೇಕು.

ಗೋತ್ರ,ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು. 
  1. ಭೃಗು
  2. ಆಂಗೀರಸ
  3. ಮರೀಚಿ
  4. ಅತ್ರಿ
  5. ಪುಲಹ
  6. ಪೌಲಸ್ತ್ಯ
  7. ವಸಿಷ್ಠ
ಎಂಬುದಾಗಿ ಏಳುಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದ 
  1. ಭೃಗು
  2. ಆಂಗೀರಸ
  3. ಮರೀಚಿ
  4. ಅತ್ರಿ 
ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.

ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:

೧. ಜಮದಗ್ನಿ - ಭೃಗು ವಂಶಸ್ಥರು (೧)
೨. ಭರದ್ವಾಜ - ಆಂಗೀರಸ ವಂಶಸ್ಥರು (೨)
೩. ಗೌತಮ - ಮೇಲಿನಂತೆ
೪. ಕಾಶ್ಯಪ - ಮರೀಚಿ ವಂಶಸ್ಥರು (೩)
೫. ವಸಿಷ್ಠ - ಮೇಲಿನಂತೆ
೬. ಅಗಸ್ತ್ಯ - ಮೇಲಿನಂತೆ
೭. ಅತ್ರಿ - ಅತ್ರಿಯೇ ಮೂಲಪುರುಷರು ಅಥವಾ ಅವರ ವಂಶಸ್ಥರು (೪)
೮. ವಿಶ್ವಾಮಿತ್ರ - ಅತ್ರಿ ಋಷಿಯ ವಂಶಸ್ಥರು

ಈ ರೀತಿ ನಾಲ್ಕುಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.

ಮೇಲೆ ತಿಳಿಸಿದ ಎಂಟುಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತುಋಷಿವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣಕುಲಕ್ಕೆ ಸೇರಿದವರಾದರು. ಎಂದರೆ ಭೃಗುವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-

೧. ವೀತಹವ್ಯ - ಭೃಗು ವಂಶವನ್ನವಲಂಬಿಸಿದವರು
೨. ಮೈತ್ರೇಯ - ಮೇಲಿನಂತೆ
೩, ಶುನಕ - ಮೇಲಿನಂತೆ
೪, ವೇನ - ಮೇಲಿನಂತೆ
೫. ರಥೀತರ - ಆಂಗೀರಸ ಗೋತ್ರವನ್ನವಲಂಬಿಸಿದವರು
೬. ಮುದ್ಗಲ - ಮೇಲಿನಂತೆ
೭. ವಿಷ್ಣುವೃದ್ಧ - ಮೇಲಿನಂತೆ
೮. ಹಾರೀತ - ಮೇಲಿನಂತೆ
೯. ಕಣ್ವ - ಮೇಲಿನಂತೆ
೧೦.ಸಂಕೃತಿ -ಮೇಲಿನಂತೆ

ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ ೧೮ ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು

ಗಾಯತ್ರೀಮಂತ್ರ ಮತ್ತು ದೇವತೆ

ಗಾಯತ್ರೀ ದೇವಿ (ಸಾವಿತ್ರೀ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದಮಾತೆ ಎಂದು ಕರೆಯಲ್ಪಡುವ ಗಾಯತ್ರೀ ದೇವಿಯನ್ನು ಐದುಮುಖ ಮತ್ತು ಹತ್ತುಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ಯಜುರ್ವೇದಿಗಳು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀದೇವನಾದ ಸೂರ್ಯಾಂತರ್ಗತನಾದ ನಾರಾಯಣನನ್ನು ಎಲ್ಲರೂ ಸ್ವೀಕರಿಸಿ ಧ್ಯಾನಿಸುತ್ತಿದ್ದಾರೆ.

|| ಓಂ ಭೂರ್ಭುವಃಸ್ವಃ|
ತತ್ ಸವಿತುರ್ವರೇಣ್ಯಂ|
ಭರ್ಗೋ ದೇವಸ್ಯ ಧೀಮಹಿ|
ಧಿಯೋ ಯೋ ನಃ ಪ್ರಚೋದಯಾತ್ ||

ಪದಗಳ ಅರ್ಥ =
ಓಂ - ಓಂ
ಭೂಃ - ಭೂಮಿ
ಭುವಃ - ಅಂತರಿಕ್ಷ
ಸ್ವಃ - ಆಕಾಶ
ತತ್ - ಆ
ಸವಿತುಃ - ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
ವರೇಣ್ಯಂ - ಪೂಜಾರ್ಹವಾದ
ಭರ್ಗೋ - ತೇಜಸ್ಸನ್ನು
ದೇವಸ್ಯ - ದೇವನ
ಧೀಮಹಿ - ಧ್ಯಾನಿಸುತ್ತೇವೆ
ಧಿಯೋ - ಬುದ್ಧಿ, ವಿವೇಕಗಳನ್ನು
ಯೋ - ಅವನು
ನಃ - ನಮ್ಮೆಲ್ಲರಿಗೂ
ಪ್ರಚೋದಯಾತ್ - ಪ್ರಚೋದಿಸಲಿ

ಭಗವದ್ಗೀತೆಯು ಭಗವಂತನ ವಚನವು.
ಗಾಯತ್ರಿಯ ಮೊದಲ ಅಕ್ಷರ 'ಓಂ' ಅದು ಬ್ರಹ್ಮ ದೇವರಿಗೆ ಭಗವಂತನು ಕೊಟ್ಟ ಮೊದಲ ಉಪದೇಶ. ಹಾಗಾಗಿ ಇದರಲ್ಲಿ ಸಮನ್ವಯ ಮಾಡಬಹುದಾಗಿದೆ.

ತತ್ - ವ್ಯಾಪ್ತಿತ್ವ - ಎಲ್ಲ ಕಡೆ ವ್ಯಾಪಿಸಿದ್ದಾನೆ.
ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ ಪರಮಾತ್ಮನು ತನ್ನ ವಿಶ್ವರೂಪವನ್ನು ತೋರಿಸುವ ಮೂಲಕ ತನ್ನ ಗುಣಗಳ, ಕ್ರಿಯೆಗಳ ಹಾಗೂ ರೂಪಗಳ ವ್ಯಾಪ್ತಿಯನ್ನು ಅರ್ಜುನನಿಗೆ ತೋರಿಸಿದ್ದಾನೆ.

ಸವಿತುಃ - ಅವನು ಸೃಷ್ಟಿಕರ್ತಾ
ಭಗವಂತನು ತಾನು ಪ್ರಕೃತಿಯ ಮೂಲಕ ಸೃಷ್ಟಿಯನ್ನು ಮಾಡುತ್ತೇನೆ ಎನ್ನುವುದಾಗಿ 'ಮಯಾಧ್ಯಕ್ಷೇಣ ಪ್ರಕೃತಿ:' ಎನ್ನುವ ಕಡೆ ಹೇಳುತ್ತಾನೆ.

ವರೇಣ್ಯಂ - ಅವನು ಶ್ರೇಷ್ಠನು
ಗೀತೆಯಲ್ಲಿ 'ಮತ್ತಃ ಪರತರಂ ನಾಸ್ತಿ' ಎಂದು ನನಗಿಂತ ಉತ್ತಮನು ಯಾರೂ ಇಲ್ಲ ಎಂದು ಸ್ವಯಂ ಭಗವಂತನು ಹೇಳುತ್ತಾನೆ. ಹದಿನೈದನೇ ಅಧ್ಯಾಯದಲ್ಲಿ ತಾನು ಕ್ಷರ ಮತ್ತು ಅಕ್ಷರವನ್ನು ಮೀರಿದವನು ಮತ್ತು ತನ್ನನ್ನು ವೇದಗಳು ಪುರುಷೋತ್ತಮ ಎಂದು ಕರೆಯುತ್ತವೆ . ಹೀಗೆ ತಿಳಿಸಲಾಗಿದೆ.

ಭರ್ಗ: ಪ್ರಕಾಶಮಾನವಾಗಿದ್ದಾನೆ
ಸಾವಿರಾರು ಸೂರ್ಯರುಗಳು ಒಮ್ಮೆಲೇ ಉದಯಿಸಿದಾಗ ಆಗುವ ಬೆಳಕು ವಿಶ್ವರೂಪ ಕಾಲದಲ್ಲಿ ಆಯಿತು. ಅರ್ಜುನನಿಗೆ ದಿವ್ಯಚಕ್ಷುಸ್ಸನ್ನು ಕೊಟ್ಟು ವಿಶ್ವರೂಪವನ್ನು ತೋರಿಸಿದನು. ಮತ್ತೆ ವಿಶ್ವರೂಪದಲ್ಲಿ ಸಂಹಾರ ಚಿತ್ರಣೆ ಅಂದರೆ ಎಲ್ಲ ಬಾಂಧವರು ಪರಮಾತ್ಮನ ಬಾಯಿಯಲ್ಲಿ ಹೋಗಿ ಸಾಯುವಂತದ್ದು ಅರ್ಜುನನಿಗೆ ತೋರಿಸಿದ.

ದೇವಸ್ಯ : ಅವನು ಎಲ್ಲರಿಂದ ಸ್ತುತಿಸಲ್ಪಟ್ಟವನು, ಪ್ರೇರಣೆ ಮಾಡುವವನು
ಅರ್ಜುನನಿಗೆ ತನ್ನ ಕರ್ತವ್ಯದಲ್ಲಿ ಪ್ರೇರಣೆ ಮಾಡಿ ಕೌರವಸೇನೆಯನ್ನು ಗೆಲ್ಲುವಂತೆ ಮಾಡಿದನು. ವಿಶ್ವರೂಪದಲ್ಲಿ ಮಹರ್ಷಿಗಳೇ ಮೊದಲಾದವರು ಪರಮಾತ್ಮನನ್ನು ಸ್ತುತಿಸಿದರು.

ಧೀಮಹಿ : ಅವನು ಧ್ಯಾನಿಸಲ್ಪಡಬೇಕಾದವನು
ಎಂಟನೇ ಅಧ್ಯಾಯದಲ್ಲಿ ತಾನು ಎಲ್ಲರಿಂದಲೂ ಅಂತ್ಯಕಾಲದಲ್ಲಿ ಧ್ಯಾನಿಸಲ್ಪಡಬೇಕಾದವನು ಎಂದು ತಿಳಿಸುತ್ತಾನೆ.
ಧಿಯೋ ಯೋ ನ: ಪ್ರಚೋದಯಾತ್ : ಅವನು ನಮ್ಮನ್ನು ಸತ್ಕರ್ಮ/ಯೋಚನೆಗಳಲ್ಲಿ ತೊಡಗಿಸಲಿ ಎಂಬ ಭಾವವು.
--ಸರ್ವೇಸಜ್ಜನಾಃ ಸುಖಿನೋಭವಂತು (ವ್ಯಾಟ್ಸಪ್ ಕೃಪೆ)

ರಾಜೇಶ್ವರಿ. ಹುಲ್ಲೇನಹಳ್ಳಿ. ಕವನಗಳು

ಪ್ರಭಾವ

ಸಮಯವೇ ಇಲ್ಲವೆಂದು

ಸದಾ ಕೊರಗುತ್ತಿದ್ದ ಜನರಿಗೀಗ,

ಕಳೆಯಲಾಗುತ್ತಿಲ್ಲ ಸಮಯ

ಕೊರೊನಾ ನೀ ಬಂದಿರುವಾಗ!

ಸಾಕಿನ್ನು ಆಟ

ಹೇ ಕೊರೊನಾ ಇದೇ ನಿನ್ನ ಕೊಡುಗೇನಾ?

ಜೀವಗಳ ಕಬಳಿಸಿದೆ,ಅಹಮಿಕೆಯ ಕಳಚಿದೆ.

ಬಾಂಧವ್ಯಗಳ ಬೆಸೆದೆ, ಮನೆಯ ಮನೆಯಾಗಿಸಿದೆ.

ಸಾಕಿನ್ನು ನಿನಾ ಆಟ,ನೀ ಕಲಿಸಿದ ಪಾಠ!

ಹೇಳಿಬಿಡು ಬೇಗ ಟಾ ಟಾ.!

ಗುಮ್ಮ

ಹೇ ಕೊರೊನಾ ಏನೆಂದು ಕರೆಯಲಿ ನಾ ನಿನ್ನ?

ಅರೆಛಣದಿ ಮುಚ್ಚಿಬಿಟ್ಟೆಯಲ್ಲಾ

ಮದುವೆಯಾದಾಗಿನಿಂದ ಮುಚ್ಚಿಸಲಾಗದ

ನನ್ನವಳ ಈ ಬಾಯನ್ನ!

ಬಾಯಿಬೀಗ

ದೇವರಿಗೆ ಹರಕೆ ಹೊತ್ತು

ಹಾಕಿಸಿಕೊಳ್ಳುತ್ತಿದ್ದರು "ಬಾಯಿಬೀಗ"

ಜಾತ್ರೆ ಪರಿಷೆ ನಡೆಯುವಾಗ!

ಹಾಕಿಬಿಟ್ಟೆಯಾ ಕೊರೊನಾ ಸದ್ದಿಲ್ಲದೆ

ನೀನೀಗ ಎಲ್ಲರ ಬಾಯಿಗೆ ಬೀಗ!

ಕೊರೊನಾ

ಮನುಜನ ಅಹಮಿಗೆ,

ಇದ್ದಕ್ಕಿದ್ದಂತೆ ದೈವ ಕೊಟ್ಟ ಪೆಟ್ಟು.

ಗೋಜಲಿನ್ನೂ ಅದರ ಹುಟ್ಟಿನ ಗುಟ್ಟು!

ಛಣ ಛಣಕೂ ಏರುತಿದೆ ಸಹಸ್ರ ಪಟ್ಟು!