Friday, March 3, 2023

ಬೆಳಕಿಗೆ ಬಾರದ ಸ್ವಾತಂತ್ರ ಹೋರಾಟಗಾರ ತಡಗಣಿ ಶಿವಪ್ಪ : ಒಂದು ನೆನಪು

ಬೆಳಕಿಗೆ ಬಾರದ ಸ್ವಾತಂತ್ರ ಹೋರಾಟಗಾರ ತಡಗಣಿ ಶಿವಪ್ಪ : ಒಂದು ನೆನಪು



ಡಾ || ಟಿ ಎಸ್ ವಾಗೀಶ್
ಡಾ|| ಎಂ ಎಸ್ ಸಂಗೂರ್




ಅರ್ಪಣೆ


ತಡಗಣಿ ಶಿವಪ್ಪನವರ ಜೀವನ ಮೌಲ್ಯಗಳನ್ನು ಸಮರ್ಥವಾಗಿ ಅಳವಡಿಸಿಕೊಂಡು ನೊಂದವರ ಬಾಳಿನ ಬೆಳಕಾಗಿ ಬದುಕಿದ


ದಿ || ಪ್ರೇಮ ದೇವಸೂರು ಅವರಿಗೆ





ಲೇಖಕರ ಮಾತು


ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದ ನೆನಪಿನಲ್ಲಿ ಭಾರತ ಸರ್ಕಾರವು ಮಾರ್ಚ್, 2021 ರಿಂದ ಆಗಸ್ಟ್ 15, 2023ರ ವರೆಗೆ ‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಣೆಯನ್ನು ಘೋಷಿಸಿದೆ. ಸ್ವಾತಂತ್ರ್ಯಕ್ಕೋಸ್ಕರ ಪ್ರಾಣದ ಹಂಗು ತೊರೆದು ಹೋರಾಡಿದರೂ ತೆರೆಮರೆಯಲ್ಲಿಯೇ ಉಳಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಕೂಡ ಈ ಆಚರಣೆಯ ಉದ್ದೇಶಗಳಲ್ಲಿ ಒಂದು. ಇದಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರದ ‘ಆಜಾದಿ ಕಾ ಅಮೃತ ಮಹೋತ್ಸವ’ ಅಧಿಕೃತ ಪೋರ್ಟಲ್ ನಲ್ಲಿ ತೆರೆಮರೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಲಾಗಿದೆ. ಇದನ್ನು ಓದುವಾಗ ನಮ್ಮ ಶಿವಮೊಗ್ಗ ಭಾಗದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದೂ ‘ನೇಪತ್ಯದ ನಕ್ಷತ್ರ’ ವಾಗಿಯೇ ಉಳಿದ ತಡಗಣಿ ಶಿವಪ್ಪನವರ ಬಗ್ಗೆ ಅರಿವು ಮೂಡಿಸಬೇಕೆಂದು ನಮಗೆ ಅನ್ನಿಸಿತು. ಆದರೆ ಯಾವುದೇ ಪ್ರಚಾರ, ಸನ್ಮಾನಗಳಿಂದ ದೂರವೇ ಉಳಿದ ಶಿವಪ್ಪನವರ ಜೀವನದ ಬಗ್ಗೆ ಇಷ್ಟು ದೀರ್ಘಕಾಲದ ನಂತರ ಮಾಹಿತಿ ಸಂಗ್ರಹಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಆದರೂ ಅಂದಿನ ವಿಧಾನ ಪರಿಷತ್ತಿನ ಅಧ್ಯಕ್ಷರು, ಸ್ನೇಹಿತರೂ ಆದ ಶ್ರೀಯುತ ಕೆ ವಿ ನರಸಪ್ಪನವರ ಪತ್ರಗಳು, ಶಿರಾಳಕೊಪ್ಪದ ಪುರಸಭೆಯಲ್ಲಿ ಸಿಕ್ಕ ಕೆಲವು ಮಾಹಿತಿಗಳು ಹಾಗೂ ಸ್ನೇಹಿತರು-ಬಂಧುಗಳು ಕೊಟ್ಟ ಮಾಹಿತಿಯನ್ನು ಆಧರಿಸಿ ಶಿವಪ್ಪನವರ ಹೋರಾಟದ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಅಪೂರ್ಣವಾದ ಮಾಹಿತಿಯಿಂದ ಕೆಲವು ಘಟನೆಗಳನ್ನು ಇಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಓದುಗರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ, ಫೋಟೋಗಳು ಇದ್ದರೆ ಈ ಕಿರುಹೊತ್ತಿಗೆಯನ್ನು ಪರಿಷ್ಕರಿಸುವ ಆಲೋಚನೆ ಕೂಡ ಇದೆ.


ಈ ಲೇಖನದ ಬರಹಗಾರರಾದ ಡಾII ಟಿ ಎಸ್ ವಾಗೀಶ್ ಮತ್ತು ಡಾII ಎಂ ಎಸ್ ಸಂಗೂರ್ ಇವರುಗಳು ತಡಗಣಿ ಶಿವಪ್ಪನವರ ಪುತ್ರರು. ಈ ಲೇಖನಕ್ಕಾಗಿ ಕೆಲವು ಅಮೂಲ್ಯ ಮಾಹಿತಿಗಳನ್ನು ಕೊಟ್ಟ ಶಿವಪ್ಪನವರ ಮಕ್ಕಳಾದ ಶ್ರೀಮತಿ ಮಧು ಅಮರನಾಥ, ಶ್ರೀ ಟಿ ಎಸ್ ನಾಗರಾಜ್ ಮತ್ತು ಮೊಮ್ಮಕ್ಕಳಾದ ಶ್ರೀಮತಿ ಸುಜಾತ, ಗಿರೀಶ ದೇವಸೂರ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು. ಹಾಗೆಯೇ ಪ್ರಕಾಶ್ ಸಂಗೂರ್, ಪುಷ್ಪ ಮುರುಗೇಶ್ ಮತ್ತು ಕವಚೂರು ಸೋಮಶೇಖರ್ ಇವರಿಗೂ ಮಾಹಿತಿಗಾಗಿ ಅನಂತ ಧನ್ಯವಾದಗಳು.


ಡಾ|| ಟಿ. ಎಸ್. ವಾಗೀಶ್ ಡಾ|| ಟಿ ಎಸ್ ವಾಗೀಶ್

ಡಾ|| ಎಂ. ಎಸ್. ಸಂಗೂರ್ ಡಾ|| ಎಂ ಎಸ್ ಸಂಗೂರ್


ದಿನಾಂಕ 30.1.2023 ಶಿವಮೊಗ್ಗ




ಭಾರತ, ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಿ, 2022 - 23ರಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಅಮೃತ ಭಾರತಿಗೆ ಕನ್ನಡದಾರತಿ ಎಂಬಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಸ್ಮರಣೀಯ ಪಾತ್ರವನ್ನು ನೆನೆಯಲು ಇದು ಸುಸಂದರ್ಭ. ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಹಿರಿಯ ನಾಯಕರುಗಳಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ ವಲ್ಲಭ ಭಾಯಿ ಪಟೇಲ್, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ. ಇತರರು ಹಾಗೂ ರಾಜ್ಯಮಟ್ಟದಲ್ಲಿ ಕಿತ್ತೂರ ಚನ್ನಮ್ಮ ,ಕಾರ್ನಾಡ್ ಸದಾಶಿವರಾಯರು, ನಿಟ್ಟೂರ ಶ್ರೀನಿವಾಸರಾವ್, ಎನ್ ಎಸ್ ಹಾರ್ಡೀಕರ್ ಮತ್ತಿತರರು ಮುಂಚೂಣಿಯಲ್ಲಿದ್ದು ಪ್ರೇರಕ ಶಕ್ತಿಯಾಗಿದ್ದರು ಎಂಬುದು ನಿರ್ವಿವಾದ. ಆದರೆ ಸ್ವಾತಂತ್ರ್ಯದ ಕಿಚ್ಚು ದೇಶದ ಉದ್ದಗಲಕ್ಕೂ ಹರಡುತ್ತಾ ಬಂದಂತೆ ತಮ್ಮ ಸರ್ವಸ್ವವನ್ನು ತ್ಯಾಗಮಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನಸಾಮಾನ್ಯರ ಸೇವೆಯನ್ನು ಮರೆಯಲಾಗದು. ಕರ್ನಾಟಕದಲ್ಲಿ ಸಹ ಅನೇಕರು ಬೆಳಕಿಗೆ ಬಾರದೆ ಎಲೆಮರೆಯ ಕಾಯಿಯಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಅಪೂರ್ವ ಕೊಡುಗೆಯನ್ನು ನೀಡಿ, ಕಷ್ಟದ ಜೀವನ ಸಾಗಿಸಿ ನಮ್ಮಿಂದ ಮರೆಯಾಗಿದ್ದಾರೆ. ಇದು ಅಂತಹ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ತಡಗಣಿ ಶಿವಪ್ಪ (ಟಿ. ಎಸ್. ಶಿವಪ್ಪ ) ನವರ ಕಥೆ.


ಶಿವಪ್ಪನವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಡಗಣಿ ಎಂಬ ಗ್ರಾಮದಲ್ಲಿ. ಈಗಿನ ತಡಗಣಿ ಒಂದು ಕಾಲದಲ್ಲಿ ಶಿವಶರಣೆ ಅಕ್ಕಮಹಾದೇವಿ ಜನಿಸಿದ ಪುಣ್ಯ ಭೂಮಿ ಉಡುತಡಿಯ ಒಂದು ಭಾಗವಾಗಿತ್ತು. ತಡಗಣಿಯ ಒಂದು ರೈತಾಪಿ ಕುಟುಂಬದಲ್ಲಿ ಶಾಂತವೀರಪ್ಪ ಸಂಗೂರ್ ಮತ್ತು ಶಿವಲಿಂಗಮ್ಮ ಎಂಬ ದಂಪತಿಗಳಿಗೆ ಶಿವಪ್ಪನವರು ಎರಡನೆಯ ಮಗನಾಗಿ ಸಾವಿರ ಒಂಬೈನೂರ ಹದಿನಾರರಲ್ಲಿ ಹುಟ್ಟಿದರು. ಒಟ್ಟು ನಾಲ್ಕು ಹೆಣ್ಣು ಮತ್ತು ಮೂರು ಗಂಡು ಮಕ್ಕಳ ಒಂದು ದೊಡ್ಡ ಕುಟುಂಬವಾದರೂ ಶಿವಪ್ಪನವರು ಬಾಲ್ಯದಿಂದಲೇ ಒಬ್ಬ ಬುದ್ಧಿವಂತ ವಿದ್ಯಾರ್ಥಿಯಾಗಿ ಆಗಿನ ಕಾಲಕ್ಕೆ ಮೆಟ್ರಿಕ್ ಮುಗಿಸಿದರು. ನಂತರದಲ್ಲಿ ತಾಲೂಕು ಕಚೇರಿಯಲ್ಲಿ ಗುಮಾಸ್ತನ ಕೆಲಸ ಸಿಕ್ಕರೂ ಸ್ವಾಭಿಮಾನಕ್ಕೆ ಒಗ್ಗದ ಆ ಕೆಲಸವನ್ನು ಬಿಟ್ಟು ಶಿಕ್ಷಕ ವೃತ್ತಿಯನ್ನು ಸೇರಿಕೊಂಡರು. ನಂತರ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಪುಟ್ಟವ್ವನವರ ಜೊತೆ ವಿವಾಹವಾಯಿತು. ಉತ್ತಮ ಶಿಕ್ಷಕರಾಗಿ ಹೆಸರು ಮಾಡಿದ ಅವರು ನಂತರ ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಕರೆಗೆ ಓಗೊಟ್ಟು ಕೆಲಸಕ್ಕೆ ರಾಜೀನಾಮೆ ಕೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಭೂಗತರಾಗಿದ್ದುಕೊಂಡೇ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು, ವಿದ್ಯುತ್ ತಂತಿಗಳನ್ನು ಕೀಳುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಸ್ವಾತಂತ್ರ್ಯ ಹೋರಾಟದ ನಾಯಕರೊಂದಿಗೆ ಅವರ ಸಂಪರ್ಕದಿಂದ ಕೆಲದಿನಗಳಲ್ಲಿ ಈಸೂರು ಸಂಗ್ರಾಮ ಅವರನ್ನು ಕೈಬೀಸಿ ಕರೆಯಿತು.


ಆಗಸ್ಟ್ 9, 1942 - ಮಹಾತ್ಮ ಗಾಂಧಿಯವರ ‘ಭಾರತ ಬಿಟ್ಟು ತೊಲಗಿ’ ಘೋಷಣೆಯಿಂದ ಅಂದಿನ ಬ್ರಿಟಿಷ್ ಸರ್ಕಾರ ಭಾರತದ ಸ್ವಾತಂತ್ರ್ಯ ಚಳುವಳಿಯ ಹಿರಿಯ ನಾಯಕರನ್ನೆಲ್ಲ ಬಂಧಿಸಿತ್ತು.


ಸೆಪ್ಟೆಂಬರ್ 25, 1942 - ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಈಸೂರು ಎಂಬ ಪುಟ್ಟ ಹಳ್ಳಿಯೊಂದು ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು ಬ್ರಿಟಿಷ್ ಸರ್ಕಾರದ ಅಧಿಕಾರವನ್ನು ಧಿಕ್ಕರಿಸಿ ಹಳ್ಳಿಯನ್ನು ಸ್ವತಂತ್ರವೆಂದು ಘೋಷಿಸಿತು. ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂದು ಘೋಷಿಸಿ ಇಡೀ ಕರ್ನಾಟಕದಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊದಲ ಹಳ್ಳಿಯೆಂದು ಈಸೂರು ಖ್ಯಾತಿ ಪಡೆಯಿತು. ತಡಗಣಿ ಶಿವಪ್ಪನವರು ಈಸೂರಿನ ಮುಂದಾಳುಗಳಾದ ಸಾಹುಕಾರ್ ಬಸವಣ್ಣಪ್ಪ, ಹುಚ್ಚರಾಯಪ್ಪ ಮತ್ತಿತರರೊಂದಿಗೆ ಜೊತೆಗೂಡಿ ಸಭೆಗಳನ್ನು ನಡೆಸುವುದು, ಕರಪತ್ರಗಳನ್ನು ಹಂಚುವುದು ಇತ್ಯಾದಿ ಚಟುವಟಿಕೆಗಳಿಂದ ಸ್ವಾತಂತ್ರ್ಯ ಹೋರಾಟದ ಜಾಗೃತಿಯನ್ನು ಮೂಡಿಸತೊಡಗಿದರು. ಸೆಪ್ಟೆಂಬರ್ 28ರಂದು ನಡೆದ ಉಗ್ರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ತಾಲೂಕಿನ ಅಮಲ್ದಾರ್ ಮತ್ತು ಒಬ್ಬ ಪೊಲೀಸ್ ಅಧಿಕಾರಿಯ ಸಾವಿಗೆ ಕಾರಣವಾಯಿತು. ಇದರಿಂದ ಕೆರಳಿದ ಬ್ರಿಟಿಷ್ ಸರ್ಕಾರ ಸೈನ್ಯ ಮತ್ತು ಪೊಲೀಸ್ ಅನ್ನು ಕಳಿಸಿ ಜನರನ್ನ ಚಿತ್ರಹಿಂಸೆಗೆ ಗುರಿ ಮಾಡಿತು. ಆಗ ಕೆಲವು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ತಡಗಣಿ ಶಿವಪ್ಪನವರು ಕಾಡಿನೊಳಗೆ ಬಚ್ಚಿಟ್ಟುಕೊಂಡು ಭೂಗತರಾದರು. ಆದರೆ ನಂತರದಲ್ಲಿ ಸೆರೆಸಿಕ್ಕ ಈಸೂರಿನ 5 ಜನನಾಯಕರನ್ನು (ಕೆ. ಗುರಪ್ಪ. ಜಿ.ಮಲ್ಲಪ್ಪ, ಬಿ. ಹಾಲಪ್ಪ, ಸೂರ್ಯನಾರಾಯಣ ಆಚಾರ್, ಮತ್ತು ಗೌಡ್ರ ಶಂಕರಪ್ಪ) ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ್ದು ಮತ್ತು ಹದಿನೇಳು ಜನರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿದ್ದು ಈಗ ಇತಿಹಾಸ. ನಂತರ ಶಿವಪ್ಪನವರು ಶಿಕಾರಿಪುರ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹರಡಿಸುವ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.


ಹೀಗೆ ಭೂಗತ ಚಟುವಟಿಕೆಗಳನ್ನು ನಡೆಸುತ್ತಾ ಶಿವಪ್ಪನವರು ಒಮ್ಮೆ ಹಿರೇಕೆರೂರಿನಲ್ಲಿ ತಮ್ಮ ತಂಗಿ ಸರೋಜಮ್ಮನ ಮನೆಗೆ ಬಂದರು. ಅದು ಹೇಗೋ ಪೊಲೀಸರಿಗೆ ಸುಳಿವು ಸಿಕ್ಕು ಅವರನ್ನು ಹುಡುಕುತ್ತಾ ಮನೆಗೆ ಬಂದರು. ಮನೆಯಲ್ಲಿ ಯಾರಿದ್ದಾರೆ ಎಂದು ಪೊಲೀಸರು ವಿಚಾರಿಸಿದಾಗ ಸರೋಜಮ್ಮನವರು ಯಾರೂ ಇಲ್ಲ ಎಂದು ಉತ್ತರಿಸಿದರು. ನಮಗೆ ಮಾಹಿತಿಯಿದೆ ನಾವು ಮನೆಯನ್ನು ತಲಾಶ್ ಮಾಡಬೇಕೆಂದು ಪೋಲೀಸಿನವರು ಕೇಳಿದಾಗ ಬೂಟುಗಾಲಿನಲ್ಲಿರುವ ನಿಮ್ಮನ್ನು ಮನೆಯೊಳಗೆ ನಾನು ಕಾಲಿಡಲು ಬಿಡುವುದಿಲ್ಲ ಎಂದರು. ಆಗ ಪೋಲೀಸಿನವರು ಆಗಿನಕಾಲದ ಪೊಲೀಸ್ ಬೂಟುಗಳನ್ನು ತೆಗೆದು ಒಳ ಬರುವಷ್ಟರಲ್ಲೇ ಸಿಕ್ಕ ಎರಡು ನಿಮಿಷಗಳ ಸಮಯದಲ್ಲಿ ಮಿಂಚಿನಂತೆ ಕಾಂಪೌಂಡ್ ಹಾರಿ ಶಿವಪ್ಪನವರು ತಪ್ಪಿಸಿಕೊಂಡು ಪುನಃ ಭೂಗತರಾದರು.


ಆದರೆ ಬ್ರಿಟಿಷರ ಆಡಳಿತದಲ್ಲಿ ಇವರು ಭೂಗತರಾಗಿ ಬಹಳ ದಿನ ಮುಂದುವರಿಯಲು ಆಗಲಿಲ್ಲ. ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿ ಬ್ರಿಟಿಷರಿಗೆ ಸೆರೆಸಿಕ್ಕ ಇವರನ್ನು ಶಿವಮೊಗ್ಗ ಕಾರಾಗೃಹದಲ್ಲಿ, ನಂತರ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಟ್ಟು ಆರು ತಿಂಗಳ ಕಾಲ ಸೆರೆಮನೆಯಲ್ಲಿ ಇಟ್ಟಿದ್ದರು. ಜೈಲಿನಲ್ಲಿ ಸನ್ನಡತೆಗಾಗಿ ಬೇಗ ಬಿಡುಗಡೆಗೊಂಡ ಇವರು ಪುನಃ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಿಯಾಶೀಲರಾದರು. ಶ್ರೀಯುತರಾದ ಎಸ್ ನಿಜಲಿಂಗಪ್ಪನವರು, ಕೆ ವಿ ನರಸಪ್ಪನವರು, ಪಾಟೀಲ್ ಪುಟ್ಟಪ್ಪನವರು ಮುಂತಾದವರ ಒಡನಾಟದಲ್ಲಿ ಇವರ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇನ್ನೂ ಹೆಚ್ಚಾಗುತ್ತಾ ಹೋಯಿತು. 1947 ರಲ್ಲಿ ಮಹಾರಾಜರ ಆಳ್ವಿಕೆ ಕೊನೆಯಾಗಿ ಜನಪರ ಸರ್ಕಾರದ ರಚನೆಯಾಗಬೇಕೆಂದು ಒತ್ತಾಯಿಸಿ ನಡೆದ ಮೈಸೂರು ಚಲೋ ಚಳುವಳಿ ಯಲ್ಲಿ ಶಿವಪ್ಪನವರು ಸಕ್ರಿಯವಾಗಿ ಭಾಗವಹಿಸಿ ಮತ್ತೆ ಜೈಲು ಸೇರಿದರು. ಆದರೆ ಮೈಸೂರು ಚಲೋ ಚಳುವಳಿ ಅಂತ್ಯಗೊಂಡಾಗ ಬೇರೆಯವರ ಜೊತೆ ಇವರೂ ಬಿಡುಗಡೆಗೊಂಡರು.


ಆಗಸ್ಟ್ 15, 1947 ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಈ ಸಂಭ್ರಮವನ್ನು ಮೀರಿದ ಜವಾಬ್ದಾರಿ ಅವರನ್ನು ಕಾಯುತ್ತಿತ್ತು. ಇವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಂಸಾರವನ್ನು ಬಡತನದ ಕಷ್ಟಗಳ ನಡುವೆ ಇವರ ಶ್ರೀಮತಿ ಆದ ಪುಟ್ಟವ್ವನವರು ನಿಭಾಯಿಸುತ್ತಿದ್ದರು. ಅನುಕೂಲಸ್ಥ ಕುಟುಂಬದಿಂದ ಬಂದಿದ್ದರೂ ಅನಿರೀಕ್ಷಿತವಾಗಿ ಬಂದ ಬಡತನದ ಕಷ್ಟಗಳಿಗೆ ಎಂದೂ ಎದೆಗುಂದಲಿಲ್ಲ. ಯಾರ ಬಳಿಯೂ ಕೈಚಾಚದೆ ಧೈರ್ಯದಿಂದ ಅವರು ಕುಟುಂಬವನ್ನು ಮುನ್ನಡೆಸಿದರು. ಈಗ ಶಿವಪ್ಪನವರಿಗೆ ಸಂಸಾರದ ಜವಾಬ್ದಾರಿಯನ್ನು ಹೊರುವ ಕಾಲ ಬಂದಿತ್ತು. ತಡಗಣಿ ಶಿವಪ್ಪನವರು ಸ್ವಾತಂತ್ರ್ಯ ಹೋರಾಟದ ಉದಾತ್ತ ಗುರಿಯಷ್ಟೇ ಅಲ್ಲದೆ ಅನೇಕ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಇದು ಅವರ ಜೀವನದಲ್ಲಿ ನಂತರ ನಡೆದ ಅನೇಕ ಕೆಳಗಿನ ಘಟನೆಗಳಿಂದ ವ್ಯಕ್ತವಾಗುತ್ತದೆ.


ಧರ್ಮಪತ್ನಿ ಶ್ರೀಮತಿ ಪುಟ್ಟವ್ವನವರೊಂದಿಗೆ ತಡಗಣಿ ಶಿವಪ್ಪನವರು

ಶಿವಪ್ಪನವರ ಹಿರಿಯ ಮಗಳು ಪ್ರೇಮ ಶಾಲೆಯಲ್ಲಿ ಓದುತ್ತಿದ್ದಾಗ ನಡೆದ ಒಂದು ಘಟನೆ. ಆಗ ತುಂಬಾ ಬಡತನ. ಶಾಲಾ ಫೀ ತುಂಬಲು ಕಷ್ಟಪಡಬೇಕಾದ ದಿನಗಳು. ಶಿಕ್ಷಕರ ಒತ್ತಾಯದ ಮೇರೆಗೆ ಪ್ರೇಮ ಬಡ ವಿದ್ಯಾರ್ಥಿಗಳಿಗಾಗಿ ಇರುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಷಯ ಗೊತ್ತಾದಾಗ ಶಿವಪ್ಪನವರು “ಅದು ಯಾರೂ ದಿಕ್ಕಿಲ್ಲದ ಮಕ್ಕಳಿಗೆ ಸೇರಬೇಕಾದ ವಿದ್ಯಾರ್ಥಿವೇತನ. ನಿನಗೆ ಕಷ್ಟವಾದರೆ ಅದರ ಪರಿಹಾರದ ವ್ಯವಸ್ಥೆ ಮಾಡಲು ನಾನಿದ್ದೇನೆ” ಎಂದು ಅರ್ಜಿಯನ್ನು ವಾಪಸ್ ಕೊಡಿಸಿದರು. ಏನೇ ಕಷ್ಟ ಬಂದರು ಇನ್ನೊಬ್ಬರಲ್ಲಿ ಧನಸಹಾಯ ಕೇಳದೆ ಬಡತನದಲ್ಲಿಯೇ ಆತ್ಮಗೌರವವನ್ನು ಕಾಣಬೇಕು ಎಂದು ಅವರು ಹೇಳುತ್ತಿದ್ದರು.


**


ಅವರ ಇಬ್ಬರು ಹಿರಿಯ ಗಂಡು ಮಕ್ಕಳಾದ ಮೃತ್ಯುಂಜಯ ಸಂಗೂರ್ ಮತ್ತು ನಾಗರಾಜ್ ಅವರು ಮೆರಿಟ್ ವಿದ್ಯಾರ್ಥಿಗಳಾಗಿದ್ದರೂ ಸಾಲ ಮಾಡಿ ಉನ್ನತ ಶಿಕ್ಷಣವನ್ನು ಪೂರೈಸಿದರು. ಸ್ವಾತಂತ್ರ ಹೋರಾಟಗಾರರ ಮಕ್ಕಳಿಗೆ ಕೊಡುವ ಸ್ಕಾಲರ್ಶಿಪ್ ಗಳಿಗಾಗಿ ಎಂದೂ ಕೈಚಾಚಲಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಹಿರಿಯ ಮಗನಾದ ಮೃತ್ಯುಂಜಯ ಸಂಗೂರ್ ಮೆಡಿಕಲ್ ಓದುತ್ತಿದ್ದಾಗ ಯಾವ ಕಾರಣಕ್ಕೂ ರಾಜಕೀಯ ಸಂತ್ರಸ್ತರ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಕೂಡದು ಎಂದು ಅವರು ಬರೆದ ಪತ್ರವನ್ನು ಡಾII ಸಂಗೂರ್ ಅವರು ಇಂದಿಗೂ ಜೋಪಾನವಾಗಿ ಇಟ್ಟಿದ್ದಾರೆ.


ಸ್ವಾತಂತ್ರ್ಯಹೋರಾಟಗಾರರ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬಾರದೆಂದು ಮೃತ್ಯುಂಜಯ ಸಂಗೂರ್ ಗೆ ಶಿವಪ್ಪನವರು 1964 ರಲ್ಲಿ ಬರೆದ ಪೋಸ್ಟ್ ಕಾರ್ಡ್

**


ಒತ್ತಾಯಪೂರ್ವಕವಾಗಿ ಜನರೇ ಖರ್ಚು ಹಾಕಿಕೊಂಡು ಇವರನ್ನು ಚುನಾವಣೆಯಲ್ಲಿ ನಿಲ್ಲಿಸಿದ ಮೇಲೆ 1959 ಮತ್ತು 1960 ರಲ್ಲಿ ಇವರು ಶಿರಾಳಕೊಪ್ಪದ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಧ್ಯಕ್ಷರಾಗಿ ಹಾಗೂ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಆಪ್ತರಾಗಿ ಇವರು ಊರಿನಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಆಗಲೂ ಸಹ ತಾವು ನಂಬಿದ ಆದರ್ಶ ಮತ್ತು ಸಿದ್ದಾಂತಗಳನ್ನು ಬಿಡಲಿಲ್ಲ. ಊರಲ್ಲಿ ಒಂದು ಚಿತ್ರಮಂದಿರವನ್ನು ಕಟ್ಟಲು ಮುನಿಸಿಪಾಲಿಟಿಯ ಒಪ್ಪಿಗೆಗಾಗಿ ಅಧ್ಯಕ್ಷರಿಗೆ ಅರ್ಜಿ ಬಂದಿತ್ತು. ಚಿತ್ರಮಂದಿರ ಕಟ್ಟಿಸಲು ಉದ್ದೇಶಿಸಿದ್ದ ಜಾಗ ಗದ್ದೆಗಳು ಇದ್ದ ಜಾಗವಾಗಿತ್ತು. ಆದ್ದರಿಂದ ಗದ್ದೆಗಳನ್ನು ಹಾಳು ಮಾಡಿ ಚಿತ್ರಮಂದಿರವನ್ನು ಕಟ್ಟಲು ಒಪ್ಪಿಗೆ ನೀಡಲಿಲ್ಲ. ಆದರೂ ಆ ಮಹನೀಯರು ರಾಜಕೀಯ ಪ್ರಭಾವ ಬಳಸಿ ಅದೇ ಜಾಗದಲ್ಲಿ ಚಿತ್ರಮಂದಿರವನ್ನು ಕಟ್ಟಿಯೇ ಬಿಟ್ಟರು.ಇದರಿಂದ ನೊಂದ ಅವರು ತಮ್ಮ ಕೊನೆಗಾಲದವರೆಗೂ ಆ ಚಿತ್ರಮಂದಿರಕ್ಕೆ ಕಾಲೇ ಇಡಲಿಲ್ಲ.


**


ಆಗ ಊರಿನ ಗಡಿ ಪ್ರವೇಶಿಸುವಾಗ ಗಡಿಯ ಸುಂಕದ ಕಟ್ಟೆಯಲ್ಲಿ ಸುಂಕ ಪಾವತಿಸ ಬೇಕಾಗುತಿತ್ತು. ಶಿವಪ್ಪನವರ ಅಣ್ಣ ತಮ್ಮಂದಿರು ಪಕ್ಕದ ಹಳ್ಳಿ ತಡಗಣಿಯಲ್ಲಿ ವಾಸಿಸುತ್ತಿದ್ದರು. ಅದು ತಮ್ಮನ ಮದುವೆಯ ಸಂದರ್ಭ. ಆ ದಿನ ಮನೆಯವರೆಲ್ಲಾ ಚಕ್ಕಡಿ ಗಾಡಿಯಲ್ಲಿ ತಡಗಣಿ ಇಂದ ಶಿರಾಳಕೊಪ್ಪಕ್ಕೆ ಹೋಗುತ್ತಿದ್ದಾಗ ಗಡಿಯ ಸುಂಕದ ಕಟ್ಟೆಯಲ್ಲಿ ಇದ್ದ ಸುಂಕ ವಸೂಲಿಕಾರರು ಸುಂಕ ತೆಗೆದುಕೊಳ್ಳದೇ ಹಾಗೇ ಹೋಗಲು ಬಿಟ್ಟರು.ಆ ಗಾಡಿಯಲ್ಲೇ ಇದ್ದ ಶಿವಪ್ಪನವರು ಕೋಪಗೊಂಡು ಏಕೆ ಸುಂಕ ವಸೂಲಿ ಮಾಡಲಿಲ್ಲ, ಹೀಗೇ ದಿನಕ್ಕೆ ಎಷ್ಟು ಜನರನ್ನು ಬಿಟ್ಟು ಕಳಿಸುತ್ತೀರಿ ಎಂದು ಗದರಿಸಿದರು.ಪಾಪ ಸುಂಕ ವಸೂಲಿಯವರು ಇವರ ಕಾಲನ್ನು ಹಿಡಿದುಕೊಂಡು “ತಪ್ಪಾಯಿತು ಸ್ವಾಮೀ...ಅಧ್ಯಕ್ಷರ ಗಾಡಿ ಎಂದು ಹಾಗೇ ಬಿಟ್ಟೆವು..ಮತ್ತೆಂದೂ ಈ ರೀತಿ ಬಿಡುವುದಿಲ್ಲ” ಎಂದು ಕ್ಷಮಾಪಣೆ ಕೇಳಿದ್ದರಂತೆ.


**


ಶಿರಾಳಕೊಪ್ಪದಲ್ಲಿ ತಡಗಣಿ ಶಿವಪ್ಪನವರ ಮನೆ ರಾಜಕೀಯ ಚರ್ಚೆ, ವಿಶ್ಲೇಷಣೆಗಳ ಕೇಂದ್ರಬಿಂದುವಾಗಿತ್ತು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಕೆ ವಿ ನರಸಪ್ಪನವರು, ವಿಧಾನಸಭಾ ಸದಸ್ಯರಾದ ತಾಳಗುಂದ ವೀರಪ್ಪನವರು, ನಾಡೋಜ ಪಾಟೀಲ್ ಪುಟ್ಟಪ್ಪನವರು, ಕರ್ನಾಟಕ ಸರ್ವೋದಯ, ಭೂದಾನ ಚಳುವಳಿಯ ಮುಖಂಡರು ಹಾಗೂ ವಿಧಾನಸಭಾ ಸದಸ್ಯರೂ ಆದ ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪ ಗೌಡರು ಹೀಗೆ ಅನೇಕ ಗಣ್ಯ ವ್ಯಕ್ತಿಗಳು ರಾಜಕೀಯ ಚರ್ಚೆ ಮತ್ತು ವಿಮರ್ಶೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಎಲ್ಲರೊಂದಿಗೆ ಊಟಮಾಡುತ್ತಾ ರಾಜಕೀಯ ಚರ್ಚೆ ಮಾಡುವ ಸಮಯದಲ್ಲಿ ಶಿವಪ್ಪ ನವರಿಗೆ ಜಾತಿ ಪ್ರಶ್ನೆ ಎಂದೂ ಅಡ್ಡ ಬರಲೇ ಇಲ್ಲ.


**


ತಮಗೆ ಪ್ರಿಯವಾದ ಖಾದಿ ಧಾರಣೆವ್ರತ ಮತ್ತು ಸತ್ಯನಿಷ್ಠೆಯನ್ನು ಕೊನೆಯವರೆಗೂ ಅವರು ಪಾಲಿಸಿಕೊಂಡು ಬಂದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಸರಕಾರದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಅನೇಕ ವಿಧದ ಸಹಾಯ ಸೌಲಭ್ಯಗಳನ್ನು ಕೊಡಲಾಯಿತು. ಆದರೆ ಅವರು ಆ ಎಲ್ಲಾ ಧನ ಸಹಾಯ, ಜಮೀನು ಮತ್ತು ಇತರ ಸೌಲಭ್ಯಗಳನ್ನು ದೄಢ ಮನಸ್ಸಿನಿಂದ ನಿರಾಕರಿಸಿದರು. ಸ್ವಾತಂತ್ರ್ಯ ಸೇನಾನಿಗಳಿಗೆ ಸರ್ಕಾರದಿಂದ ಕೊಡುವ ಗೌರವ ದ್ಯೋತಕ ತಾಮ್ರಪತ್ರವನ್ನು ಇವರು ಸ್ವೀಕರಿಸಲಿಲ್ಲ. ಆ ಸಮಯದಲ್ಲಿ ಹೆಚ್ಚು ಆದಾಯವಿಲ್ಲದೆ ಆರು ಹೆಣ್ಣು ಮತ್ತು ಮೂರು ಗಂಡು ಮಕ್ಕಳ ದೊಡ್ಡ ಸಂಸಾರ ನಡೆಸಲು ಕಷ್ಟ ಪಡುತ್ತಿದ್ದರು.ಸರಕಾರದ ಸೌಲಭ್ಯಗಳನ್ನು ಪಡೆದವರು ನಮ್ಮ ತಂದೆಗೂ ಇವುಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರೂ ಆಮಿಷಗಳಿಗೆ ಬಲಿಯಾಗದೇ ಎಲ್ಲವನ್ನೂ ವಿನಯಪೂರ್ವಕವಾಗಿ ನಿರಾಕರಿಸಿದರು."ಸರಕಾರದವರು ಮುಂದೆ ಇಂತಹ ಸಹಾಯಗಳನ್ನು ನೀಡುತ್ತಾರೆಂದು ನಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಿಲ್ಲ, ಅದು ದೇಶಕ್ಕಾಗಿ ನನ್ನ ಕರ್ತವ್ಯವಾಗಿತ್ತು " ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಬೇರೆಯವರ ಸಹಾಯಕ್ಕೆ ಎಂದೂ ಕೈಚಾಚದೆ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಾ ಆತ್ಮಗೌರವದಿಂದ ಬದುಕಿದರು.


ಸ್ವಾತಂತ್ರ ಚಳುವಳಿಯಲ್ಲಿ ಭೂಗತ ಹೋರಾಟದ ಬದುಕು, ದೊಡ್ಡ ಸಂಸಾರದ ಹೊಣೆ, ಬಡತನ ಇತ್ಯಾದಿ ಸಮಸ್ಯೆಗಳಿಂದಾಗಿ ಅವರ ಆರೋಗ್ಯ ಕ್ರಮೇಣ ಕ್ಷೀಣಿಸುತ್ತಾ ಬಂತು. ಅವರ ಕೊನೆಯ ದಿನಗಳಲ್ಲಿ ಅಸ್ತಮಾ ಪೀಡಿತರಾಗಿ ತುಂಬಾ ಸಮಸ್ಯೆಯನ್ನು ಎದುರಿಸಿದ್ದರೂ ಅವರ ಜೀವನ ಪ್ರೀತಿ, ಮನೋಧಾರ್ಡ್ಯ ಎಂದಿಗೂ ಕಡಿಮೆಯಾಗಲಿಲ್ಲ. ತಮ್ಮ ಕರ್ತವ್ಯವನ್ನು ಪೂರೈಸಿದ ತೃಪ್ತಿಯೊಂದಿಗೆ 1978 ರಲ್ಲಿ ತಮ್ಮ ಅರವತ್ತೆರಡನೇ ವಯಸ್ಸಿನಲ್ಲಿ ತಡಗಣಿ ಶಿವಪ್ಪನವರು ಇಹಲೋಕ ತ್ಯಜಿಸಿದರು.


ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಜಿಸಿ, ತಾನು ನಂಬಿದ ಮೌಲ್ಯಗಳನ್ನು ಕೊನೆಯವರೆಗೂ ಪಾಲಿಸಿದ ತಡಗಣಿ ಶಿವಪ್ಪನವರ ಅದಮ್ಯ ಚೇತನಕ್ಕೆ ಗೌರವಪೂರ್ಣ ವಂದನೆ.


~ ~ ~ ~ ~ ~ ~

1 comment:

  1. ತೆರೆಮರೆಯ ಇಂತಹ ಹೋರಾಟಗಾರರು ಈಗಲಾದರೂ ಬೆಳಕಿಗೆ ಬಂದಿದ್ದು ಸಂತೋಷ. ಧನ್ಯವಾದ

    ReplyDelete