Sunday, July 5, 2020

ಗುರುಪೂರ್ಣಿಮೆ : ಮಹಾಋಷಿ ವೇದವ್ಯಾಸರ ಅರ್ಥಪೂರ್ಣ ಜನ್ಮದಿನ


ಗುರುಪೂರ್ಣಿಮೆ

ಮಹಾಋಷಿ ವೇದವ್ಯಾಸರ ಅರ್ಥಪೂರ್ಣ ಜನ್ಮದಿನ 

ಇಂದು ೫ನೇ ಜುಲೈ ೨೦೨೦ರಂದು ಭಾನುವಾರ “ಗುರುಪೂರ್ಣಿಮೆ”ಯನ್ನು ಆಚರಿಸುತ್ತಿದ್ದೇವೆ. ಆದರೆ, ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೇ ಈಬಾರಿ ಗುರುಪೂರ್ಣ್ಮೆಯನ್ನು ಆಚರಿಸುತ್ತಿದ್ದಾರೆ.

ಕ್ಷೀರಸಮುದ್ರವಾಸಿಯಾದ ಶ್ರೀವೈಕುಂಠಾಧಿಪತಿ ಶ್ರೀಮನ್ನಾರಾಯಣನ ಅವತಾರವೇ ಎನಿಸಿದ ಮಹಾತಪಸ್ವಿ “ಮಹಾಋಷಿ ವೇದವ್ಯಾಸ”ರ ಜನ್ಮದಿನವನ್ನೇ “ಗುರುಪೂರ್ಣಿಮೆ”ಯ ದಿನವನ್ನಾಗಿ ಆಚರಿಸುವ ಪ್ರಾಚೀನ ವೈದಿಕ ಪದ್ಧತಿ ಇಂದಿಗೂ ಬಳಕೆಯಲ್ಲಿದ್ದು, ಜಗತ್ತಿನೆಲ್ಲೆಡೆ ಇರುವ ವಿವಿಧ ವೈದಿಕ ಮಠಗಳ ಮಠಾಧಿಪತಿಗಳು ಈ ಮಹತ್ವದ ದಿನದಂದು “ವ್ಯಾಸಪೂಜೆ” ನೆರವೇರಿಸಿ ತಮ್ಮ “ಚಾತುರ್ಮಾಸ್ಯ ವೃತ”ವನ್ನು ಆರಂಭಿಸುವುದು ಒಂದು ಪ್ರಾಚೀನ ಸಂಪ್ರದಾಯವೂ ಹೌದು.
ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅತ್ಯಂತ ಸಂಕೀರ್ಣ ಜೀವನಪದ್ಧತಿ ಎನಿಸಿರುವ ಹಿಂದೂ ವೈದಿಕ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಜೀವನಾದರ್ಶಗಳನ್ನು ನಾಲ್ಕು ಚತುರ್ವೇದಗಳನ್ನಾಗಿಯೂ, ನಾಲ್ಕು ಉಪವೇದಗಳನ್ನಾಗಿಯೂ ವಿಂಗಡಿಸಿದ್ದೇ ಆಲದೆ ೧೮ ಪುರಾಣಗಳನ್ನು ರಚಿಸಿ ನೀಡಿದ ಮಹಾತಪಸ್ವಿ – ಮಹಾಗುರು “ಮಹರ್ಷಿ ವೇದವ್ಯಾಸ”ರು. ಪ್ರಾಚೀನ ವೇದಕಾಲದಿಂದ ಹಿಡಿದು ಇಂದಿಗೂ ಪ್ರಸ್ತುತರಾದ ಶ್ರೀಗಳು ಜನನ - ಮರಣಗಳನ್ನು ಗೆದ್ದ ಅಮರರು. ಹಾಗಾಗಿ ಇಂದಿಗೂ ಭರತಖಂಡದ ಸಕಲ ವೈದಿಕ ವೃಂದದ ಆಂತರ್ಯದಲ್ಲಿ ಇರುವವರು ಇವರು.

ಈ ಮಹಾಮಹಿಮ ಮಹಾಋಷಿ ವೇದವ್ಯಾಸರ ಪೂರ್ಣನಾಮ “ಶ್ರೀಕೃಷ್ಣ ದ್ವೈಪಾಯನ ವ್ಯಾಸ” ಎಂದು. ಇವರ ಮೈಬಣ್ಣ ಕಪ್ಪಾಗಿರುವುದರಿಂದ “ಶ್ರೀಕೃಷ್ಣ” ಎಂದೂ, ಕಲ್ಪಿ ಎಂಬ “ದ್ವೀಪ”ದಲ್ಲಿ ಜನಿಸಿದ್ದರಿಂದ “ದ್ವೈಪಾಯನ” ಎಂದೂ, ಪವಿತ್ರ ಕ್ಷೇತ್ರ ಬದರೀಕಾಶ್ರಮದಲ್ಲಿ ವಾಸಿಸುತ್ತಿದ್ದುದರಿಂದಾಗಿ “ಬಾದರಾಯಣ”ರೆಂದೂ ಕರೆಯಲ್ಪಡುವ ಇವರು ವೇದಗಳನ್ನೂ - ಉಪವೇದಗಳನ್ನೂ ಜಗತ್ತಿಗೆ ನೀಡಿರುವುದರಿಂದ “ವೇದವ್ಯಾಸ”ರೆಂದೇ ಜಗತ್ತಿಗೆ ಚಿರಪರಿಚಿತರು.

ಇವರು ಮಹಾಋಷಿ ಪರಾಶರ ಹಾಗೂ ಸತ್ಯವತಿಯರ ಸುಪುತ್ರರು. ಇಡೀ ಮಹಾಭಾರತವನ್ನು ಕಣ್ಣಾರೆ ಕಂಡವರು. ಮಹಾಭಾರತಕ್ಕಿಂತ ಆದಿಯಲ್ಲಿಯೇ ಜನಿಸಿ, ಮಹಾಭಾರತದ ಕಾಲದುದ್ದಕ್ಕೂ ಪ್ರತಿಯೊಂದು ಘಟನೆಯನ್ನೂ ಕಣ್ಣಾರೆ ಕಂಡು, ಅಗತ್ಯವಿದ್ದಾಗಲೆಲ್ಲಾ ಪಾಂಡವ – ಕೌರವರಿಗೆ ಮಾರ್ಗದರ್ಶನ ನೀಡಿ, ಬುದ್ಧಿವಾದಗಳನ್ನು ಹೇಳಿ, ಸೃಷ್ಠಿಕರ್ತ ಬ್ರಹ್ಮದೇವನ ಆಶಯದಂತೆ ಇಡೀ ಮಹಾಭಾರತ ಮಹಾಕಾವ್ಯವನ್ನು ಭಗವಾನ್ ಗಣಪತಿಯಿಂದ ಬರೆಸಿ ಜಗತ್ತಿಗೆ ನೀಡಿದ ಮಹಾನುಭಾವರಿವರು.

“ವೇದವ್ಯಾಸ ಜಯಂತಿ”ಯೂ ಹಾಗೂ “ಗುರುಪೂರ್ಣಿಮೆ”ಯೂ ಆದ ಇಂದು ಈ ಮಹಾಮಹಿಮ ವೈದಿಕ ಗುರುಗಳು ಬಾಳಿ-ಬದುಕಿದ ಶ್ರೀಕ್ಷೇತ್ರಗಳನ್ನು ಒಮ್ಮೆ ಸಂದರ್ಶಿಸೋಣ ಬನ್ನಿ.

ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರಳೆನಿಸಿರುವ ಬದರೀನಾಥ – ಕೇದಾರನಾಥ ಯಾರಿಗೆ ಗೊತ್ತಿಲ್ಲ ಹೇಳಿ ? ಪವಿತ್ರ ಕ್ಷೇತ್ರ ಬದರೀನಾಥದಿಂದ ಸ್ವಲ್ಪವೇ ದೂರದಲ್ಲಿರುವ ಶ್ರೀಕ್ಷೇತ್ರ “ಆದಿ ಬದರಿ”. ಇಲ್ಲಿಯೇ ಸಮೀಪದಲ್ಲಿ ಅನೇಕಾನೇಕ ವೇದಕಾಲೀನ ಘಟನೆಗಳಿಗೆ ಸಾಕ್ಷೀಭೂತವಾದ ಪವಿತ್ರ ಸರಸ್ವತೀ ನದಿ ಹರಿಯುತ್ತಿದೆ. ಈ ಪ್ರದೇಶದಲ್ಲಿಯೇ “ವ್ಯಾಸಗುಹೆ” (ವ್ಯಾಸ ಗುಹಾ) ಎನ್ನುವ ಗುಹೆಯಿದ್ದು ಇಲ್ಲಿ ಪ್ರತಿದಿನವೂ ಮಹಾಋಷಿ ವೇದವ್ಯಾಸ ಪೂಜಿಸಲ್ಪಡುತ್ತಾರೆ. ಹೊರಗಿನಿಂದ ಆಧುನಿಕ ಮನೆಯಂತೆ ಕಂಡರೂ ಒಳಗಿನಿಂದ ಇಂದಿಗೂ ಗುಹಾರೂಪದಲ್ಲಿರುವ ಈ ಗುಹೆಯಲ್ಲಿಯೇ ಶ್ರೀ ವೇದವ್ಯಾಸರು ತಪಸ್ಸನ್ನಾಚರಿಸಿದ್ದರು ಎಂಬ ಐತಿಹ್ಯವಿದೆ.

ಬಹುಷಃ ಮಹಾಋಷಿ ವೇದವ್ಯಾಸರ ಸುಪುತ್ರರೂ, ಮಹಾಋಷಿಗಳೂ ಆಗಿದ್ದ ಶುಕಮುನಿಗಳೂ, ಇವರ ಪುನರವತಾರವೆಂದೇ ಪ್ರಸಿದ್ಧರಾದ ಪರಮಗುರು ಗೌಡಪಾದಾಚಾರ್ಯರೂ ಹಾಗೂ ಗೌಡಪಾದಾಚಾರ್ಯರ ಪ್ರಿಯಶಿಷ್ಯರೂ ಆದ ಗೋವಿಂದ ಭಗವತ್ಪಾದರೂ ಇದ್ದಿದ್ದು ಇದೇ ಗುಹೆಯಲ್ಲಿರಬಹುದು. ಇದು ನಿಜವಾದರೆ ಆದಿಗುರು ಶ್ರೀ ಶಂಕರಾಚಾರ್ಯರಿಗೆ ಅವರ ಗುರು ಶ್ರೀ ಗೋವಿಂದ ಭಗವತ್ಪಾದರು ಸನ್ಯಾಸದೀಕ್ಷೆ ನೀಡಿದ್ದೂ ಇದೇ ಗುಹೆಯಲ್ಲಿರಬಹುದೇನೋ ?

ಸರಿಸುಮಾರು ಇದೇ ಪ್ರದೇಶದಲ್ಲೇ ಇಂಥದ್ದೇ ಮತ್ತೊಂದು ಪ್ರಾಚೀನ ಗುಹೆಯಿದ್ದು ಇದನ್ನು “ಗಣೇಶ ಗುಹಾ” ಎಂದೇ ಕರೆಯುತ್ತಿದ್ದು, ಮಹಾಋಷಿ ವೇದವ್ಯಾಸರು ಭಗವಾನ್ ಗಣಪತಿಯಿಂದ ಮಹಾಭಾರತ ಮಹಾಕಾವ್ಯವನ್ನು ಬರೆಸಿದ್ದೂ ಇಲ್ಲೇ ಎಂಬ ಪ್ರಾಚೀನ ಐತಿಹ್ಯವಿದೆ.

ಉತ್ತರ ಭಾರತದ ವೇದಕಾಲೀನ ಸರಸ್ವತೀ ನದೀತೀರದಲ್ಲಿ ಬಾಳಿಬದುಕಿದ್ದ ವೈದಿಕ ಜನಾಂಗವೆನಿಸಿದ “ಗೌಡ ಸಾರಸ್ವತ ಬ್ರಾಹ್ಮಣ” (ಜಿ.ಎಸ್.ಬಿ.) ಸಮುದಾಯದವರ ಮೂರು ಗುರುಮಠಗಳಲ್ಲಿ ಒಂದಾದ ಪ್ರಾಚೀನ ಶ್ರೀಕಾಶೀಮಠದ ಆರಾಧ್ಯದೇವರೂ “ಶ್ರೀವ್ಯಾಸ ರಘುಪತಿ” ಎಂಬ ಹೆಸರಿನಲ್ಲಿರುವ “ಶ್ರೀ ವೇದವ್ಯಾಸ”ರೇ. ಈ ಕಾಶೀಮಠದ ಬ್ರಹ್ಮೈಕ್ಯ್ಯ ಶ್ರೀಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಶ್ರೀಪಾದಂಗಳವರು ಮಹಾಋಷಿ ವೇದವ್ಯಾಸರು ಜನ್ಮತಾಳಿದ “ಕಲ್ಪಿ” ಎಂಬ ದ್ವೀಪದಲ್ಲಿ “ವೇದವ್ಯಾಸ ಮಂದಿರ”ವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಶ್ರೀಶ್ರೀಗಳವರ ಶುಭಾಶೀರ್ವಾದಗಳಿಂದಾಗಿಯೇ ನಮ್ಮ ಶಿವಮೊಗ್ಗದ ಜಿ.ಎಸ್.ಕೆ.ಎಂ. ರಸ್ತೆಯಲ್ಲಿ ಶಿವಮೊಗ್ಗ ಗೌಡಸಾರಸ್ವತ ಸಮಾಜಕ್ಕೆ ಸೇರಿದ ಬೃಹತ್ ಶ್ರೀಲಕ್ಷ್ಮೀ ವೆಂಕಟರಮಣ ದೇವಮಂದಿರವೂ ನಿರ್ಮಾಣಗೊಂಡಿರುವುದು ಸ್ತುತ್ಯರ್ಹ.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ನಮ್ಮ ಹುಟ್ಟಿನಿಂದ ಇಂದಿನವರೆಗೂ ವಿವಿಧ ಹಂತಗಳಲ್ಲಿ ನಮ್ಮನ್ನು ಕೈಹಿಡಿದು ದಾಟಿಸಿದ ಎಲ್ಲಾ ಗುರುಗಳನ್ನೂ ನೆನೆಯುತ್ತಾ ಮಹಾಗುರು ಶ್ರೀ ವೇದವ್ಯಾಸರಿಂದಲೇ ರಚಿಸಲ್ಪಟ್ಟ ಶ್ರೀವಿಷ್ಣುಸಹಸ್ರನಾಮವನ್ನೋ ಅಥವಾ ಶ್ರೀಮದ್ ಭಗವದ್ಗೀತೆಯನ್ನೋ ಪಾರಾಯಣಮಾಡುವ ಮೂಲಕ ನಮ್ಮ ನಮ್ಮ ಮನೆಗಳಲ್ಲಿಯೇ “ವ್ಯಾಸಪೂರ್ಣಿಮೆ”ಯನ್ನು ಅರ್ಥಪೂರ್ಣವಾಗಿ ಆಚರಿಸೋಣ.

ಶ್ರೀವೇದವ್ಯಾಸರಾದಿಯಾಗಿ ಎಲ್ಲ ಶ್ರೀಗುರುಗಳೂ ನಿಮ್ಮೆಲ್ಲರನ್ನೂ ಹರಸಲಿ ಮತ್ತು ಕೊರೋನಾ ಮಹಾಮಾರಿಯ ಉಪಟಳದಿಂದ ಈ ಜಗತ್ತನ್ನು ಪಾರುಮಾಡಲಿ.

ಸಚಿತ್ರ ಲೇಖನ : ಸತೀಶ್ ನಾಯಕ್, ಶಿವಮೊಗ್ಗ